Slide
Slide
Slide
previous arrow
next arrow

ಏಕಮೇವಾದ್ವಿತೀಯ ಏಕವ್ಯಕ್ತಿ ಸಾಧಕ ಡಾ.ಎ.ಕೆ. ಶಾಸ್ತ್ರಿ: ಡಾ.ಲಕ್ಷ್ಮೀಶ ಸೋಂದಾ

300x250 AD

ಶಿರಸಿ: ಯಾವುದೇ ಸಂಗತಿಯನ್ನು, ವ್ಯಕ್ತಿಯ ಸಾಧನೆಯನ್ನು, ವಸ್ತು ವಿಷಯವನ್ನು ಯಥಾವತ್ ನಿರೂಪಿಸುವುದೇ ಇತಿಹಾಸ. ಇತಿಹಾಸ ಸಂಶೋಧನೆ ಎಂದರೆ ಅದೊಂದು ಯಜ್ಞ, ತಪಸ್ಸು ಇದ್ದಂತೆ ಎಂದು ಇತಿಹಾಸ ತಜ್ಞ ಸಂಶೋಧಕ ಡಾ.ಲಕ್ಷ್ಮೀಶ ಹೆಗಡೆ ಸೋಂದಾ ಹೇಳಿದರು.

 ಅವರು ಇತ್ತೀಚಿಗೆ ಕ.ವಿ.ಪ್ರ.ಲೆಕ್ಕಾಧಿಕಾರಿಗಳ ಸಂಘ ಬೆಂಗಳೂರು ಆಶ್ರಯದಲ್ಲಿ. ಏರ್ಪಡಿಸಲಾದ ಸಾಧಕ ತ್ರಯರಾದ ಡಾ.ಎ.ಕೆ.ಶಾಸ್ತ್ರಿ,ಡಾ.ಗುಂಡಾ ಜೋಯಿಸ್, ಡಾ.ಎಚ್.ಎಸ್.ಗೋಪಾಲ ರಾವ್ ಅವರ ಬದುಕು- ಬರಹ -ಸಾಧನೆ ಕುರಿತು ಮಾತನಾಡುತ್ತಿದ್ದರು.

 ಎ.ಕೆ. ಶಾಸ್ತ್ರಿ ಸುಮಾರು 30,000 ದಾಖಲೆ ಕಡತಗಳನ್ನು ಪರಿಶೀಲಿಸಿ, ಸಂಶೋಧಿಸಿ ಸ್ವರ್ಣವಲ್ಲಿ ಸಂಸ್ಥಾನದ ಇತಿಹಾಸ ಬರೆದವರು, ಅವರು ಕಡತದ ಶಾಸ್ತ್ರಿ ಎಂದೇ ಪ್ರಖ್ಯಾತರಾದವರು. ಸುಮಾರು ಒಂದು ಲಕ್ಷ ದಾಖಲೆಯನ್ನು ಸಂಶೋಧಿಸಿ, ಪರಿಶೀಲಿಸಿ ಶೃಂಗೇರಿಯ ಇತಿಹಾಸವನ್ನು ಬರೆದಿದ್ದಾರೆ. ಅಲ್ಲದೆ ತಲಸ್ಪರ್ಶಿ ಅಧ್ಯಯನದ ಮೂಲಕ ಕರ್ನಾಟಕದ ಹಲವಾರು ಮಠಗಳ, ಮಂದಿರಗಳ ಇತಿಹಾಸವನ್ನು ದಾಖಲೆ ಸಮೇತ ಉಲ್ಲೇಖಿಸಿ, ಬರೆದು ಈ ತಲೆಮಾರಿನ ಅದ್ಭುತ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ. ಇವರು  ಕಡತವನ್ನು ಅಸ್ಖಲಿತವಾಗಿ ಓದಬಲ್ಲ ಭಾರತದ ಏಕೈಕ ವ್ಯಕ್ತಿಯಾಗಿದ್ದರು ಎಂದರೆ ಅತಿಶಯೋಕ್ತಿಯಾಗುವುದಿಲ್ಲ.

ಅವರಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತ ಮೂರೂ ಭಾಷೆಗಳಲ್ಲಿ ಹಿಡಿತವಿತ್ತು.ಅವರ ಕಂಠ, ವಿಷಯ ಸಾಮರ್ಥ್ಯ, ಭಾಷೆಯ ಮೇಲಿನ ಪ್ರಭುತ್ವವು ಅದ್ವಿತೀಯವಾದುದು.  ಇಂತಹ ಅಸಾಧಾರಣ ವ್ಯಕ್ತಿಯನ್ನು ಮೊದಲನೇ ರಾಷ್ಟ್ರಮಟ್ಟದ ಇತಿಹಾಸ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತ್ಯಂತ ಶ್ಲಾಘನೀಯ. ಶಾಸ್ತ್ರಿ ಅವರ ಲೇಖನಿಯಿಂದ 25 ಕೃತಿಗಳು, 5 ಕವನ ಸಂಕಲನ ಹೊರಬಂದಿವೆ. ಅಲ್ಲದೆ ಇವರು ಉದ್ದ ಜಿಗಿತ, ತ್ರಿವಿಧ ಜಿಗಿತ, ಪೋಲ್ ವಾಲ್ಟ್ ನಲ್ಲಿ ರಾಷ್ಟ್ರೀಯ ಮಟ್ಟದ ಅತ್ಯದ್ಭುತ ಕ್ರೀಡಾಪಟುವೂ ಆಗಿರುವುದು ವಿಶೇಷವಾಗಿದೆ. ಇವರ ಔನ್ನತ್ಯಕ್ಕೆ ಅನಂತ ಕೃಷ್ಣ ಚರಿತ ಅಭಿನಂದನ ಗ್ರಂಥ ಸಮರ್ಪಣೆ ಆಗಿದೆ. ಇವರನ್ನು ಸ್ಮರಿಸುವುದು, ಇವರ ಸಾಧನೆಯನ್ನು ಕೊಂಡಾಡುವುದು ಅವರ ಶಿಷ್ಯನಾಗಿ ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಡಾ.ಲಕ್ಷ್ಮೀಶ ಸೋಂದಾ ಹೇಳಿದರು.

93 ವರ್ಷಗಳಷ್ಟು ಕಾಲ ಬದುಕಿ ಜೀವನವನ್ನು ಸಾರ್ಥಕ ಮಾಡಿಕೊಂಡ ಡಾ. ಗುಂಡಾ ಜೋಯಿಸ್ ಅವರ ಕುರಿತು ಮಾತನಾಡುತ್ತಾ, ಇವರು ಮೂಡಿ, ತಿಗಳಾರಿ, ಹಳಗನ್ನಡ, ನಂದಿನಾಗರಿ ಲಿಪಿಗಳನ್ನು ಸರಾಗವಾಗಿ ಓದುತ್ತಿದ್ದರು, ತಮ್ಮ 50ನೇ ವಯಸ್ಸಿನಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ವೇದಾಭ್ಯಾಸ ಮಾಡಿ, ಆಗಮ ವೇದ ವಿದ್ವಾನ್, ಕನ್ನಡ ಪಂಡಿತ, ಕನ್ನಡ ರತ್ನ ಹಿಂದಿ ಪ್ರಭೋದ ಪರೀಕ್ಷೆಗಳನ್ನು ಕೂಡ ತೇರ್ಗಡೆಯಾದವರು. ಹಲವಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಇವರು, ಉಪನ್ಯಾಸಕರಾಗಿಯೂ, ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಾಗಿಯೂ, ಪತ್ರಗಾರ ಇಲಾಖೆಯ ಉಪನ್ಯಾಸಕರಾಗಿ, ಚಾರಿತ್ರಿಕ ಸರ್ವೇ ಕ್ಷಣಾ ಸಮಿತಿ ಸದಸ್ಯರಾಗಿ, ಕರ್ನಾಟಕ ಇತಿಹಾಸ ದಾಖಲೆ ಸಂಶೋಧನಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ತಮಿಳುನಾಡಿಗೆ ಸರ್ಕಾರದ ಪ್ರತಿನಿಧಿಯಾಗಿ ಸಾಂಸ್ಕೃತಿಕ ನಿಯೋಗದಲ್ಲಿಯೂ ಭಾಗಿಯಾದವರು. ತಮ್ಮ 17ನೇ ವರ್ಷದಿಂದಲೇ ಕೆಳದಿಯ ಕುರಿತು ಅಧ್ಯಯನ ಮಾಡಿ, ಲಂಡನ್ ,ಇಟಲಿ ದೇಶಗಳಿಗೂ ಸಂಚರಿಸಿ ಸತತ ಎಂಬತ್ತು ವರ್ಷ ಕೆಳದಿಯ ಇತಿಹಾಸಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು 2600 ಕ್ಕೂ ಹೆಚ್ಚು ತಾಳೆಗರಿ ಇತರ ಮಹತ್ವದ ಶಾಸನಗಳನ್ನು ಸಂಗ್ರಹಿಸಿ ಮನೆಯನ್ನೇ 
ಮ್ಯೂಸಿಯಂ ಆಗಿ ಮಾರ್ಪಡಿಸಿದವರು. ಇವರು 30 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ನಿಷ್ಕಳಂಕಣಿ ಕೆಳದಿ ವೀರಮ್ಮಾಜಿ, ಕೆಳದಿ ನೃಪ ವಿಜಯ ಪ್ರಸಿದ್ಧವಾದುದು.
 250 ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ ಇವರು ಹಲವಾರು ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು. ಸ್ವೀಡನ್ ವಿಶ್ವವಿದ್ಯಾನಿಲಯದಿಂದ ಸ್ಕ್ರಿಪ್ಟ್ ಎಕ್ಸ್ಪರ್ಟ್ ಎಂಬ ಬಿರುದನ್ನು ಇವರು ಪಡೆದರೂ ಸಹ ಇವರ ಪಾಂಡಿತ್ಯ, ವಿದ್ವತ್ತು ಯೋಗ್ಯತೆಗೆ ತಕ್ಕದಾದ ಗೌರವ ಸನ್ಮಾನಗಳು ಸಿಗದಿರುವುದು ಬೇಸರದ ಸಂಗತಿ ಎಂದು ಲಕ್ಷ್ಮೀಶ್ ಸೋಂದಾ ನುಡಿದರು.

300x250 AD

ಡಾ.ಎಚ್.ಎಸ್.ಗೋಪಾಲ ರಾವ್ ಅವರ ಕುರಿತು ತಿಳಿಸುತ್ತಾ, ಇವರು ಇಂಜಿನಿಯರ್ ಆದವರು, ಕನ್ನಡ ಎಂಎ ಮಾಡಿದರು, ಶಾಸನಶಾಸ್ತ್ರ ವಿಷಯದ ಮೊದಲ ವಿದ್ಯಾರ್ಥಿಯಾಗಿ ಪದವಿ ಪಡೆದವರು. ವಿದ್ಯುತ್ ಇಲಾಖೆಯಲ್ಲಿ ಇಂಜಿನಿಯರಾಗಿ ಕನ್ನಡ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಆಕರ್ಷಕ ವ್ಯಕ್ತಿತ್ವ , ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ .
ಕಾದಂಬರಿ, ನಾಟಕ, ಸಂಗೀತ, ಪುರಾಣ,  ಶಾಸನಗಳ ಸಂಶೋಧನೆ, ಇತಿಹಾಸ, ಶಿಲ್ಪ ಶಾಸ್ತ್ರ, ಸಿನಿಮಾ, ಕಿರು ಚಿತ್ರಗಳಲ್ಲಿಯೂ ಕೃಷಿ ಮಾಡಿದ್ದು  ಇವೆಲ್ಲ ಫೀಲ್ಡ್ ಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದವರು.
ಇವರು 25 ವರ್ಷಗಳಷ್ಟು ಕಾಲ ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿಯಾಗಿರುವದು, ಇವರ ವಿದ್ವತ್ತು ಎಷ್ಟು?, ಇವರ ಸಂಘಟನಾ ಚತುರತೆ ಎಷ್ಟು ?ಎನ್ನುವುದಕ್ಕೆ ನಿದರ್ಶನ. ಡಾ. ಸೂರ್ಯನಾಥ ಕಾಮತ, ಶ್ರೀನಿವಾಸ್ ರಿತ್ತಿ, ಚಿದಾನಂದಮೂರ್ತಿ ಇಂತಹ ಘಟಾನುಘಟಿಗಳ ಒಡನಾಟ ಇವರಿಗಿತ್ತು. 
ಜಲಗಾರ ದಿಬ್ಬ ಶಾಸನ, ಕಪ್ಪೆ ಅರಭಟ್ಟನ ಶಾಸನ ಇವರ ವಿದ್ವತ್ ಸಂಪತ್ತಿಗೆ, ಇವರ ಪಾಂಡಿತ್ಯಕ್ಕೆ ಸಾಕ್ಷಿಯಾದ ಕೃತಿ ವಿಶೇಷಗಳು ಎಂದು ಡಾ.ಸೋಂದಾ ಹೇಳಿದರು. 

ಭಾರತ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಾಮುಖ್ಯತೆ ತಂದುಕೊಟ್ಟಂತಹ ಸಂಸ್ಕೃತಿ, ಇತಿಹಾಸ, ಪರಿಸರವನ್ನು ತುಂಬಾ ನಿರ್ಲಕ್ಷ ಮಾಡಿದ್ದೇವೆ. ಅಮೆರಿಕದ ನಿದರ್ಶನ ಒಂದನ್ನು ಉದಾಹರಿಸಿ “ಯಾವ ದೇಶಕ್ಕೆ ಇತಿಹಾಸವೇ ಇಲ್ಲವೋ, ಆ ದೇಶ ಇತಿಹಾಸವನ್ನು ತಲೆಯ ಮೇಲೆ ಇಟ್ಟುಕೊಂಡಿದ್ದರೆ, ಯಾವ ದೇಶದಲ್ಲಿ ಎಲ್ಲವೂ ಇತಿಹಾಸವೋ ಆ ಭಾರತ, ಇತಿಹಾಸವನ್ನು ಕಾಲ ಬಳಿ ಇಟ್ಟುಕೊಂಡಿದೆ!!!” ಎಂದು ಹೇಳಿ, ಇದು ವ್ಯವಸ್ಥೆಯ ವ್ಯಂಗ್ಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಭಾರತದ ಪ್ರತಿಯೊಂದು ಹಳ್ಳಿ,  ಮನೆಗಳು ಇತಿಹಾಸವನ್ನು ಹೊಂದಿದ್ದು ಈಗಿನ ತಲೆಮಾರು ಅದನ್ನು ಉಳಿಸಿ, ಬೆಳೆಸಿ, ಗೌರವಿಸುವ ಕೆಲಸವಾಗಬೇಕೆಂದು ಮಾರ್ಮಿಕವಾಗಿ ನುಡಿದರು.

ಉಪನ್ಯಾಸದ ನಂತರ ವಿದುಷಿ ಶ್ರೀಸನ್ನಿಧಿ ಹಾಗೂ ಅವರ ಶಿಷ್ಯೆಯರಿಂದ ನಟೇಶ ತತ್ವ, ನೃತ್ಯಾಂಜಲಿ, ಅಲಿರಿಪು, ಪೋಗದಿರೆಲೋ ರಂಗ, ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಗೂ ಸೂರ್ಯ ಗಾಯತ್ರಿ ಹಾಡಿದ ನಮೋ ನಮೋ ಭಾರತಾಂಬೆ ಭರತನಾಟ್ಯ ಸಭಿಕರ ಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಕಲಾವಿದೆಯನ್ನು ಸನ್ಮಾನಿಸಲಾಯಿತು
 
ಅಣೆಕಟ್ಟು ಮಧುಸೂಧನ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಚರಣ ಕುಮಾರ್ ಉಪನ್ಯಾಸಕರ, ಕಲಾವಿದೆಯ ಪರಿಚಯ ಮಾಡಿಕೊಟ್ಟರು. ಡಾ. ಶಿವಸ್ವಾಮಿ, ಸುಚೇತನ ಬಿ ಪ್ರಾರ್ಥನೆ ಹಾಡಿದರು. ಸಮಾರಂಭದಲ್ಲಿ ಸಾಹಿತಿಗಳಾದ ಕೆ ವಿ ನಾಗರಾಜ್ ದಿನೇಶ್ ಉಪ್ಪೂರ್, ಬನವಾಸಿ ಕೃಷ್ಣಮೂರ್ತಿ, ನಂಜುಂಡಸ್ವಾಮಿ,
ಪ್ರಭಾಕರ್ ಗಂಗೊಳ್ಳಿ, ಸಿದ್ದಣ್ಣ ಸೊನ್ನದ್, ಬಿ ವಿ ರಾವ್, ಕೊಪ್ಪರಂ ಅನ್ನಪೂರ್ಣ, ಸಂಘದ ಹಿರಿಯ ಸದಸ್ಯರುಗಳಾದ ಬಿ ಸತ್ಯನಾರಾಯಣ, ಉಲಿಗೆ ಸ್ವಾಮಿ, ಕೃಷ್ಣಮೂರ್ತಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಗೀತಾ ಸಭಾಹಿತ ಗೌರವಾರ್ಪಣೆ ಸಲ್ಲಿಸಿ, ವಂದಿಸಿದರು. 

Share This
300x250 AD
300x250 AD
300x250 AD
Back to top