ದಾಂಡೇಲಿ: ಭಾವೆಕ್ಯತೆ ಸಾರುವ ಹಾಗೂ ತ್ಯಾಗ ಬಲಿದಾನದ ಪ್ರತಿಕವಾದ ಹಾಗೂ ಮುಸ್ಲಿಂ ಧರ್ಮಬಾಂಧವರ ಹಬ್ಬಗಳಲ್ಲಿ ಪ್ರಮುಖವಾಗಿರುವ ಬಕ್ರೀದ್ ಹಬ್ಬವನ್ನು ಶನಿವಾರ ನಗರದಲ್ಲಿ ಮುಸ್ಲಿಂ ಬಾಂಧವರು ಸಂಭ್ರಮ, ಸಗಡರದಿಂದ ಆಚರಿಸಿದರು. ಬಕ್ರೀದ್ ಹಬ್ಬದ ಅಂಗವಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಆಚರಣೆಗಳು ನಡೆದವು.
ನಗರದ ಬೈಲುಪಾರ್ ಈದ್ಗಾ ಮೈದಾನ, ಅಂಬೇವಾಡಿ ಈದ್ಗಾ ಮೈದಾನ ಮತ್ತು ಪಟೇಲನಗರದ ಈದ್ಗಾ ಮೈದಾನದಲ್ಲಿ ಹಾಗೂ ಉಳಿದೆಡೆ ಆಯಾಯ ಮಸೀದಿಗಳಲ್ಲಿ ಶನಿವಾರ ಬೆಳಿಗ್ಗೆ ಮುಸ್ಲಿಂ ಧರ್ಮ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಗುರುಗಳು ಧಾರ್ಮಿಕ ಪ್ರವಚನ ನೀಡಿದರು. ಸಾಮೂಹಿಕ ಪ್ರಾರ್ಥನೆಯ ಬಳಿಕ ಮುಸ್ಲಿಂ ಧರ್ಮ ಬಾಂಧವರು ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡರು. ಬಕ್ರೀದ್ ಹಬ್ಬದ ನಿಮಿತ್ತ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.