ದಾಂಡೇಲಿ : ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಬಂಧಿಸುವ ವೇಳೆ ಹಲ್ಲೆಗೊಳಗಾಗಿ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಮತ್ತು ಕೃಷ್ಣ ಅವರನ್ನು ನಗರದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ್ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾನುವಾರ ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿ, ಪೊಲೀಸರ ಸಾಹಸಿಕ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಷ್ಣು ನಾಯರ್ ಅವರು ಇಡೀ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ಎಸಗಿದ ಆರೋಪಿಯನ್ನು ತಮ್ಮ ಜೀವವನ್ನು ಲೆಕ್ಕಿಸದೆ ಹಿಡಿದ ಪೊಲೀಸರ ಕಾರ್ಯ ನಿಜಕ್ಕೂ ಅಭಿನಂದನೆಗೆ ಅರ್ಹವಾಗಿದೆ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಮುಂದಾಗಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಪ್ರಜ್ಞಾವಂತ ನಾಗರಿಕರಾದ ನಾವೆಲ್ಲ ಬೆಂಬಲಿಸಬೇಕೆಂದು ಕರೆ ನೀಡಿ, ಗಾಯಗೊಂಡ ಪಿಎಸ್ಐ ಮತ್ತು ಪೊಲೀಸ್ ಸಿಬ್ಬಂದಿಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಸಿದ್ದೇಶ್ವರ ಕೊದಾನಪುರ, ಆನಂದ ಕಾಂಬಳೆ, ಮಂಜು ಶೆಟ್ಟಿ, ಸಂಜಯ ಘೋರ್ಪಡೆ, ಜ್ಯೋತಿಬಾ ತುಳಸಿಕರ್, ಪರಶುರಾಮ ವಡ್ಡರ, ಮಹ್ಮದ್ ಅಲಿ ಕಳಸಾಪುರ, ಅನಂತ ನಾಯ್ಕ್, ಮಂಜು ಶೆಟ್ಟಿ, ಉಮ್ಮರ ಶೇಖ, ಉಮಾ ಹನುಮಸಾಗರ, ಮಹಾಂತೇಶ ಮಡಿವಾಳ, ಲಕ್ಷ್ಮಣ್ ನಾಯ್ಕ, ಎಸ್.ಕೆ ಹೀರೆಮಠ ಮೊದಲಾದವರು ಉಪಸ್ಥಿತರಿದ್ದರು.