ನವದೆಹಲಿ: ಪಾಕಿಸ್ಥಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ಎದುರಿಸಲು ಭಾರತದ ಬಲವಾದ ಸಂಕಲ್ಪವನ್ನು ಸಾರಲು ಯುಕೆಗೆ ತೆರಳಿ, ಅಲ್ಲಿನ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಮತ್ತು ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಸೇರಿದಂತೆ ರಾಜಕೀಯ ಮತ್ತು ರಾಜತಾಂತ್ರಿಕ ನಾಯಕರನ್ನು ಭೇಟಿ ಮಾಡಿದ ನಂತರ ಶಶಿ ತರೂರ್ ನೇತೃತ್ವದ ಸರ್ವಪಕ್ಷ ಸಂಸದೀಯ ನಿಯೋಗವು ಅಮೆರಿಕ ಭೇಟಿಯನ್ನು ಮುಕ್ತಾಯಗೊಳಿಸಿ ಭಾರತಕ್ಕೆ ಆಗಮಿಸಿದೆ.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪ್ರಾರಂಭಿಸಿದ ಆಪರೇಷನ್ ಸಿಂಧೂರ್ ಬಗ್ಗೆ ವಿವರಿಸಲು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು ಬಹುರಾಷ್ಟ್ರೀಯ ಪ್ರವಾಸವನ್ನು ಕೊನೆಗೊಳಿಸಿದೆ.
ಪಾಕಿಸ್ಥಾನ ಮತ್ತು ಭಯೋತ್ಪಾದನೆಯ ನಡುವಣ ಸಂಪರ್ಕವನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ತಿಳಿಸಲು ಭಾರತವು 33 ಜಾಗತಿಕ ರಾಜಧಾನಿಗಳಿಗೆ ತೆರಳಲು ಏಳು ಬಹುಪಕ್ಷ ನಿಯೋಗಗಳನ್ನು ರಚಿಸಿತ್ತು, ಇದರಲ್ಲಿ ಶಶಿ ತರೂರ್ ನಿಯೋಗವೂ ಒಂದಾಗಿತ್ತು. ಜೂನ್ 3 ರಂದು ಅಮೆರಿಕ ರಾಜಧಾನಿಗೆ ಆಗಮಿಸಿದ ನಿಯೋಗವು ಕ್ಯಾಪಿಟಲ್ ಹಿಲ್ ಮತ್ತು ವಾಷಿಂಗ್ಟನ್ನಲ್ಲಿ ವ್ಯಾಪಕ ಶ್ರೇಣಿಯ ಸಭೆಗಳನ್ನು ನಡೆಸಿತು, ಗಡಿಯಾಚೆಗಿನ ಭಯೋತ್ಪಾದನೆಯ ಕುರಿತು ಭಾರತದ ನಿಲುವಿನ ಬಗ್ಗೆ ಅಮೆರಿಕದ ಸರ್ಕಾರಿ ಅಧಿಕಾರಿಗಳು ಮತ್ತು ಶಾಸಕರಿಗೆ ವಿವರಿಸಿತು.
ಉಪಾಧ್ಯಕ್ಷ ವ್ಯಾನ್ಸ್ ಮತ್ತು ಲ್ಯಾಂಡೌ ಜೊತೆಗೆ, ಈ ನಿಯೋಗವು ಹೌಸ್ ಫಾರಿನ್ ಅಫೇರ್ಸ್ ಕಮಿಟಿ ನಾಯಕತ್ವ, ಇಂಡಿಯಾ ಕಾಕಸ್ ನಾಯಕತ್ವ ಮತ್ತು ಸೆನೆಟ್ ಫಾರಿನ್ ರಿಲೇಷನ್ಸ್ ಕಮಿಟಿ ನಾಯಕರನ್ನು ಸಹ ಭೇಟಿ ಮಾಡಿತು. ಮೇ 24 ರಂದು ಭಾರತದಿಂದ ನ್ಯೂಯಾರ್ಕ್ಗೆ ಆಗಮಿಸಿದ್ದ ನಿಯೋಗವು, ಪ್ರವಾಸದ ಕೊನೆಯ ಹಂತಕ್ಕಾಗಿ ವಾಷಿಂಗ್ಟನ್ಗೆ ಆಗಮಿಸುವ ಮೊದಲು ಗಯಾನಾ, ಪನಾಮ, ಕೊಲಂಬಿಯಾ ಮತ್ತು ಬ್ರೆಜಿಲ್ಗೆ ಪ್ರಯಾಣಿಸಿತ್ತು.