ಯೋಗಪಟು ಸೂರಜ್ ಕಲ್ಮನೆ ಅವರ ವಿಶೇಷ ಲೇಖನ
ಒಂದಿಷ್ಟು ದಶಕಗಳ ಹಿಂದೆ ಸಮಾಜವನ್ನು ಸಾಂಕ್ರಾಮಿಕ ಪಿಡುಗುಗಳು ಕಾಡುತ್ತಿದ್ದವು. ಅನೇಕ ಜನರು ಸರಿಯಾದ ಆರೈಕೆ, ಔಷಧಿ, ಚಿಕಿತ್ಸೆ ಸಿಗದೇ ಪ್ರಾಣ ಕಳೆದುಕೊಳ್ಳುತ್ತಿದ್ದರು, ಆದರೆ ಈಗ ಅದರ ರೂಪ ಬದಲಾಗಿದೆ. ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲಿ ಸಾಂಕ್ರಾಮಿಕ ರೋಗಕ್ಕಿಂತ – Non Communicable Diseases (N.C.D) ಅಂದರೆ ಒಬ್ಬರಿಂದ ಇನ್ನೊಬ್ಬರಿಗೆ ಹರಡದೆಯೇ ವಯಕ್ತಿಕವಾಗಿ ಬರುವ ರೋಗಗಳು ಹೆಚ್ಚು. ಉದಾ : ಅಧಿಕ ರಕ್ತದ ಒತ್ತಡ, ಸಕ್ಕರೆ ಖಾಯಿಲೆ, ವಿಪರೀತ ವಾದ ಸೊಂಟ, ಕುತ್ತಿಗೆ ನೋವು, ನಿದ್ರಾ ಹೀನತೆ, ಅಜೀರ್ಣತೆ, ಮಲಬದ್ಧತೆ, ಮಾನಸಿಕ ಒತ್ತಡ, ಜಿಗುಪ್ಸೆ, ಅಸಮಾಧಾನ ಇನ್ನು ಅನೇಕ.
ಇದಕ್ಕೆಲ್ಲ ಬಹು ಮುಖ್ಯ ಕಾರಣ ನಾಲ್ಕು.
1. ಏರುಪೇರಾದ ಜೀವನ ಕ್ರಮ – Life style Disorder
2. ಅಸಂಬದ್ಧ ಆಹಾರ – Altered food
3. ದೈಹಿಕ ಮಾನಸಿಕ ಒತ್ತಡ – Over stress
4. ವಿಶ್ರಾಂತಿ ರಹಿತ ದಿನ – Restless routine
ದಿನನಿತ್ಯದ ಜಂಜಾಟದಲ್ಲಿ ಮನುಷ್ಯ ತನ್ನ ಸ್ಟಂತ ಆರೋಗ್ಯವನ್ನು ಮರೆತಿದ್ದಾನೆ. ಗಂಟೆಗಟ್ಟಲೆ ಕೂತು ಮಾಡುವ ಕೆಲಸ ಅಥವಾ ವಿಪರೀತ ಎನ್ನುವಷ್ಟು ಓಡಾಡುವ ಕೆಲಸದ ಮಧ್ಯ ಆಹಾರ, ವಿಶ್ರಾಂತಿ, ಮಾನಸಿಕ ನೆಮ್ಮದಿಯ ಬಗ್ಗೆ ಸಂಪೂರ್ಣ ತಾತ್ಸಾರ ತಾಳಿದ್ದು ಮೇಲಿನ ರೋಗಗಳಿಗೆ ರಹದಾರಿ ಆಗಿದೆ.
ಯೋಗ ಮತ್ತು ದಿನಚರಿ :
ಯೋಗ ಅಭ್ಯಾಸ ಮುಖ್ಯವಾಗಿ ಇರುವುದೇ ಶಾರೀರಿಕ, ಮಾನಸಿಕ, ಭಾವನಾತ್ಮಕ ಸುಸ್ಥಿರಕ್ಕಾಗಿ, ಅದರ ಪಾಲನೆಗಾಗಿ.
ಉಸಿರಾಟ : ಮನಸ್ಸಿನ ಉದ್ವೇಗಕ್ಕೂ, ಉಸಿರಾಟಕ್ಕೂ ಸಂಬಂಧ ಇದೆ. ಯಾರು ಯೋಗಿಕ ರೀತಿಯಲ್ಲಿ ನಿಧಾನವಾಗಿ, ಪೂರ್ಣವಾಗಿ ಉಸಿರಾಡುತ್ತಾರೋ ಅವರಲ್ಲಿನ ಮಾನಸಿಕ ಉದ್ವೇಗ ಶೇ. 90% ಕಡಿಮೆ ಇರುತ್ತದೆ ಎಂದು ಅಧ್ಯಯನ ಹೇಳುತ್ತದೆ. ನಿತ್ಯ 10 ನಿಮಿಷಗಳ ದೀರ್ಘ ಉಸಿರಾಟ ಅನಿವಾರ್ಯ.
ಯೋಗಾಸನ : ಯೋಗದ ಬಹುಮುಖ್ಯ ಅಂಗವಾದ ಆಸನಗಳ ನಿತ್ಯ ಅಭ್ಯಾಸದಿಂದ ದೇಹದ ಎಲ್ಲಾ ಭಾಗಕ್ಕೂ ರಕ್ತ, ಆಮ್ಲಜನಕ, ಪ್ರೊಟಿನ್ ಹಾಗೂ ಪ್ರಾಣ ಸಂಚಾರವಾಗಿ ದೇಹದ ಪ್ರತಿಯೊಂದು ಅಂಗಗಳು ಸ್ವಾಸ್ತ್ಯವನ್ನು ಪಡೆಯಲು ಅನುಕೂಲವಾಗುತ್ತದೆ. ನಿತ್ಯ 45 ನಿಮಿಷಗಳ ಆಸನ ಅಭ್ಯಾಸ ಅವಶ್ಯಕ.
ಪ್ರಾಣಾಯಾಮ : ಕೇವಲ ಉಸಿರಾಟವೇ ಪ್ರಾಣಾಯಾಮ ಅಲ್ಲಾ. ಉಸಿರಾಟದ ಗತಿ ಅಂದರೆ ವೇಗವನ್ನು ನಿಯಂತ್ರಿಸುವುದೇ ಪ್ರಾಣಾಯಾಮ. ನಮ್ಮ ದೇಹದ ಪ್ರಾಣ, ಉದಾನ, ಸಮಾನ, ಅಪಾನ, ವ್ಯಾನ ಎಂಬ ಐದು ಪ್ರಾಣಗಳನ್ನು ಉತ್ತೇಜಿಸುವ, ಹದ ಗೊಳಿಸುವ, ಮತ್ತು ವಿಶ್ರಾಂತಗೊಳಿಸಲು ನಿಯಮಿತ ಪ್ರಾಣಾಯಾಮ ಅತ್ಯುಪಕಾರಿ.
ಯೋಗ ಶಿಕ್ಷಕರಿಂದ ಕಲಿತು ನಿತ್ಯ ಅಭ್ಯಾಸಕ್ಕೆ ಇದನ್ನು ಇಟ್ಟು ಕೊಳ್ಳುವುದು ಒಳ್ಳೆಯದು. ದೈಹಿಕ, ಮಾನಸಿಕ ಅತಿಯಾದ ಒತ್ತಡಕ್ಕೆ ಪ್ರಾಣಾಯಾಮ ಅಭ್ಯಾಸ ರಾಮಬಾಣವೇ ಸರಿ.
ಯೋಗ ನಿದ್ರಾ : ರಾತ್ರಿ ಮಲಗಿ ಬೆಳಿಗ್ಗೆ ಏಳುವುದೇ ವಿಶ್ರಾಂತಿ ಅಲ್ಲಾ. ಎಷ್ಟೋ ಜನರಿಗೆ ಬೆಳಿಗ್ಗೆ ಎದ್ದ ಮೇಲೂ ಮಾನಸಿಕ ಕಿರಿಕಿರಿ, ಮೈ-ಕೈ ನೋವು, ಆಲಸ್ಯ, ಅವಿಶ್ರಾಂತ ಸ್ಥಿತಿ ಮುಂದುವರೆಯುತ್ತದೆ. ಕಾರಣ ಸಂಪೂರ್ಣ ವಿಶ್ರಾಂತಿಯ ಅಲಭ್ಯತೆ. ಇದಕ್ಕಾಗಿ ಯೋಗ ನಿದ್ರೆ ಅನುಕೂಲ.
ಇಲ್ಲಿ ಅಭ್ಯಾಸ ಮಾಡುವವನು ಅಚಲನಾಗಿದ್ದು, ಕೇವಲ ಅರಿವನ್ನು ಉನ್ನತ ಮಟ್ಟಕ್ಕೆ ಇಟ್ಟು ಅರಿವಿನಿಂದ ದೇಹ ಮನಸ್ಸನ್ನು ವಿಶ್ರಾಂತ ಗೊಳಿಸುತ್ತಾನೆ. (Conscious effortless relaxation) ಇದನ್ನು DRT – Deep Relaxation Technque ಅಂತಲೂ ಕರೆಯುತ್ತಾರೆ.
ದೇಹ ಮನಸ್ಸಿಗೆ ಇದು ನವೋಲ್ಲಾಸ ಕೊಡುವುದರೊಂದಿಗೆ ದೈಹಿಕ ಮಾನಸಿಕ ಶಕ್ತಿ ಸಂಚಾರದಲ್ಲಿ ಸಮತೋಲನವನ್ನು ಕಾಪಾಡುತ್ತದೆ.
ಧ್ಯಾನ : ಇದೊಂದು ಅಭೂತಪೂರ್ವ ಕ್ರಿಯೆ. ತನ್ನನ್ನು ತಾನು ಕೇವಲ ‘ಅರಿವಿ’ನೊಂದಿಗೆ ಹೊಂದಿಸಿಕೊಳ್ಳುತ್ತಾ, ಮಾನಸಿಕ ದ್ವಂದ್ವ ಗಳಿಂದ ದೂರಾಗುತ್ತಾ, ಮನೋ ಕಾಮನೆಯ ರಹಿತ ಸ್ಥಿತಿಯನ್ನು ಪಡೆದುಕೊಳ್ಳುತ್ತಾ, ನಿಜ ಆತ್ಮ ಸುಖದಲ್ಲಿ ಒಂದಾಗುವ ಕ್ರಿಯೆ.
ನಿದ್ದೆ ಅರಿವಿಲ್ಲದ ಧ್ಯಾನವಾದರೆ, “ಧ್ಯಾನ” ಅರಿವಿರುವ ನಿದ್ದೆ!! ಎಂದು ಹಿರಿಯರು ಹೇಳಿದ್ದಾರೆ.
ಷಟ್ – ಕ್ರಿಯೆ : ದೇಹವನ್ನು ಮಲಿನ ಮುಕ್ತವಾಗಿಸಲು ಇರುವ ಸಹಜ ಸುಲಭ ಕ್ರಿಯೆಗಳೇ ಷಡ್ ಕ್ರಿಯೆ.
ಕಪಾಲಭಾತಿ, ತ್ರಾಟಕ, ನೇತಿ, ದೌತಿ, ನೌಳಿ, ಬಸ್ತಿ. ಇವುಗಳನ್ನು ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಮಾಡುವುದೇ ಸೂಕ್ತ.
ಯೋಗ ಕೇವಲ ಆಸನ ಅಷ್ಟೇ ಅಲ್ಲಾ. ಆಸನ ಯೋಗದ ಭಾಗ. ಆಧುನಿಕ ಬೇಸತ್ತ ಜೀವನಕ್ಕೆ ಯೋಗ ದಿವ್ಯ ಔಷಧಿ. ಸತತ ಯೋಗಭ್ಯಾಸ ದಿಂದ ಆರೋಗ್ಯಯುಕ್ತ ದೇಹ, ಪ್ರಶಾಂತ ವಾದ ಮನಸ್ಸು, ಚುರುಕಾದ ಬುದ್ಧಿ, ಸಾತ್ವಿಕ ಚಿಂತನೆ, ಅದರ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿ ಬರುವುದು. ಆತ್ಮಿಕ, ಸಾಮಾಜಿಕ ಶಾಂತಿ, ನೆಮ್ಮದಿ, ಸಹಬಾಳ್ವೆಯೇ ಯೋಗದ ಅತ್ಯಂತ ಉನ್ನತ ಧ್ಯೇಯ.
– ಸೂರಜ್ ಕಲ್ಮನೆ ಅಮದಳ್ಳಿ, (ಬೆಂಗಳೂರು)
M.Sc – Yoga
Founder, Swatma Yoga & Therapy, Bengaluru.