ಕೇಳುವವರಿಲ್ಲ ಹೊನ್ನಾವರದ ಹಳ್ಳಿಗರ ಗೋಳು..!!
ಹೊನ್ನಾವರ : ತಾಲ್ಲೂಕಿನ ಬಹುತೇಕ ಹಳ್ಳಿಗಳು ಗುಡ್ಡಗಾಡು ತಪ್ಪಲಿನ ಪ್ರದೇಶಗಳಿಂದ ಕೂಡಿದೆ. ಹೊನ್ನಾವರದ ಬಹತೇಕ ಹಳ್ಳಿಗಳಲ್ಲಿ ಅತಿ ವಿರಳವಾಗಿ ಮೊಬೈಲ್ ನೆಟ್ವರ್ಕ್ ಲಭ್ಯವಿರುತ್ತದೆ. ಆದರೆ ಹಲವಾರು ಹಳ್ಳಿಗಳಲ್ಲಿ ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ ಕಾರ್ಯ ನಿರ್ವಹಿಸುತ್ತಿದ್ದು, ಹೆಸರಿಗೆ ಮಾತ್ರ ನೆಟ್ವರ್ಕ್ ಎನ್ನುವ ಪರಿಸ್ಥಿತಿ ತಲೆದೂರಿದೆ. ಮೊದಲೇ ದುರ್ಬಲ ನೆಟ್ವರ್ಕ್ ಹೊಂದಿರುವ ಸಮಸ್ಯೆ ಒಂದಾದರೆ, ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಕಡಿತ ಹೊಂದಿದ ಸಮಯದಲ್ಲಿ ನೆಟ್ವರ್ಕ್ ಬಂದ್ ಆಗುತ್ತಿರುವುದು ಜನರಿಗೆ ಅನಾನುಕೂಲ ಉಂಟು ಮಾಡುವಂತಾಗಿದೆ. ಬಿಎಸ್ಎನ್ಎಲ್ ಮೇಲೆ ಅವಲಂಬಿತರಾಗಿರುವ ಜನರು ಪ್ರಮುಖವಾಗಿ ವಯೋವೃದ್ಧರು ತೀವ್ರವಾಗಿ ತೊಂದರೆಗೊಳ್ಳುತ್ತಿರುವುದು ಕಂಡುಬಂದಿದೆ. ಆಧಾರ್, ಪಡಿತರ ಚೀಟಿ, ಬೆಳೆಸಾಲ ಹಾಗೂ ಇನ್ನಿತರ ಸರ್ಕಾರಿ ಸೇವೆಗಳಿಗೆ ಓಟಿಪಿ ಅಗತ್ಯವಾಗಿರುವುದರಿಂದ ನೆಟ್ವರ್ಕ್ ಇಲ್ಲದೆ ಜನಸಾಮಾನ್ಯರು ಒದ್ದಾಡುತ್ತಿರುವುದು ಪ್ರತಿ ನಿತ್ಯವು ಉಂಟಾಗುತ್ತಿದೆ.
ಈ ರೀತಿಯ ಸಮಸ್ಯೆ ತಾಲೂಕಿನ ಕಡ್ಲೆ ಗ್ರಾಮದ ಟವರ್ ನಲ್ಲಿ ಸಹ ಆಗಿದ್ದು, ಈ ಕುರಿತು ಕಡ್ಲೆಯ ಗ್ರಾಮ ಒನ್ ನ ಉಮಾಮಹೇಶ್ವರ ಭಟ್ ಇವರು ಕೇಂದ್ರ ಸರ್ಕಾರದ ಸಾರ್ವಜನಿಕ ಕುಂದುಕೊರತೆ ವಿಭಾಗದಲ್ಲಿ ದೂರು ಸಲ್ಲಿಸಿದ್ದು, ಅದಕ್ಕೆ ಬಿಎಸ್ಎನ್ಎಲ್ ಅಧಿಕಾರಿಗಳು ಉತ್ತರಿಸಿದ್ದಾರೆ. ಸಿರ್ಸಿ ಹಾಗೂ ಹುಬ್ಬಳ್ಳಿಯ ಹೆಸ್ಕಾಂ ಆಫೀಸ್ ಗೆ ಪತ್ರ ಬರೆದು ನಿರಂತರ ವಿದ್ಯುತ್ ನೀಡಲು ಮನವಿ ಮಾಡಿದ್ದೇವೆ. ಕಡ್ಲೆ ಟವರ್ ನ ಬ್ಯಾಟರಿ ಪೂರ್ತಿ ಹಾಳಾಗಿದ್ದು ಹೊಸ ಬ್ಯಾಟರಿಗಾಗಿ ಬೆಂಗಳೂರು ಸರ್ಕಲ್ ಆಫೀಸಿಗೆ ಮನವಿ ಸಲ್ಲಿಸಿದ್ದೇವೆ ಎಂದು ಉತ್ತರ ನೀಡಿದ್ದಾರೆ. ಆದರೆ ತ್ವರಿತಗತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಬಿಎಸ್ಎನ್ಎಲ್ ಕಾರ್ಯ ನಿರ್ವಹಿಸಬೇಕು ಎಂಬುದು ಹೊನ್ನಾವರದ ಜನರ ಆಶಯ.
ಹೊನ್ನಾವರ ಭಾಗದ ಹಲವು ಹಳ್ಳಿಗಳಲ್ಲಿ ಬಹುಮುಖ್ಯವಾಗಿ ವಯೋವೃದ್ಧರು, ನೆಟ್ವರ್ಕ್ ಗಾಗಿ ಬಿಎಸ್ಎನ್ಎಲ್ ನ್ನು ನಂಬಿಕೊಂಡಿರುವಾಗ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡು ಹಿಡಿಯಲು ಬಿಎಸ್ಎನ್ಎಲ್ ಅಧಿಕಾರಿಗಳು ಯತ್ನಿಸಬೇಕು. ಹಲವಾರು ವರ್ಷಗಳಿಂದ ಈ ಸಮಸ್ಯೆಯಿದ್ದು, ಇನ್ನಾದರೂ ಸಂಬಂಧಪಟ್ಟವರು ಇದರ ಬಗ್ಗೆ ಕ್ರಮಕೈಗೊಂಡರೆ ತುರ್ತು ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುತ್ತದೆ.— – ಎನ್ ಎಂ ಗುರುಪ್ರಸಾದ್
ಹೊನ್ನಾವರ ಫೌಂಡೇಶನ್