ದಿ.ಮೋಹನ ಶೆಟ್ಟಿ ಜನಾನುರಾಗಿ ಜನಪ್ರಿಯ ಶಾಸಕರಾಗಿದ್ದರು : ಜಗದೀಪ ತೆಂಗೇರಿ
ಹೊನ್ನಾವರ : ದಿನದ 24 ಗಂಟೆಯೂ ಸಮಾಜದ ಎಲ್ಲಾ ವರ್ಗದ ದುರ್ಬಲರು, ಬಡವರ ಬಗ್ಗೆ ಚಿಂತಿಸುತ್ತಿದ್ದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಮೋಹನ ಕೆ. ಶೆಟ್ಟಿಯವರು ಜನಾನುರಾಗಿ ಜನಪ್ರಿಯ ಶಾಸಕರಾಗಿದ್ದರು ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ ಎನ್.ತೆಂಗೇರಿ ಅಭಿಮಾನದಿಂದ ನುಡಿದರು.
ಅವರು ಮಂಗಳವಾರ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಅರ್ಪಣಾ ಕಾಂಪ್ಲೇಕ್ಸ್ನಲ್ಲಿ ದಿ. ಮೋಹನ ಶೆಟ್ಟಿ ಅಭಿಮಾನಿ ಬಳಗದಿಂದ ಏರ್ಪಡಿಸಿದ ಮಾಜಿ ಶಾಸಕ ದಿ. ಮೋಹನ ಶೆಟ್ಟಿಯವರ 73ನೇ ಜನ್ಮ ದಿನಾಚರಣೆಯನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 2000ನೇ ಇಸವಿಯಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಿ ಬಹುಮತದಿಂದ ಆಯ್ಕೆಯಾಗಿ ಪ್ರಥಮ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ತಮ್ಮ ನೇರ ನಡೆ ನುಡಿ, ಸರಳತೆ,ಶಿಸ್ತು ಮತ್ತು ನಿರಂತರ ಜನ ಸಂಪರ್ಕದ ಮೂಲಕ ತಾವೊಬ್ಬ ಯಶಸ್ವಿ ಜನ ನಾಯಕ ಅನ್ನುವುದನ್ನು ನಾಡಿನ ಜನತೆಗೆ ತೋರಿಸಿಕೊಟ್ಟರು. ಆ ಕಾರಣದಿಂದಾಗಿಯೇ 2005ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡರು, ಮೋಹನ ಶೆಟ್ಟರು ಮಾತ್ರ ಕುಮಟಾ ಕ್ಷೇತ್ರದಲ್ಲಿ ಪುನಃ ಎರಡನೇ ಬಾರಿ ರಾಜ್ಯ ವಿಧಾನ ಸಭೆಗೆ ಸ್ಪರ್ದಿಸಿ ಗೆದ್ದಿರುವುದು ಅವರ ಜನಪರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಣ್ಣಿಸಿದರು. ಇಂತಹ ಜನಪರ ವ್ಯಕ್ತಿತ್ವದ ಪಕ್ಷದ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರನ್ನು ಪ್ರೀತಿಸುವ ಇನ್ನೊಬ್ಬ ರಾಜಕಾರಣಿಯನ್ನು ನಾನೆಂದೂ ನನ್ನ ರಾಜಕೀಯ ಜೀವನದಲ್ಲಿ ಕಂಡಿಲ್ಲ ಎಂದು ಜಗದೀಪ ತೆಂಗೇರಿ ಹೇಳಿದರು.
ಹೊನ್ನಾವರ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ ಶಿವಪ್ಪ ಮೇಸ್ತ ಮಾತನಾಡಿ ದಿ.ಮೋಹನ ಶೆಟ್ಟಿಯವರು ನಿಜವಾಗಿಯೂ ಮಾನವೀಯ ಮೌಲ್ಯವನ್ನು ಮೈಗೂಡಿಸಿಕೊಂಡ ಒಬ್ಬ ಜನಪರ ನಾಯಕರಾಗಿದ್ದರು ಎಂದರು.ತನ್ನ ಕ್ಷೇತ್ರದ ಜನ ನೆಮ್ಮದಿಯಿಂದ ಬದುಕಬೇಕು ಎಂದು ಕನಸು ಕಂಡಿದ್ದ ಅವರು ಕ್ಷೇತ್ರದಲ್ಲಿ ಎಲ್ಲಿಯೇ ಆಗಲಿ ಯಾವುದೇ ಅಪಘಾತ, ಬೆಂಕಿ ದುರಂತ, ನೆರೆಹಂತಹ ಅವಘಡ ಸಂಭವಿಸಿದಾಗ ಸ್ವತಃ ಸ್ಥಳಕ್ಕೆ ಧಾವಿಸಿ,ಸರಕಾರದ ನೆರವು ಬರುವ ಪೂರ್ವದಲ್ಲಿಯೇ ತಮ್ಮ ಕಿಸೆಯಿಂದ ಹಣಕಾಸಿನ ನೆರವು ನೀಡಿ ಅವರ ಕಷ್ಠಕಾರ್ಪಣ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ನಾವೆಲ್ಲಾ ಕಣ್ಣಾರೆ ಕಂಡಿದ್ದೇವೆ ಎಂದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೇಶವ ಎಲ್.ಮೇಸ್ತ ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತ ಇವತ್ತು ನಮ್ಮ ಕ್ಷೇತ್ರದ ಶಾಸಕರಾಗಿ ದಿ. ಮೋಹನ ಶೆಟ್ಟಿಯಂತಹ ಜನಪರ ಕಾಳಜಿಯ ನಾಯಕರು ನಮ್ಮ ಪಕ್ಷದಲ್ಲಿ ಇರಬೇಕಿತ್ತು. ಅವರಂತಹ ಧೀಮಂತ ನಾಯಕರು ಇಲ್ಲದ ನೋವು ನಮ್ಮನ್ನು ಸದಾ ಕಾಡುತ್ತಿದೆ ಎಂದು ನೊಂದು ನುಡಿದರು.
ಕಾರ್ಯಕ್ರಮದಲ್ಲಿ ದಿ.ಮೋಹನ ಶೆಟ್ಟಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನಾಚರಣೆ ನಡೆಸಲಾಯಿತು. ನಂತರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಮೇಸ್ತ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಅಭಿಷೇಕ ತಾಂಡೇಲ್,ತಾಲೂಕು ಕೆ.ಡಿ.ಪಿ.ಸದಸ್ಯೆ ಜ್ಯೋತಿ ಮಹಾಲೆ, ಜಿಲ್ಲಾ ಕಾಂಗ್ರೆಸ್ ಸದಸ್ಯ ಹನೀಪ ಶೇಖ, ಕಾಂಗ್ರೆಸ್ ಪಕ್ಷದ ಮುಖಂಡರಾದ ಗಜಾನನ ನಾಯ್ಕ, ಸಂದೀಪ್ ಮೇಸ್ತ, ಗಣೇಶ ಮೇಸ್ತ, ಸುರೇಶ ರುಕ್ಕು ಮೇಸ್ತ, ಮಾದೇವ ನಾಯ್ಕ ಕರ್ಕಿ, ರಾಘು ಮೇಸ್ತ, ಶ್ರೀರಾಮ್ ಜಾದುಗಾರ, ಜಗದೀಶ ಮಹಾಲೆ, ಸವಿತಾ ನಾಯ್ಕ, ವೆಂಕಟೇಶ ಮೇಸ್ತ, ಜಯರಾಮ ಪ್ರಭು,ಗಣಪತಿ ಮೇಸ್ತ, ಜ್ಯೂಲಿಯಸ್ ಪರ್ನಾಂಡಿಸ್, ಮಂಜು ಮುಕ್ರಿ, ಫಾರೂಕ್ ಶೇಖ, ನವೀನ್ ಡಿಸೋಜಾ ಇನ್ನೂ ಹಲವಾರು ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.