ಶಿರಸಿ: ತಾಲೂಕಿನ ಇಸಳೂರಿನ ತೆಂಗಿನಗುಡ್ಡ ಪ್ರದೇಶದಲ್ಲಿ ಶ್ರೀನಿಕೇತನ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಹೊರಸಂಚಾರ ಶಿಬಿರವನ್ನು ಏರ್ಪಡಿಸಲಾಗಿತ್ತು. ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶಿವರಾಮ್ ಭಟ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಭಾರತ ಸ್ಕೌಟ್ ಮತ್ತು ಗೈಡ್ಸ್, ಶಿರಸಿ ಶಾಖೆಯ ಜಿಲ್ಲಾ ಮುಖ್ಯ ಆಯುಕ್ತರಾದ ವಿ.ಎಚ್. ಭಟ್ಕಳ್, ರಾಜ್ಯ ಸಂಘಟನಾ ಆಯುಕ್ತರಾದ ವೀರೇಶ ಮಾದರ ಹಾಗೂ ಶಾಲೆಯ ಪ್ರಾಂಶುಪಾಲರಾದ ವಸಂತ್ ಭಟ್ ಉಪಸ್ಥಿತರಿದ್ದರು. ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಪ್ರಶಾಂತ್ ಭಟ್ ಹಾಗೂ ಗೋವಿಂದ ಭಟ್ ಇವರು ಸ್ಥಳವಕಾಶವನ್ನು ಮಾಡಿಕೊಟ್ಟಿದ್ದರು. ಶಾಲೆಯ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ದೀಪಾ ಎಮ್. ಹಾಗೂ ಸ್ಕೌಟ್ ಮಾಸ್ಟರ್ ಬಸವರಾಜ ಎಚ್. ಇವರ ಮಾರ್ಗದರ್ಶನದಲ್ಲಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಅಡುಗೆ ತಯಾರಿಕೆಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅನಂತರ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಬಿರಕ್ಕೆ ಆಗಮಿಸಿದ ಸರ್ವರಿಗೂ ಮಜ್ಜಿಗೆ ತಯಾರಿಸಿ ನೀಡುವ ಮೂಲಕ ಶಾಲೆಯ ವಿದ್ಯಾರ್ಥಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಶ್ರೀನಿಕೇತನ ಸ್ಕೌಟ್-ಗೈಡ್ ವಿದ್ಯಾರ್ಥಿಗಳ ಹೊರಸಂಚಾರ ಶಿಬಿರ
