ಹಳಿಯಾಳ : ನಾವು ಬದುಕುವುದು ಸಾಧನೆಯಲ್ಲ. ಸಮಾಜಕ್ಕೆ ಆಸರೆಯಾಗಿ ಬದುಕುವುದು, ಇನ್ನೊಬ್ಬರ ಕಣ್ಣೀರನ್ನು ಒರೆಸುವುದು ನಿಜವಾದ ಜೀವನ ಸಾಧನೆ. ಪ್ರತಿಯೊಬ್ಬರು ಜೀವನದಲ್ಲಿ ಕೃತಜ್ಞತಾ ಭಾವನೆಯನ್ನು ಹೊಂದಿರಬೇಕಾಗುತ್ತದೆ. ಸಮಾಜವು ನಮಗೆ ಮಾಡಿದ ಉಪಕಾರವನ್ನು ಯಾವತ್ತು ಮರೆಯಬಾರದು. ಕೃತಜ್ಞತೆಯಿಂದ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಮರಾಠಾ ಸಮುದಾಯದವರು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವುದರ ಜೊತೆಗೆ ದುಶ್ಚಟಗಳಿಂದ ದೂರ ಉಳಿದು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಇನ್ನಷ್ಟು ಉನ್ನತಿ ಸಾಧಿಸಬೇಕಾಗಿದೆ. ಸಮಾಜದ ಹಿರಿಯರು ಶೈಕ್ಷಣಿಕ ಅಭಿವೃದ್ದಿಗಾಗಿ ಶ್ರಮಿಸಬೇಕಾಗಿದೆ ಎಂದು ಮರಾಠಾ ಜಗದ್ಗುರು ಬೆಂಗಳೂರು ಗವಿಪುರಂ ಆಶ್ರಮದ ಪೂಜ್ಯ ಶ್ರೀ ಮಂಜುನಾಥ ಭಾರತೀ ಮಹಾಸ್ವಾಮಿಜೀ ಹೇಳಿದರು.
ಅವರು ಪಟ್ಟಣದಲ್ಲಿ ಕೃತಜ್ಞ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಹಾಗೂ ಅಗ್ರೋಟೆಕ್ ಕಂಪನಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಇಂದಿನ ಆಧುನಿಕ ಯುಗದಲ್ಲಿ ವಿಶ್ವವು ವೇಗವಾಗಿ ಮುಂದೆ ಸಾಗುತ್ತಿದೆ. ಮರಾಠಾ ಸಮುದಾಯದವರು ಸಹ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಅವರನ್ನು ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಮರಾಠಾ ಸಮುದಾಯದ ಬಹುತೇಕ ಜನರು ಕೃಷಿಯನ್ನು ಅವಲಂಬಿಸಿದ್ದು, ಇದರಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಂಪನ್ನರಾಗಬೇಕಾಗಿದೆ ಎಂದರು.
ರೈತರು ಬೆಳೆದ ಬೆಳೆಗಳನ್ನು ಉತ್ತಮ ಬೆಲೆಗೆ ಪಡೆಯುವುದರೊಂದಿಗೆ ರೈತರಿಗೆ ಉತ್ತಮವಾದ ಬೀಜ, ಸಾವಯವ ಗೊಬ್ಬರ ಒದಗಿಸುವುದರ ಜೊತೆಗೆ ಹಣವನ್ನು ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸುವ ವ್ಯವಸ್ಥೆಯನ್ನು ಹೊಂದಿರುವ ಕೃತಜ್ಞ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ & ಅಗ್ರೋಟೆಕ್ ಕಂಪನಿಯ ಉದ್ದೇಶ ರೈತರ ಮತ್ತು ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯೇ ಆಗಿದೆ. ರೈತರು ಇದರ ಸಂಪೂರ್ಣ ಸದುಪಯೋಗ ಪಡೆಯಲು ಕರೆ ನೀಡಿ, ಸಹಕಾರಿ ಸಂಘಗಳಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಉನ್ನತಿ ಸಾಧಿಸಿ ಸಮಾಜದ ಅಭಿವೃದ್ಧಿಗಾಗಿ ಕೈ ಜೋಡಿಸಬೇಕೆಂದು ಕರೆ ನೀಡಿದರು.
ರೈತರು ಹಳೆಯ ಕಾಲದ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಕೈ ಬಿಟ್ಟು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅತ್ಯಂತ ಕಡಿಮೇ ಭೂಮಿಯಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯಬೇಕಾಗಿದೆ. ಈ ಸಂಸ್ಥೆಯಲ್ಲಿ ಹಲವಾರು ಸವಲತ್ತುಗಳನ್ನು ನೀಡಲಾಗಿದೆ. ರೈತರು ಕೃಷಿಯನ್ನು ಆದಷ್ಟು ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಳ್ಳಬೇಕಾಗಿದೆ ಎಂದರು. ರಾಘವ ನಾಕಾಡಿ ಮತ್ತು ರಾಜು ವಾಲೇಕರ ಅವರ ನೇತೃತ್ವದಲ್ಲಿ ಈ ಸಹಕಾರಿ ಸಂಘವನ್ನು ಆರಂಭಿಸುವ ಮೂಲಕ ಯುವ ಜನತೆಗೆ ಈ ಇಬ್ಬರು ಯುವಕರು ಮಾದರಿಯಾಗಿದ್ದಾರೆ. ಇಂತಹ ಸಹಕಾರಿ ಸಂಸ್ಥೆಗಳನ್ನು ತೆರೆಯುವ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಯುವ ಜನತೆ ಚಿಂತನೆ ನಡೆಸಬೇಕು ಎಂದರು. ರಾಘವ ನಾಕಾಡಿ ಮತ್ತು ರಾಜು ವಾಲೇಕರ ಹಾಗೂ ಈ ಸಂಘದ ಪದಾಧಿಕಾರಿಗಳ ಧೈರ್ಯ ಮತ್ತು ಸೇವಾ ಸಂಕಲ್ಪವನ್ನು ಮುಕ್ತ ಕಂಠದಿಂದ ಪೂಜ್ಯ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿಯವರು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ನಾರಾಯಣ ತೊಸೂರು ಅವರು ರೈತರ ಸಮಗ್ರ ಅಭಿವೃದ್ಧಿಗಾಗಿ ವಿನೂತನ ಕಲ್ಪನೆಯೊಂದಿಗೆ ಆರಂಭವಾದ ಕೃತಜ್ಞ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ & ಅಗ್ರೋಟೆಕ್ ಕಂಪನಿ ತಾಲೂಕಿನ ರೈತ ಬಾಂಧವರ ಆಶಾ ಕಿರಣವಾಗಲಿ ಎಂದು ಶುಭ ಹಾರೈಸಿದರು.
ಕೃತಜ್ಞ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ & ಅಗ್ರೋಟೆಕ್ ಕಂಪನಿಯ ಅಧ್ಯಕ್ಷರಾದ ರಾಘವ ನಾಕಾಡಿ ಅವರು ಕೃತಜ್ಞ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ & ಅಗ್ರೋಟೆಕ್ ಕಂಪನಿಯ ಉದ್ದೇಶ, ಆಶಯ ಹಾಗೂ ಕಾರ್ಯ ವೈಖರಿಯನ್ನು ವಿವರಿಸಿ, ನಮ್ಮ ಈ ಪ್ರಯತ್ನಕ್ಕೆ ಪೂಜ್ಯರ ಆಶೀರ್ವಾದ, ತಾಲೂಕಿನ ಹಿರಿಯರ ಆಶೀರ್ವಾದ, ಮಾರ್ಗದರ್ಶನ, ಸರ್ವರ ಸಹಕಾರ ಸದಾ ಇರಲಿ ಎಂದರು.
ಇದೇ ಸಂದರ್ಭದಲ್ಲಿ ಪೂಜ್ಯ ಮಂಜುನಾಥ ಭಾರತೀ ಸ್ವಾಮಿಜೀಯವರು ತಾಲೂಕಿನ ೧೦ ಕ್ಕೂ ಅಧಿಕ ಪ್ರಗತಿಪರ ರೈತರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಎಲ್.ಎಸ್.ಅರಶಿಣಗೇರಿ, ಗೋಶಾಲೆಯ ಬಿ.ಎಚ್. ಶಿವಪ್ಪ, ಮಾಜಿ ಸೈನಿಕರ ಸಂಘದ ಅಶೋಕ ಮಿರಾಶಿ, ವಿಠಲ ಜೂಂಜವಾಡ್ಡರ, ಬ್ಯಾಂಕಿನ ಅಧ್ಯಕ್ಷ ಉಪಾಧ್ಯಕ್ಷ ರಾಜು ವಾಲೇಕರ, ನಿರ್ದೇಶಕರಾದ ತಾನಾಜಿ ನಾಕಾಡಿ, ಭರತ ಮಿರಾಶಿ, ಶಾಂತಾರಾಮ ನಾಕಾಡಿ, ಬಸವರಾಜ ಶಿರೋಡರ, ಸೋಮನಿಂಗ ಗೌಡಾ. ರಫೀಕ್ ಮಕಾನಂದಾರ ಕಿರಣ ಕೊರ್ವೆಕರ, ರೇಣುಕಾ ಗೌಡ, ವಿದ್ಯಾ ಮೋಗ್ರಿ, ರುದ್ರಪ್ಪಾ ಮೇತ್ರಿ ಮತ್ತು ಸುನೀಲ್ ದೊಡ್ಡನಿ ಮತ್ತಿತರರು ಹಾಜರಿದ್ದರು.