-ಮುಕ್ತಾ ಹೆಗಡೆ
ಜಗತ್ತು ಭಾರತದೆಡೆಗೆ ಮತ್ತೆ ತಿರುಗಿ ನೋಡಲು ಅನೇಕ ವಿಷಯಗಳು ಕಾರಣೀಭೂತವಾಗಿವೆ. ಅಂತಹುಗಳಲ್ಲಿ ‘ಯೋಗ’ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಅನಾದಿಕಾಲದಿಂದಲೂ ಭಾರತೀಯ ಜೀವನಪದ್ಧತಿಯಲ್ಲಿ ಯೋಗವನ್ನು ದಿನಚರಿಯಲ್ಲಿ ರೂಢಿಸಿಕೊಂಡು ಬಂದಿದ್ದರು. ನಮ್ಮ ಪೂರ್ವಜರ ಎಲ್ಲ ವಿಚಾರಗಳ ಹಿಂದೆ ವೈಜ್ಞಾನಿಕ ಕಾರಣ ಇರುತ್ತದೆ. ಅದಕ್ಕೆ ಯೋಗ ಕೂಡ ಹೊರತಲ್ಲ. ಗಟ್ಟಿಮುಟ್ಟಾದ ದೇಹ, ಸದೃಢವಾದ ಮನಸ್ಸನ್ನು ಹೊಂದಲು ಯೋಗ ನಮಗೆ ಸಹಕರಿಸುತ್ತದೆ. ಮೋಕ್ಷ ಸಾಧನೆಗೂ ಯೋಗ ಅಡಿಪಾಯವಾಗುತ್ತದೆ.
ಯೋಗ ಶಾಸ್ತ್ರವು ಪಿತಾಮಹ ಎಂದು ಪತಂಜಲಿ ಮಹರ್ಷಿಯನ್ನು ಕರೆಯುತ್ತೇವೆ. ಹಾಗಾಗಿ ಯೋಗಾಭ್ಯಾಸದ ಪ್ರಾರಂಭದಲ್ಲಿ “ಪತಂಜಲಿಂ ಪ್ರಾಂಜಲಿರಾನತೋಸ್ಮಿ” ಎಂದು ಪತಂಜಲಿ ಮುನಿಯವರಿಗೆ ನಮಿಸುತ್ತೇವೆ.
ಇಂದು ನಾವು ಹನ್ನೊಂದನೇಯ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ೨೦೧೪ರ ಸೆಪ್ಟೆಂಬರ್ ೨೭ರಂದು ವಿಶ್ವ ಸಭೆಯಲ್ಲಿ ಯೋಗದ ಕುರಿತು ಮಾತನಾಡಿ ಯೋಗದ ಮಹತ್ವವನ್ನು ಪ್ರಸ್ತುತ ಪಡಿಸಿದರು. ವರ್ಷದ ದೊಡ್ಡ ದಿನವಾದ ಜೂನ್ ೨೧ ರಂದು ಯೋಗ ದಿನವನ್ನು ಆಚರಿಸಲು ಕರೆ ನೀಡಿದರು. ಅವತ್ತಿನಿಂರ ಇಂದಿನವರೆಗೂ ಜಗತ್ತಿನಲ್ಲಿ ಯೋಗದ ಕುರಿತು ಅನೇಕ ರೀತಿಯಲ್ಲಿ ಜಾಗೃತಿ ಮೂಡುತ್ತಿದೆ. ಯೋಗವನ್ನು ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಯೋಗ ತರಬೇತಿ ಕೇಂದ್ರಗಳು, ಯೋಗದ ಕುರಿತಾದ ಉಪನ್ಯಾಸಗಳು, ಆಯೋಜಿಸುವ ಯೋಗಾಭ್ಯಾಸದ ಸ್ಪರ್ಧೆಗಳು ಯೋಗ ಹೇಗೆ ಇಂದು ಜಗತ್ತಿನಾದ್ಯಂತ ವ್ಯಾಪಿಸಿಕೊಳ್ಳುತ್ತಿದೆ ಎಂದು ತಿಳಿದುಬರುತ್ತದೆ. “Yoga for one health, ond earth” ಎಂಬುದು ಈ ವರ್ಷದ ಘೋಷಾವಾಕ್ಯವಾಗಿದೆ.
ಯೋಗ ಮಾಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವೆರಡೂ ಉತ್ತಮಗೊಳ್ಳುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ. ಯೋಗ ಜೀವನೋತ್ಸಾಹವನ್ನು ತುಂಬುತ್ತದೆ. ಒತ್ತಡ ದೂರವಾಗಿ ನೆಮ್ಮದಿ ಮನದಲ್ಲಿ ಮನೆ ಮಾಡುತ್ತದೆ. ಯೋಗ ನಮ್ಮ ಬದುಕಿಗೆ ಯೋಗವಿದ್ದಂತೆ. ಹಾಗಾಗಿ ನಮ್ಮ ಹಿರಿಯರು ನಿತ್ಯಯೋಗಿಗಳಾಗಿದ್ದರು. ಮೋದಿಯವರು ನಾವು ಮರೆತಿದ್ದ ಯೋಗವನ್ನು ಮತ್ತೆ ನೆನಪಿಸಿದರು.
ನಾವೆಲ್ಲರೂ ವಿಶ್ವ ಯೋಗ ದಿನದಂದು ಯೋಗವನ್ನು ಮಾಡುವ ಪ್ರತಿಜ್ಞೆಯನ್ನು ಮಾಡೋಣ, ನಿತ್ಯ ಯೋಗಿಗಳಾಗೋಣ. ಉತ್ತಮ ದೇಹ ಮತ್ತು ಮನಸ್ಸನ್ನು ಪಡೆಯೋಣ. ಆರೋಗ್ಯ ರಾಷ್ಟ್ರದ ನಿರ್ಮಾಣ ಮಾಡೋಣ.