ಎನ್.ಎಸ್.ಎಸ್. ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ಶ್ಲಾಘನೆ
ಹೊನ್ನಾವರ: ನಾವು ಬದುಕಲು ನೂರೆಂಟು ದಾರಿಗಳಿವೆ. ತರಗತಿ ಕೋಣೆಯಲ್ಲಿ ಕಲಿಯುವುದು ಮಾತ್ರ ಕಲಿಕೆಯಲ್ಲ. ಸಮಾಜದ ನಡುವೆ ನಾವು ಕಲಿಯಬೇಕಾದ ನೂರೆಂಟು ಸಂಗತಿಗಳಿವೆ. ಸಮಾಜದ ಋಣ ತೀರಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿ ಹೇಳಿದರು.
ಅವರು ಸ. ಹಿ. ಪ್ರಾ. ಶಾಲೆ ವಂದೂರಿನಲ್ಲಿ ನಡೆದ ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳ ಮಾಯಾಬಂಧನದಲ್ಲಿ ಸಿಲುಕಿದ್ದಾರೆ. ಮೋಜು-ಮಸ್ತಿ-ಪ್ರವಾಸಗಳಲ್ಲಿ ಅವರು ಮೈಮರೆಯುತ್ತಿದ್ದಾರೆ. ನಮ್ಮ ಹದಿಹರೆಯವನ್ನು ಕಾಪಾಡಿಕೊಳ್ಳಬೇಕು. ಯಾವುದೇ ಕೆಲಸ ಮಾಡಲು ನಾವು ಸಿದ್ಧರಿರಬೇಕು. ವೃತ್ತಿಯಲ್ಲಿ ಆಸಕ್ತಿ, ತನ್ಮಯತೆ, ತಾಳ್ಮೆ, ಶೃದ್ಧೆ ಇದ್ದರೆ ಯಶಸ್ಸು ದೊರೆಯುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಡಿ. ಎಲ್. ಹೆಬ್ಬಾರ ಮಾತನಾಡಿ, ವಂದೂರಿನಲ್ಲಿ ಒಂದು ವಾರಗಳ ಕಾಲ ಇದ್ದು, ರಸ್ತೆ ರಿಪೇರಿ, ಗಟಾರ ಸ್ವಚ್ಛತೆ, ದೇವಾಲಯದ ಆವರಣ, ಬಸ್ ನಿಲ್ದಾಣ ಶುಚಿಗೊಳಿಸಿದ ವಿದ್ಯಾರ್ಥಿಗಳ ಶ್ರಮದಾನವನ್ನು ಶ್ಲಾಘಿಸಿದರು.
ಕಾಲೇಜಿನ ಎನ್. ಎಸ್. ಎಸ್. ಯೋಜನಾಧಿಕಾರಿ ನಾಗರಾಜ ಅಪಗಾಲ ಮಾತನಾಡಿ, ಇಂದು ನಾವು ಯಂತ್ರಗಳನ್ನು ಶೋಧಿಸಿದ್ದೇವೆ. ಆದರೆ ಮಾನವನ ಶರೀರವೆಂಬ ಯಂತ್ರಕ್ಕೆ ಬೊಜ್ಜು ಬಂದಿದೆ. ನಮ್ಮ ಒಳಗಡೆ ಪರಿವರ್ತನೆ ಆಗದ ಹೊರತು ಯಾವುದೇ ನಿಯಮಗಳಿಂದ ಪ್ರಯೋಜನವಿಲ್ಲ ಎಂದರು. ಗ್ರಾ. ಪಂ. ಕಡ್ಲೆ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ಟ ಅವರು ಗ್ರಾಮ ಪಂಚಾಯತದ ಕಾರ್ಯವಿಧಾನಗಳ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಸಹ ಶಿಬಿರಾಧಿಕಾರಿ ಪ್ರಶಾಂತ ಮೂಡಲಮನೆ, ಮುಖ್ಯಾಧ್ಯಾಪಕ ಶಂಕರ ನಾಯ್ಕ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಈರು ಗೌಡ ಉಪಸ್ಥಿತರಿದ್ದರು.