ಸಿದ್ದಾಪುರ: ಕಳೆದ ಒಂದು ವಾರದಿಂದ ಸಾರ್ವಜನಿಕ ವಲಯದಲ್ಲಿ ವಿಶೇಷ ಚರ್ಚೆಗೆ ಗ್ರಾಸವಾಗಿದ್ದ ಸಂತೋಷ ನಾಯ್ಕ ಎನ್ನುವ ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬೀದರ್ನ ರೇಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾಗಿ ತಿಳಿದುಬಂದಿದೆ.
ತಾಲೂಕಿನ ಚನ್ಮಾವಿನ ಲೋಕೇಶ ನಾರಾಯಣ ನಾಯ್ಕ (26), ಮನೋಜ ಕೃಷ್ಣ ನಾಯ್ಕ(31),ಚರಣ್ ನಾರಾಯಣ ನಾಯ್ಕ(21) ಬಂಧಿತರಾದವರು.
ಕಳೆದ ವಾರ ಪಕ್ಕದ ತಾಲೂಕಾದ ಸೊರಬ ತಾಲೂಕಿನ ಚಿಕ್ಕತೌಡತ್ತಿಯ ಸಂತೋಷ ಗಣಪತಿ ನಾಯ್ಕ ಎನ್ನುವ ಯುವಕ ಸಿದ್ದಾಪುರ ತಾಲೂಕಿನ ಕಾಳೇನಳ್ಳಿ ಬಳಿ ಕಾಡಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್ನಲ್ಲಿ ತಾಲೂಕಿನ ಕೆಲವು ಯುವಕರ ಗುಂಪು ಹುಡುಗಿಯರನ್ನು ಆಮಿಷದಿಂದ ಸೆಳೆದುಕೊಂಡು ಲೈಂಗಿಕ ಕೃತ್ಯಕಾಗಿ ಬಳಸಿಕೊಳ್ಳುತ್ತಿದ್ದು ಅದನ್ನು ತಿಳಿದ ತನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ಕೆಲವು ಯುವಕರ ಹೆಸರು, ಮೊಬೈಲ್ ಸಂಖ್ಯೆ ತಿಳಿಸಿ ಆಡಿಯೋ ಮಾಡಿ ಹರಿಬಿಟ್ಟಿದ್ದ.
ಅವರಲ್ಲಿ ಚನ್ಮಾವಿನ ಚರಣ್, ಲೋಕೇಶ,ಮನೋಜ್ ಮತ್ತು ಇತರ ನಾಲ್ಕು ಯುವಕರು ಮನೆಗೆ ಬಂದು ಬೆದರಿಕೆ ಹಾಕಿದ್ದು ಇದರಿಂದ ಭಯಗೊಂಡ ತನ್ನ ಮಗ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಂತೋಷನ ತಂದೆ ಗಣಪತಿ ನಾಯ್ಕ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ಆರೋಪಿಗಳ ಬೆನ್ನಹತ್ತಿದ್ದ ಪೊಲೀಸರಿಗೆ ಅವರ ಜಾಡು ಹಿಡಿಯಲಾಗಿರಲಿಲ್ಲ. ಸಂತೋಷನ ಮನೆಗೆ ಹೋಗಿ ಬೆದರಿಕೆ ಹಾಕಿದ್ದ ಇಬ್ಬರು ಯುವಕರನ್ನು ಮೂರು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರೂ ಪ್ರಮುಖ ಆರೋಪಿಗಳು ಸಿಕ್ಕಿರಲಿಲ್ಲ. ಅಂತೂ ಒಂದು ವಾರದ ನಂತರ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎನ್ನಬಹುದು.