ಶಿರಸಿಯಲ್ಲಿ ನಡೆದ ಹಾಲು ಉತ್ಪಾದಕ ಸಂಘಗಳ ಸಮಾಲೋಚನಾ ಸಭೆ: ಸನ್ಮಾನ
ಶಿರಸಿ: ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳ ಸಮಾಲೋಚನಾ ಸಭೆಯು ಜು.7, ಸೋಮವಾರದಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷರು ಹಾಗೂ ಪ್ರಭಾರಿ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರ ಅಧ್ಯಕ್ಷತೆಯಲ್ಲಿ ಶಿರಸಿಯ ಟಿ.ಎಂ.ಎಸ್. ಸಭಾಭವನದಲ್ಲಿ ನಡೆಯಿತು.
ಸಭೆಯ ಆಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕಳೆದ ಧಾರವಾಡ ಸಹಕಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ನನ್ನ ಭಾಗದ ಹಾಲು ಸಂಘಗಳ ಮತದಾರರು ಹಣಕ್ಕೆ ಬೆಲೆ ಕೊಡದೆ, ಕುರುಡು ಕಾಂಚಾಣವನ್ನು ಮೀರಿ ನನ್ನನ್ನು ನಿಮ್ಮ ಮನೆಯವನೆಂದೇ ತಾವುಗಳು ಭಾವಿಸಿ ಅಪಾರ ಪ್ರೀತಿ ಹಾಗೂ ವಿಶ್ವಾಸದೊಂದಿಗೆ ಗುಣ ಮತ್ತು ಕ್ರಿಯಾಶೀಲತೆಗೆ ಬೆಲೆ ಕೊಟ್ಟ ತಮ್ಮೆಲ್ಲರನ್ನೂ ಅಭಿನಂದಿಸುತ್ತಾ ಸಹಕಾರಿ ವ್ಯವಸ್ಥೆಗೆ ನೀವೇ ಮಾದರಿ ಎಂದು ಸಭೆಗೆ ತಿಳಿಸುತ್ತಾ, ಕಳೆದ 11 ವರ್ಷಗಳಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಹಾಗೂ ಶಿರಸಿ ತಾಲೂಕಿನಾದ್ಯಂತ ಕೈಗೊಂಡ ಕೆಲಸ ಕಾರ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ಜಿಲ್ಲೆಯಲ್ಲಿ ಒಟ್ಟೂ 47 ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಕಟ್ಟಡ ಹೊಂದಿದ್ದು, ಜಿಲ್ಲೆಯಾದ್ಯಂತ ಉಳಿದ ಎಲ್ಲಾ ಹಾಲು ಸಂಘಗಳಿಗೆ ಜನಪ್ರತಿನಿಧಿಗಳ ಸಹಾಯ ಸಹಕಾರದಿಂದ ಸ್ವಂತ ಕಟ್ಟಡ ಹೊಂದುವಂತೆ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ಗೌರವ ಧನ ನಿಗಧಿಪಡಿಸುವ ಕುರಿತು ಕರ್ನಾಟಕ ಹಾಲು ಮಹಾ ಮಂಡಳದೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಯಾದ್ಯಂತ ನೂತನವಾಗಿ ಪ್ರಾರಂಭವಾಗುವ ಹಾಲು ಉತ್ಪಾದಕರ ಸಂಘಗಳಿಗೆ ಆರಂಭಿಕ ಉಪಕರಣ ಖರೀದಿಸಲು ತಲಾ ರೂ. 25,000/- ಗಳನ್ನು ಒಕ್ಕೂಟದಿಂದ ನೀಡಲಾಗುತ್ತಿದೆ. ಶಿರಸಿ ತಾಲೂಕಿನಲ್ಲಿ ಸಪ್ಟೆಂಬರ್ 2019 ರಿಂದ ಇಲ್ಲಿಯ ತನಕ ದುರದೃಷ್ಟವಶಾತ್ ಹಾಲು ಪೂರೈಸುವ ಕಲ್ಯಾಣ ಸಂಘದ ಒಟ್ಟೂ 38 ಸದಸ್ಯರು ಸ್ವಾಭಾವಿಕ ಮರಣ ಹೊಂದಿದ್ದು, ಅವರ ವಾರಸುದಾರರಿಗೆ ತಲಾ ರೂ. 10,000/- ರಂತೆ ರೂ. 3,80,000/- ಗಳಷ್ಟು ಮೊತ್ತದ ಚೆಕ್ಗಳನ್ನು ವಿತರಿಸಲಾಗಿದೆ. ಹಾಗೂ ಹಾಲು ಪೂರೈಸುವ ಕಲ್ಯಾಣ ಸಂಘದ ಒಟ್ಟೂ 4 ಸದಸ್ಯರು ಅಪಘಾತದಿಂದ ದುರ್ಮರಣ ಹೊಂದಿದ್ದು, ಅವರ ವಾರಸುದಾರರಿಗೆ ತಲಾ ರೂ. 25,000/- ರಂತೆ ರೂ. 1,00,000/- ಗಳಷ್ಟು ಮೊತ್ತದ ಚೆಕ್ಗಳನ್ನು ವಿತರಿಸಲಾಗಿದ್ದು, ಕಲ್ಯಾಣ ಸಂಘದ ಒಟ್ಟೂ 44 ಸದಸ್ಯರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಅಂತವರಿಗೆ ತಲಾ ರೂ. 5,000/- ರಂತೆ ರೂ. 2,20,000/- ಮೊತ್ತದ ಚೆಕ್ಗಳನ್ನು, ಶಸ್ತ್ರಚಿಕಿತ್ಸೆಗೆ ಒಳಗಾದ 4 ಜನ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ತಲಾ ರೂ. 10,000/- ರಂತೆ ರೂ. 40,000/- ಗಳಷ್ಟು ಮೊತ್ತದ ಚೆಕ್ಗಳನ್ನು ಹಾಗೂ ಹಾಲು ಸಂಘಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ 18 ಜನ ಸಂಘದ ಕಾರ್ಯದರ್ಶಿಗಳಿಗೆ ಇಡಿಗಂಟು ಯೋಜನೆಯ ಅಡಿ ರೂ. 13,29,300/- ಗಳಷ್ಟು ಮೊತ್ತದ ಚೆಕ್ಗಳನ್ನು ವಿತರಿಸಲಾಗಿದೆ ಎಂದರು.
ಜುಲೈ 2021 ರಿಂದ ಜೂನ್ 2025 ರ ವರೆಗೆ ಶಿರಸಿ ತಾಲೂಕಿನಲ್ಲಿ ನಮ್ಮ ಒಕ್ಕೂಟಕ್ಕೆ ಹಾಲು ಪೂರೈಸಿ ಒಕ್ಕೂಟದ ಜಾನುವಾರು ವಿಮಾ ಮಾಡಿಸಿದ ಹಾಲು ಉತ್ಪಾದಕರ ರೈತರ ಒಟ್ಟಾರೆಯಾಗಿ 81 ಜಾನುವಾರುಗಳು ದುರದೃಷ್ಟವಶಾತ್ ಮರಣ ಹೊಂದಿದ್ದು ಮರಣ ಹೊಂದಿದ ಜಾನುವಾರುಗಳ ಮಾಲೀಕರುಗಳಿಗೆ ಒಕ್ಕೂಟದಿಂದ ಮಾಡಿಸಲಾದ ಜಾನುವಾರು ವಿಮಾ ಯೋಜನೆಯ ಅಡಿ ರೂ. 30,83,000/- ಗಳಷ್ಟು ಮೊತ್ತದ ಚೆಕ್ಗಳನ್ನು ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಒಕ್ಕೂಟದಿಂದ ಜಾನುವಾರು ವಿಮಾ ಮಾಡಿಸಿದ ಯಾವುದೇ ರಾಸುಗಳು ಮರಣ ಹೊಂದಿದ ಕೂಡಲೇ ಒಕ್ಕೂಟದ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ರಾಸುವಿನ ಮರಣೋತ್ತರ ಪರೀಕ್ಷೆ ಮಾಡಿಕೊಳ್ಳಬೇಕೆಂದರು. ಅದಕ್ಕಾಗಿ ಹಾಲು ಉತ್ಪಾದಕರ ರೈತರು ಪ್ರತೀ ವರ್ಷ ರಾಸು ವಿಮೆಯನ್ನು ಕಡ್ಡಾಯವಾಗಿ ಮಾಡಿಸಿ ಕಾಲಕಾಲಕ್ಕೆ ಅದನ್ನು ನವೀಕರಿಸಿಕೊಳ್ಳಬೇಕೆಂದು ವಿನಂತಿಸಿದರು.
ಈಗಾಗಲೇ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಅನುದಾನದ ಅಡಿಯಲ್ಲಿ ವಿತರಿಸಲು ರಬ್ಬರ್ ಮ್ಯಾಟ್ಗಳನ್ನು ತರಸಿಲಾಗಿದ್ದು, ಅದನ್ನು ಸಂಘಕ್ಕೆ ನೇರವಾಗಿ ವಿತರಿಸಲಾಗಿದೆ. ಅರ್ಹ ಹಾಲು ಸಂಘಗಳಿಗೆ ಶೀಘ್ರದಲ್ಲಿ ಹುಲ್ಲು ಕತ್ತರಿಸುವ ಯಂತ್ರಗಳನ್ನು ಹಾಗೂ ಎ.ಎಂ.ಸಿ.ಯುಗಳನ್ನು ಸಹ ಒಕ್ಕೂಟದಿಂದ ಅನುದಾನದ ಅಡಿಯಲ್ಲಿ ವಿತರಿಸಲಾಗುವುದು ಎಂದರು. ಹಾಲು ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ತಪ್ಪದೇ ಪ್ರತೀ ತಿಂಗಳು ಸಭೆ ಸೇರಿ ಸಂಘದ ಹಾಲು ಖರೀದಿ ತೂಕ, ಸ್ಥಳೀಯ ಹಾಲು ಮಾರಾಟ, ಪಶು ಆಹಾರ ಖರೀದಿ, ಲೆಕ್ಕಪತ್ರ, ವ್ಯವಹಾರಗಳ ಕುರಿತು ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಲು ಕರೆ ನೀಡಿದರು. ಹಾಗೂ ಸಮಯಕ್ಕೆ ಸರಿಯಾಗಿ ಲೆಕ್ಕಪರಿಶೋಧನೆ ಮಾಡಿಸಿ ವಾರ್ಷಿಕ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ತಿಳಿಸಿದರು. ಅನೇಕ ಸಂಘಗಳಲ್ಲಿ ನಗದು ಪುಸ್ತಕಗಳನ್ನು ಪ್ರತೀ ದಿನ ಬರೆಯದೇ ಇರುವುದು ಕಂಡು ಬಂದಿದ್ದು, ಅದಕ್ಕಾಗಿ ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ತಮ್ಮ ಸಂಘದ ಕಾರ್ಯದರ್ಶಿಯ ಬಳಿ ಲೆಕ್ಕಪತ್ರ, ಸಂಘದ ವ್ಯವಹಾರಗಳಿಗೆ ಸಂಬಂಧಿಸಿದ ಪುಸ್ತಕಗಳಲ್ಲಿ ಮಾಹಿತಿಯನ್ನು ಪ್ರತೀ ದಿನ ನಮೂದಿಸಲು ಸೂಚಿಸಬೇಕು, ಶಿರಸಿ ತಾಲೂಕಿನ ಎಲ್ಲಾ ಹಾಲು ಸಂಘಗಳು ಉತ್ಪಾದಕರು ತರುವ ಹಾಲಿಗೆ ಪ್ಯಾಟ್ ಆಧಾರಿತ ದರವನ್ನು ಕಡ್ಡಾಯವಾಗಿ ನೀಡಿ ರೈತರಿಗೆ ಉತ್ತೇಜನ ನೀಡಬೇಕು. ಸಂಘಗಳು ಹಾಲು ಉತ್ಪಾದನೆಯಲ್ಲಿ ಹೆಚ್ಚಿನ ಮುತುವರ್ಜಿವಹಿಸಿ ತಮ್ಮ ಸಂಘಗಳಲ್ಲಿ ಹೈನುಗಾರಿಕೆಯಲ್ಲಿ ಇನ್ನೂ ಹೆಚ್ಚಿನ ಜನ ತೊಡಗಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಹಾಗೂ ಜಿಲ್ಲೆಯಲ್ಲಿ ನಂದಿನಿ ಹಾಲಿನ ಬೇಡಿಕೆ ಈ ಹಿಂದೆಂದಿಗಿಂತಲೂ ಹೆಚ್ಚಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹಾಲಿನ ಶೇಖರಣೆ ಹೆಚ್ಚಾಗುವಲ್ಲಿ ಸಹಕರಿಸಬೇಕು, ಹೈನೋದ್ಯಮದಲ್ಲಿ ಆಸಕ್ತಿ ಇರುವಂತವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ನನ್ನಿಂದ ಸಾಧ್ಯವಾಗುವ ಸಹಾಯ ಸೌಲಭ್ಯಗಳನ್ನು ಮಾಡಲು ನನಾ ಸದಾ ಸಿದ್ಧ ಎಂದರು. ಸಂಘಗಳಲ್ಲಿ ಹಾಲು ಉತ್ಪಾದಕರು ನಂದಿನಿ ಪಶು ಆಹಾರ ಮತ್ತು ಖನಿಜ ಮಿಶ್ರಣಗಳನ್ನು ಬಳಸುವಂತಾಗಬೇಕು, ಹಾಲು ಉತ್ಪಾದಕರು ಸ್ಟೀಲ್ ಕ್ಯಾನ್ಗಳಲ್ಲಿಯೇ ಕಡ್ಡಾಯವಾಗಿ ಹಾಲು ತರುವಂತೆ ಸಂಘಗಳು ನೋಡಿಕೊಳ್ಳಬೇಕು, ಸಂಘಗಳಲ್ಲಿನ ಮಿಲ್ಕ್ ಅನಲೈಸರ್ ಹಾಗೂ ಮಿಲ್ಕೋ ಟೆಸ್ಟರ್ ಗಳನ್ನು ಕಡ್ಡಾಯವಾಗಿ ಬಳಸಿ ಹಾಲಿನ ಗುಣಮಟ್ಟದ ಬಗ್ಗೆ ಸದಾ ಕಾಳಜಿವಹಿಸಬೇಕು, ಸಂಘದ ಎಲ್ಲಾ ಹಾಲು ಉತ್ಪಾದಕ ಸದಸ್ಯರು ಒಕ್ಕೂಟದ ಕಲ್ಯಾಣ ಸಂಘದ ಸದಸ್ಯತ್ವ ಪಡೆಯುವಂತಾಗಬೇಕು ಎಂದರು. ಜಿಲ್ಲೆಯ ಮೂರು ಜನ ನಿರ್ದೇಶಕರುಗಳು ಕೈಜೋಡಿಸಿ ಸಂಘಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಹಾಲು ಉತ್ಪಾದನೆಯನ್ನು ಹಾಗೂ ಹಾಲಿನ ಮಾರಾಟವನ್ನು ಹೆಚ್ಚಿಸುವತ್ತ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.
ಧಾರವಾಡ ಸಹಕಾರ ಹಾಲು ಒಕ್ಕೂಟದಲ್ಲಿ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಡಾ.ವೀರೇಶ ತರಲಿ ಅವರಿಗೆ ಹಾಗೂ ಧಾರವಾಡ ಸಹಕಾರ ಹಾಲು ಒಕ್ಕೂಟದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಡಿ.ಟಿ.ಕಳಸದ್ ಅವರಿಗೆ ಜಿಲ್ಲೆಯ ನಿರ್ದೇಶಕರುಗಳಾದ ಸುರೇಶ್ಚಂದ್ರ ಕೃಷ್ಣ ಹೆಗಡೆ, ಶಂಕರ ಪರಮೇಶ್ವರ ಹೆಗಡೆ, ಪರಶುರಾಮ ವೀರಭದ್ರ ನಾಯ್ಕ ಅವರುಗಳಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ವತಿಯಿಂದ ಕಲ್ಯಾಣ ಸಂಘದ ಸದಸ್ಯರುಗಳಾಗಿದ್ದ ಕಡಬಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅನ್ನಪೂರ್ಣ ಗಂಗಾಧರ ಹೆಗಡೆ, ಗುಡ್ನಾಪುರ ಹಾಲು ಸಂಘದ ಮಂಜುನಾಥ ಬಂಗಾರಪ್ಪ ಗಾಳಿಮಾರಿ ಇವರುಗಳು ಸ್ವಾಭಾವಿಕ ಮರಣ ಹೊಂದಿದ ಕಾರಣ ಇವರ ವಾರಸುದಾರರಾದ ದೀಪಕ ಹೆಗಡೆ ಹಾಗೂ ಪಾರ್ವತಿ ಮಂಜುನಾಥ ಗಾಳಿಮಾರಿ ಇವರುಗಳಿಗೆ ತಲಾ ರೂ.10,000/-, ಶಸ್ತ್ರಚಿಕಿತ್ಸೆಗೆ ಒಳಗಾದ ಹುಲೇಕಲ್ ಹಾಲು ಸಂಘದ ಗಣಪತಿ ರಾಮಚಂದ್ರ ಹೆಗಡೆ, ಕಾನಗೋಡ ಹಾಲು ಸಂಘದ ರಾಜೇಂದ್ರ ಗಣಪತಿ ಹೆಗಡೆ ಇವರುಗಳಿಗೆ ತಲಾ ರೂ. ರೂ.5,000/-, ಮೊತ್ತದ ಚೆಕ್ಗಳನ್ನು, ಶಸ್ತ್ರಚಿಕಿತ್ಸೆಗೆ ಒಳಗಾದ ನರೂರು ಸಂಘದ ಕಾರ್ಯದರ್ಶಿಯಾದ ಚಂದ್ರಶೇಖರ ಕೆರಿಯಪ್ಪ ನಾಯ್ಕ ಅವರಿಗೆ ರೂ.10,000/-, ಮೊತ್ತದ ಚೆಕ್ಗಳನ್ನು ವಿತರಿಸಲಾಯಿತು.
ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಶಂಕರ ಪರಮೇಶ್ವರ ಹೆಗಡೆ, ಪರಶುರಾಮ ವೀರಭದ್ರ ನಾಯ್ಕ, ವ್ಯವಸ್ಥಾಪಕ ನಿರ್ದೇಶಕರಾದ ಡಿ.ಟಿ.ಕಳಸದ್, ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವೀರೇಶ ತರಲಿ, ವ್ಯವಸ್ಥಾಪಕರು [ಶೇ-ತಾಂ] ಡಾ. ರಾಕೇಶ ತಲ್ಲೂರ, ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಸಹಾಯಕ ವ್ಯವಸ್ಥಾಪಕರಾದ ಡಾ. ವಿವೇಕ್ ಎಸ್ ಆರ್, ಡಾ. ವಿನಾಯಕ ಬಿರಾದಾರ್, ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ಶಿರಸಿ ಉಪ ವಿಭಾಗದ ಗುರುದರ್ಶನ ಭಟ್,
ವಿಸ್ತರಣಾ ಸಮಾಲೋಚಕರುಗಳಾದ ಅಭಿಷೇಕ ನಾಯ್ಕ, ಜಯಂತ ಪಟಗಾರ, ಎಂ ಚಂದನಕುಮಾರ, ಪ್ರಸಾದ ನಾಯ್ಕ ಹಾಗೂ ಶಿರಸಿ ತಾಲೂಕಿನ ಹಾಲು ಸಂಘಗಳ ಅಧ್ಯಕ್ಷರುಗಳು, ಮುಖ್ಯಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.