ಹೊನ್ನಾವರ; ಪ.ಪಂ. 2025-26ನೇ ಸಾಲಿನ 15 ಕೋಟಿ 62 ಲಕ್ಷದ 62ಸಾವಿರದ ಅಂದಾಜು ಆದಾಯ ಮತ್ತು ರೂ 15 ಕೋಟಿ 58 ಲಕ್ಷದ 8 ಸಾವಿರ ರೂಪಾಯಿಗಳ ವೆಚ್ಚ ವ್ಯಯ, 4 ಲಕ್ಷ 54 ಸಾವಿರ ರೂಪಾಯಿಗಳ ಉಳಿತಾಯದ ಆಯವ್ಯಯವನ್ನು ಪ.ಪಂ ಅಧ್ಯಕ್ಷ ನಾಗರಾಜ ಭಟ್ ಬುಧವಾರ ಮಂಡಿಸಿದರು.
ಮುಂದಿನ ಆರ್ಥಿಕ ವರ್ಷದಲ್ಲಿ ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು, ನಗರ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥಿತ ನಿರ್ವಹಣೆ, ಹಾಗೂ ನಗರ ಸೌಂದರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಪಟ್ಟಣ ಪಂಚಾಯತಿಯ ಆದಾಯ ಮೂಲಗಳಾದ ಆಸ್ತಿ ತೆರಿಗೆ, ನೀರು ಸರಬರಾಜು ಶುಲ್ಕ, ಉದ್ದಿಮೆ ಪರವಾನಗಿ, ಮಳಿಗೆಗಳ ಬಾಡಿಗೆ ಹಾಗೂ ಇತರೆ ಮೂಲಗಳಿಂದ ನಿರೀಕ್ಷಿಸಲಾದ ಆದಾಯದ ಮೇಲೆ ಆಯ-ವ್ಯಯವನ್ನು ತಯಾರಿಸಿದ್ದು, ಸರ್ಕಾರದ ವಿವಿಧ ಅನುದಾನಗಳ ಮೊತ್ತಕ್ಕನುಗುಣವಾಗಿ ಹೊಸ ಯೋಜನೆಗಳನ್ನು ಅಳವಡಿಸಿಕೊಂಡಿರುದಾಗಿ ಮಾಹಿತಿ ನೀಡಿದರು.
ಬಜೆಟ್ ಚರ್ಚೆಯಲ್ಲಿ ಸದಸ್ಯರಾದ ವಿಜಯ್ ಕಾಮತ್ ಮಾತನಾಡಿ ಮಾವಿನಕುರ್ವದಲ್ಲಿ ನಿರ್ಮಾಣ ಆಗುತ್ತಿರುವ ಖಾಸಗಿ ಉದ್ಯಮಕ್ಕೆ ನೀರು ಸರಬರಾಜು ಆಗುತ್ತಿರುವ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ದ್ವನಿ ಗೂಡಿಸಿದ ಆಜಾದ್ ಅಣ್ಣಿಗೇರಿ ನೀರು ಪೂರೈಸುವುದಕ್ಕೆ ಅನುಮತಿ ನೀಡಿದ್ದಿರಾ? ಅಥವಾ ಈ ವಿಚಾರದಲ್ಲಿ ಏನಾದರು ಒಳೊಪ್ಪಂದ ಆಗಿದಿಯೇ, ಆಗಿದ್ದರೆ ಸಭೆಗೆ ತಿಳಿಸಿ ಎಂದು ಪ್ರಶ್ನಿಸಿದರು. ಸದಸ್ಯರಾದ ತಾರಾ ಕುಮಾರಸ್ವಾಮಿ, ಮೇಧಾ ನಾಯ್ಕ ಮಾತನಾಡಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಮೊದಲು ಇಲ್ಲಿನ ಜನರಿಗೆ ಸರಿಯಾಗಿ ನೀರು ಪೂರೈಸಲು ವ್ಯವಸ್ಥೆ ಆಗಬೇಕು ಎಂದರು.
ನಾವು ಯಾವುದಕ್ಕು ಅನುಮತಿ ನೀಡಿಲ್ಲ. ಯಾವ ಒಳೊಪ್ಪಂದವು ಆಗಿಲ್ಲ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಏಸು ಬೆಂಗಳೂರು ತಿಳಿಸಿದರು.
ಪ.ಪಂ. ಉಪಾಧ್ಯಕ್ಷ ಸುರೇಶ ಹೊನ್ನಾವರ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಮೇಸ್ತ, ಪ.ಪಂ. ಮುಖ್ಯಾಧಿಕಾರಿ ಯೇಸು ಬೆಂಗಳೂರು, ಸದಸ್ಯರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.