ಸಿದ್ದಾಪುರ: ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜೋಗಿನಮಠ ಸಮೀಪ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಗುಡ್ಡ ಕುಸಿಯುತಿದ್ದು ವಾಹನ ಸಂಚಾರ ಬಂದಾಗುವ ಸಾಧ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ನಿರಂತರವಾಗಿ ವಾಹನಗಳ ಸಂಚಾರ ಎಡೆಬಿಡದೆ ನಡೆಯುತ್ತಿರುತ್ತದೆ. ಘಟ್ಟದ ಕೆಳಗಿನ ಹಾಗೂ ಘಟ್ಟದ ಮೇಲಿನ ಭಾಗಕ್ಕೆ ಮಾತ್ರ ಅಲ್ಲ. ಶಿವಮೊಗ್ಗ-ಬೆಂಗಳೂರು ನಗರಗಳಿಗೆ ಸಂಪರ್ಕ ನೀಡುವ ಪ್ರಮುಖ ಹೆದ್ದಾರಿ ಇದಾಗಿದೆ.
ಜೋಗಿನಮಠದಿಂದ –ಆಡುಕಟ್ಟಾದವರೆಗೆ ಸುಮಾರು ಮೂರು ಕಿ.ಮೀ.ನಷ್ಟು ಘಟ್ಟದ ಪ್ರದೇಶವಾಗಿದೆ. ಹೆದ್ದಾರಿಗೆ ಹೊಂದಿಕೊಂಡೆ ಗುಡ್ಡವೂ ಇದೆ. ಹಲವುದಿನಗಳಿಂದ ಗಾಳಿ-ಮಳೆ ಜೋರಾಗಿರುವುದರಿಂದ ಹೆದ್ದಾರಿಯ ಪಕ್ಕದಲ್ಲಿರುವ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ವಿದ್ಯುತ್ ತಂತಿ ಹಾಗೂ ಕಂಬಗಳು ತುಂಡಾಗಿ ಬಿದ್ದಿದೆ. ಮೂರು ಕಡೆ ಗುಡ್ಡವೂ ಕುಸಿದಿದೆ.
ಇಂತಹ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತಗೊಂಡರೆ ವಾಹನ ಸವಾರರ ಹಾಗೂ ಪ್ರವಾಸಿಗರ ಸ್ಥಿತಿ ಅದೋಗತಿ.
ಗುಡ್ಡಕುಸಿತ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಕಾರವಾರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಡಿಸ್ಲೆ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ವಾಹನ ಸವಾರರು ಎಚ್ಚರಿಕೆಯಿಂದ ಸಂಚಾರ ಮಾಡುವಂತೆ ರಾಷ್ಟ್ರೀಯ ಹೆದ್ದಾರಿಯ ಕಾರವಾರ ಉಪವಿಭಾಗದವರು ಭೂಕುಸಿತ ವಲಯ ಎಚ್ಚರಿಕೆಯ ನಾಮಫಲಕ ಅಳವಡಿಸಿ ಕೈತೊಳೆದುಕೊಂಡಿದೆ. ಇನ್ನು ಭೂಕುಸಿತದಿಂದ ರಸ್ತೆಗೆ ಬಂದಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸಿದೆ.
ಹೆದ್ದಾರಿಗೆ ಹೊಂದಿಕೊAಡೆ ಇರುವ ಗುಡ್ಡದ ತುದಿಯಲ್ಲಿ ಅಪಾಯದ ಮರಗಳಿದ್ದು ಅವುಗಳನ್ನು ಸಂಬಂಧಪಟ್ಟ ಅರಣ್ಯ ಇಲಾಖೆಯವರು ಅಪಾಯ ಸಂಭವಿಸುವುದರೊಳಗೆ ತೆರವುಗೊಳಿಸಬೇಕು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಆದರೆ ಅರಣ್ಯ ಇಲಾಖೆಯವರು ತಾವು ಮರಗಳು ಬಿದ್ದರೆ ಮಾತ್ರ ತೆರವುಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಹೆದ್ದಾರಿ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.
ಗುಡ್ಡ ಕುಸಿದು ರಸ್ತೆ ಸಂಚಾರ ಬಂದಾದರೆ ಬದಲಿ ವ್ಯವಸ್ಥೆಕುರಿತು ತಾಲೂಕು ಆಡಳಿತ ಹಾಗೂ ಹೆದ್ದಾರಿ ವಿಭಾಗ ಚಿಂತನೆ ನಡೆಸಿದೆ. ಚೂರಿಕಟ್ಟೆ-ಸಿದ್ದಾಪುರ-ಮಾವಿನಗುಂಡಿ ಮೂಲಕ ಹೊನ್ನಾವರಕ್ಕೆ ಹಾಗೂ ಕಾರ್ಗಲ್-ಜೋಗ-ಮಾವಿನಗುಂಡಿ ಮೂಲಕ ಹೊನ್ನಾವರಕಡೆಗೆ ಸಂಚಾರ ಮಾಡಬಹದುದಾಗಿದೆ.
ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಕಾರವಾರ ಇದರ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಸತೀಶ ಡಿಸ್ಲೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇನ್ನೂ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಹಾಗೂ ಸಂಭವಿಸುವ ಅವಘಡಗಳನ್ನು ತಪ್ಪಿಸಲು ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸುವ ಕುರಿತು ಸಿದ್ದಾಪುರ ತಹಸೀಲ್ದಾರ ಅವರಿಗೆ ಮಾಹಿತಿ ನೀಡಿದ್ದಾರೆ.
ಬಾಕ್ಸ್
ಗುಡ್ಡಕುಸಿದ ಸ್ಥಳವನ್ನು ಪರಿಶೀಲಿಸಿದ್ದೇನೆ. ಸಂಬಂಧಪಟ್ಟ ಇಲಾಖೆಯವರು ಭೇಟಿ ನೀಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಮತ್ತಷ್ಟು ಗುಡ್ಡ ಕುಸಿದರೆ ಅಪಾಯ ಆಗುವ ಸಾಧ್ಯತೆ ಇರುವುದರಿಂದ ಪರ್ಯಾಯ ಮಾರ್ಗವನ್ನು ಗುರುತಿಸಲಾಗಿದೆ.- ಎಂ.ಆರ್.ಕುಲಕರ್ಣಿ. ತಹಸೀಲ್ದಾರ ಸಿದ್ದಾಪುರ.