ಗಿಡನೆಡುವಲ್ಲಿ ಮಹಿಳಾ ಅರಣ್ಯವಾಸಿಗಳಿಂದ ದಾಖಲೆ: ರವೀಂದ್ರ ನಾಯ್ಕ
ಶಿರಸಿ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಂಡ ದಶಲಕ್ಷ ಗಿಡನೆಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಅರಣ್ಯವಾಸಿಗಳ ಜೊತೆಯಲ್ಲಿ ಹಿರಿಯರು, ಮಕ್ಕಳು ಆಸಕ್ತಿಯಿಂದ ಭಾಗವಹಿಸಿದರೆ, ಮಹಿಳಾ ಅರಣ್ಯವಾಸಿಗಳು ದಾಖಲೆ ಸಂಖ್ಯೆಯಲ್ಲಿ ಗಿಡ ನೆಡುವ ಅಭಿಯಾನದಲ್ಲಿ ಪಾಲ್ಗೊಳ್ಳುವಿಕೆಯು ವಿಶೇಷವಾಗಿತ್ತು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಜಿಲ್ಲಾದ್ಯಂತ ದಶ ಲಕ್ಷ ಗಿಡನೆಡುವ ಅಂಗವಾಗಿ ಜೂನ್ 21 ರಂದು ಜಿಲ್ಲೆಯ 500 ಕ್ಕೂ ಮಿಕ್ಕಿ ಸ್ಥಳಗಳಲ್ಲಿ ಏಕಕಾಲದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಅಭಿಯಾನದಲ್ಲಿ ಪುರುಷರಿಗೆ ಸರಿ ಸಮಾನವಾಗಿ ತುಂತುರು ಮಳೆಯಲ್ಲಿಯೂ ಸ್ವ ಪ್ರೇರಣೆಯಿಂದ ಗಿಡ ನೆಟ್ಟಿರುವುದು ದಾಖಲಾರ್ಹ ಅಂಶವೆಂದು ಅವರು ಹೇಳಿದರು.
ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿರುವ ಅರಣ್ಯವಾಸಿ ಕುಟುಂಬಗಳಲ್ಲಿ ಮಹಿಳೆಯರು ಅರಣ್ಯ ಭೂಮಿ ಸಾಗುವಳಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ಸಹಜ. ಜಿಲ್ಲಾದ್ಯಂತ ಕಳೆದ 33 ವರ್ಷದಿಂದ ಜರುಗುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಟದಲ್ಲಿಯೂ ಸಹಿತ ಭೂಮಿ ಹಕ್ಕಿಗಾಗಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಹೋರಾಟದ ಭಾವುಟ ಹಿಡಿದು ಧುಮುಕಿರುವುದು ಸತ್ಯಕೂಡ. ಆದರೇ, ಅರಣ್ಯವಾಸಿಗಳು ಗಿಡ ನೆಡುವ ಕಾರ್ಯದಲ್ಲಿ ಜಿಲ್ಲಾದ್ಯಂತ ಮಹಿಳೆಯರು ಮಕ್ಕಳೊಂದಿಗೆ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಪರಿಸರ ಜಾಗೃತಿ ಪ್ರದರ್ಶಿಸಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದ್ದಾರೆ.
ಜುಲೈ 5 ರವರೆಗೆ ಅಭಿಯಾನ:
ಜೂನ್ 21 ರಂದು ಪ್ರಾರಂಭವಾದ ದಶಲಕ್ಷ ಗಿಡ ನೆಡುವ ಅಭಿಯಾನವು ಜುಲೈ 5 ರವರೆಗೂ ಜಿಲ್ಲಾದ್ಯಂತ ಜರುಗಲಿದೆ. ಪ್ರತಿ ಅರಣ್ಯವಾಸಿ ಕುಟುಂಬವು ಕನಿಷ್ಠ ಹತ್ತು ಗಿಡಗಳನ್ನ ನಡುವಂತೆ ಸಂದೇಶ ನೀಡಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.