ದಾಂಡೇಲಿ : ಜೂನ್.12 ರಂದು ನಗರದ ಐಪಿಎಂ ಹತ್ತಿರದ ಅರಣ್ಯ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಹಾಗೂ ವಿಶೇಷ ಚೇತನರಾಗಿರುವ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ರಾಬರಿ ಮಾಡಿದ್ದ ಆರೋಪಿಯನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಪಿಎಸ್ಐ ಮತ್ತು ಇಬ್ಬರು ಪೊಲೀಸರ ಮೇಲೆ ಕಲ್ಲು ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆಯನ್ನು ಒಡ್ಡಿದ್ದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪಿಎಸ್ಐ ಕಿರಣ್ ಪಾಟೀಲ್ ಫೈರಿಂಗ್ ಮಾಡಿದ ಘಟನೆ ಶನಿವಾರ ಸಂಜೆ ಸಮಯದಲ್ಲಿ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕುಳಗಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ವೃದ್ಧೆಯ ಮೇಲೆ ಅತ್ಯಾಚಾರ ಹೆಚ್ಚಾಗಿ ರಾಬರಿ ಮಾಡಿದ್ದ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಿದ್ದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ.ಎಂ ಹಾಗೂ ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ಮೂರು ತಂಡಗಳನ್ನು ರಚಿಸಿ ಆರೋಪಿಯ ಹುಡುಕಾಟವನ್ನು ನಡೆಸಲಾಗಿತ್ತು. ಈ ಕೃತ್ಯ ಎಸಗಿದ ಆರೋಪಿ ಫೈರೋಜ್ ಯಾಸೀನ ಯರಗಟ್ಟಿ ಈತನು ಕುಳಗಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ಇರುವ ಖಚಿತ ಮಾಹಿತಿಯನ್ನು ಪಡೆದ ಪಿಎಸ್ಐ ಕಿರಣ್ ಪಾಟೀಲ್ ಅವರ ತಂಡ ಅವನನ್ನು ಬಂಧಿಸಲು ಮುಂದಾಗಿತ್ತು.
ಕುಳಗಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ಇದ್ದ ಈತನನ್ನು ಬಂದಿಸಲು ಮುಂದಾಗುತ್ತಿದ್ದಂತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಒಡ್ಡಿ, ಕಲ್ಲು ಹಾಗೂ ಚಾಕುವಿನಿಂದ ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಮತ್ತು ಕೃಷ್ಣ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿದಾಗ ಪಿಎಸ್ಐ ಕಿರಣ್ ಪಾಟೀಲ್ ಅವರು ತಮ್ಮ ರಿವಾಲ್ವಾರ್ ನಿಂದ ಎರಡು ಸುತ್ತು ಗಾಳಿಯಲ್ಲಿ ಫೈಯರ್ ಮಾಡಿ ಆಪಾದಿತನಿಗೆ ಶರಣಾಗಲು ತಿಳಿಸಿದರು. ಆಪಾದಿತನು ಪುನಃ ಹಲ್ಲೆಗೆ ಮುಂದಾಗಿದ್ದನು. ಈ ಸಂದರ್ಭದಲ್ಲಿ ಪಿಎಸ್ಐ ಕಿರಣ್ ಪಾಟೀಲ್ ಅವರು ಆಪಾದಿತನ ಎಡ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಈ ಘಟನೆಯಲ್ಲಿ ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಮತ್ತು ಕೃಷ್ಣ ಅವರಿಗೆ ಗಾಯವಾಗಿದ್ದು, ಗಾಯಗೊಂಡ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪೊಲೀಸ್ ಫೈರಿಂಗ್ ನಿಂದ ಗಾಯಗೊಂಡ ಆರೋಪಿ ಫೈರೋಜ್ ಯಾಸಿನ್ ಯರಗಟ್ಟಿ ಈತನ ಎಡಗಾಲಿಗೆ ಗಾಯವಾಗಿದ್ದು ಈತನನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈತನ ಮೇಲೆ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟರ್ ಆಗಿರುತ್ತಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನ ಮೇಲೆ ನಗರ ಠಾಣೆಯಲ್ಲಿ ಮತ್ತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್ಐ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಭೇಟಿ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣಂ ಅವರು ಆರೋಗ್ಯವನ್ನು ವಿಚಾರಿಸಿ ಧೈರ್ಯವನ್ನು ತುಂಬಿ, ಸಾಹಸಿಕ ಕಾರ್ಯಕ್ಕೆ ಶ್ಲಾಘನೆ ವ್ಯಪ್ತಪಡಿಸಿದ್ದಾರೆ. ಇತ್ತ ಪೊಲೀಸ್ ಫೈರಿಂಗ್ ನಿಂದ ಗುಂಡು ತಗುಲಿ ಗಾಯಗೊಂಡ ಆರೋಪಿ ಫೈರೋಜ್ ಯಾಸಿನ್ ಯರಗಟ್ಟಿಯ ಆರೋಗ್ಯವನ್ನು ವಿಚಾರಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ಅವರು ಇಂದು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟನೆಯ ಸಂಪೂರ್ಣ ವಿವರಣೆಯನ್ನು ನೀಡಿದ್ದು. ಇದೊಂದು ಅಮಾನವೀಯ ಕೃತ್ಯವಾಗಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತ್ವರಿತ ಕ್ರಮವನ್ನು ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈತನಿಗೆ ಗಡಿಪಾರು ಆದೇಶವನ್ನು ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಜೈಪಾಲ್ ಪಾಟೀಲ್, ಜೋಯಿಡಾ ಸಿಪಿಐ ಚಂದ್ರಶೇಖರ ಹರಿಹರ, ಯಲ್ಲಾಪುರ ಸಿಪಿಐ ರಮೇಶ ಹಾನಾಪುರ, ಪಿಎಸ್ಐಗಳಾದ ಅಮೀನ್ ಅತ್ತಾರ, ಶಿವಾನಂದ ನಾವದಗಿ, ಜಗದೀಶ, ಬಸವರಾಜ ಮಬನೂರು, ಕೃಷ್ಣಗೌಡ ಅರಕೇರಿ, ಮಹೇಶ ಮಾಳಿ ಮೊದಲಾದವರು ಉಪಸ್ಥಿತರಿದ್ದರು.