ಸಿದ್ದಾಪುರ : ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಅನೇಕ ಉದಾತ್ತವಾದ ಸೇವಾಕಾರ್ಯಗಳ ಗುರಿಯನ್ನು ಹೊಂದಿದ್ದು, ಜತೆಗೆ ನಾಯಕತ್ವ ತರಬೇತಿಯು ಬಲು ಮುಖ್ಯ ಗುರಿಯನ್ನು ಹೊಂದಿದೆ. ಉತ್ತಮವಾದ ನಾಯಕರಿದ್ದರೆ ಒಳ್ಳೆಯ ಯೋಜನೆ ಹಾಗೂ ಗುರಿಗಳ ಈಡೇರಿಕೆ ಸಾಧ್ಯ. ಮನುಷ್ಯ ಜೀವನದಲ್ಲಿ ಸೇವೆ ಎಂಬುದು ಮುಖ್ಯವಾದದ್ದು. ಹಣವಿದ್ದರೆ ಮಾತ್ರ ಸೇವೆ ಎಂಬ ವಿಚಾರ ಸಲ್ಲದು. ದೈಹಿಕ, ಮಾನಸಿಕ ಶ್ರಮ ಕೂಡ ಅಷ್ಟೇ ಮಹತ್ವದ್ದು. ಲಯನ್ಸ್ ಕ್ಲಬ್ಗಳು ನಾಯಕತ್ವದ ಬೆಳವಣಿಗೆಯತ್ತ ಗಮನ ನೀಡಬೇಕು ಗಮನ ನೀಡಬೇಕು ಎಂದು ಲಯನ್ಸ್ ಮಲ್ಟಿಪಲ್ ಜಿಲ್ಲೆ 317 ಇದರ ಅಧ್ಯಕ್ಷ ಲಯನ್ ಮೋಹನಕುಮಾರ್ ಎಸ್. ಹೇಳಿದರು.
ಅವರು ಸ್ಥಳೀಯ ಲಯನ್ಸ್ ಕ್ಲಬ್ಗೆ 2025-26 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರಾಘವೇಂದ್ರ ಆರ್. ಭಟ್ಟ ಕಲ್ಲಾಳ ಇವರ ಸಮೂಹಕ್ಕೆ ಗ್ರಹಣ ನೆರವೇರಿಸಿ ಮಾತನಾಡಿದರು. ಅವರು ಮಾತನ್ನು ಮುಂದುವರೆಸಿ – ಈ ಬಾರಿ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷರಾಗಿ, ಭಾರತೀಯರಾದ ವಿ.ಪಿ. ಸಿಂಗ್ರವರು ಆಯ್ಕೆ ಹೊಂದಿದ್ದು ಸಂತಸದ ಸಂಗತಿ. ಇವರ ನೇತೃತ್ವದಲ್ಲಿ ಅನೇಕ ಜನಪದ ಸೇವಾ ಕಾರ್ಯಗಳನ್ನು ನಡೆಸೋಣ. ಹೊಸ ಸದಸ್ಯರನ್ನು ಸೇರ್ಪಡೆಗೊಳಿಸೋಣ ಎಂದರು.
ಮಾಜಿ ಜಿಲ್ಲಾ ರಾಜ್ಯಪಾಲ ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ – ಸಿದ್ದಾಪುರದ ಲಯನ್ಸ್ ಕ್ಲಬ್ ಶಾಶ್ವತವಾದ ಸೇವಾ ಯೋಜನೆಯನ್ನು ಹೊಂದಲು ಯತ್ನಿಸುತ್ತದೆ. ಅದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದರು.
ವಲಯ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನಮನೆ ಮಾತನಾಡಿ ಶುಭ ಕೋರಿದರು. ಹೊನ್ನಾವರದ ಸತ್ಯಾನಂದ ಕೈರಾನ್ ಹಾಗೂ ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಗುರುರಾಜ್ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಎ.ಜಿ. ನಾಯ್ಕ ಮಾತನಾಡಿ ತನ್ನ ಒಂದು ವರುಷದ ಅಧಿಕಾರಾವಧಿಯಲ್ಲಿ ಅನೇಕ ಜಾನಪದ ಸೇವಾ ಚಟುವಟಿಕೆ ಜತೆಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ಡಾ|| ಎಂ.ಪಿ. ಶೆಟ್ಟಿ ಸ್ಮರಣೀಯ ಭವನದ ಅರ್ಧ ಕಾರ್ಯ ನಡೆದಿದೆ ಎಂದು ಹೇಳಿದರು.
ಶಿಕ್ಷಕಿ ಸುಮಾ ಹೆಗಡೆ ಪ್ರಾರ್ಥಿಸಿದರು. ನಾಗರಾಜ ದೋಶೆಟ್ಟಿ ಧ್ವಜವಂದನೆ ನೆರವೇರಿಸಿದರು. ಕಾರ್ಯದರ್ಶಿ ಕುಮಾರ ಗೌಡರ್ ಹೊಸೂರರವರು ವರದಿ ವಾಚನಗೈದರು. ಡಾ. ಜಿ.ಜಿ. ಹೆಗಡೆ ಬಾಳಗೋಡ ಅತಿಥಿಗಳನ್ನು ಪರಿಚಯಿಸಿದರು. ಎಂ.ಆರ್. ಪಾಟೀಲ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಆಕಾಶ ಹೆಗಡೆ ಗುಂಜಗೋಡ ವಂದಿಸಿದರು. ವೀಣಾ ಆನಂದ ಶೇಟ ನಿರೂಪಿಸಿದರು.