ಶಿರಸಿ: ಮಾರ್ಚ್-2025 ನೇ ಮಾಹೆಯ ಹಾಲಿನ ರೂ.5 ಪ್ರೋತ್ಸಾಹಧನವು ಜೂ.17 ಮಂಗಳವಾರದಂದು ಹಾಲು ಉತ್ಪಾದಕರ ಖಾತೆಗೆ ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಹೇಳಿಕೆ ನೀಡಿದ ಅವರು ಒಟ್ಟಾರೆಯಾಗಿ 2024-2025 ನೇ ಸಾಲಿನ ಎಲ್ಲಾ ಮಾಹೆಗಳ ಹಾಲಿನ ಪ್ರೋತ್ಸಾಹಧನ ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆದಂತಾಗಿದ್ದು, ಇದರಿಂದ ಜಿಲ್ಲೆಯ ಹಾಲು ಉತ್ಪಾದಕರಿಗೆ ಬಹಳ ಅನುಕೂಲವಾಗಿದೆ ಎಂದರು. ಪ್ರಸ್ತುತ ಸಾಲಿನಲ್ಲಿ ಏಪ್ರಿಲ್ ಮತ್ತು ಮೇ ಮಾಹೆಗಳ ಹಾಲಿನ ಪ್ರೋತ್ಸಾಹಧನ ಮಾತ್ರ ಹಾಲು ಉತ್ಪಾದಕ ರೈತರ ಖಾತೆಗೆ ಸರ್ಕಾರದಿಂದ ಜಮಾ ಆಗಬೇಕಾಗಿದ್ದು, ಬಾಕಿ ಇರುವ ಕೇವಲ ಈ ಎರಡು ಮಾಹೆಗಳ ಹಾಲಿನ ಪ್ರೋತ್ಸಾಹಧನ ಕೂಡ ಶೀಘ್ರವೇ ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗುವ ನೀರಿಕ್ಷೆಯಿದೆ ಎಂದು ಮಾಹಿತಿ ನೀಡಿದರು. ಮಾರ್ಚ್-2025 ನೇ ಮಾಹೆಯ ರೂ.5 ಪ್ರೋತ್ಸಾಹಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೇ ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.