ಪುಸ್ತಕ ಪರಿಚಯ- ಮುಕ್ತಾ ಹೆಗಡೆ
ಪುಸ್ತಕ:- ಅಪ್ರತಿಮ ದೇಶ ಭಕ್ತ, ಸ್ವಾತಂತ್ರ್ಯ ವೀರ ಸಾವರ್ಕರ್
ಲೇಖಕರು:- ಚಕ್ರವರ್ತಿ ಸೂಲಿಬೆಲೆ
ಪ್ರಕಟಣೆ:- ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು.
ಇಂದು ನಾವು ಬಾಳುತ್ತಿರುವ ಬದುಕಿನ ಹಿಂದೆ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವಿದೆ. ಅಂತಹ ತ್ಯಾಗಗಳನ್ನು ಮಾಡಿದವರಲ್ಲಿ ಸಿಂಹಪಾಲು ಸಾವರ್ಕರ್ ಅವರದ್ದು. ಅವರ ಕುರಿತು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ಇತಿಹಾಸ ಕಂಡ ಅಪ್ರತಿಮ ಹೋರಾಟಗಾರ, ಮಹಾನ್ ಚೇತನ ಸ್ವಾತಂತ್ರ್ಯ ವೀರ ಸಾವರ್ಕರ್. ಅವರ ಜೀವನದ ನೈಜ ಕತೆಯನ್ನು ಕನ್ನಡಿಗ ತಿಳಿದುಕೊಳ್ಳಲು ಇದು ಅತ್ಯುತ್ತಮ ಪುಸ್ತಕ.
ಸಾವರ್ಕರ್ ಅವರ ಬಾಲ್ಯದಿಂದ ಅವರು ಆತ್ಮಾರ್ಪಣೆಯನ್ನು ಮಾಡಿಕೊಳ್ಳುವವರೆಗೆ ಅವರ ಪೂರ್ಣ ಜೀವನ ಕುರಿತು ಈ ಪುಸ್ತಕದಲ್ಲಿ ಬರೆದಿದ್ದಾರೆ. ವಿನಾಯಕರಲ್ಲಿದ್ದ ಅಪಾರ ದೇಶಭಕ್ತಿ, ಯುವಕರನ್ನು ಅವರು ರಾಷ್ಟ್ರಾರ್ಪಿತ ಮಾಡಿದ ರೀತಿ, ಭಾರತಿಯನ್ನು ಆರಾಧಿಸುತ್ತಿದ್ದ ಪರಿ, ಅವರ ಬದುಕಿಗೊದಗಿದ ಕಷ್ಟ, ಅವರು ಹೊತ್ತ ಸ್ವಾತಂತ್ರದ ಕನಸು.ಹೀಗೆ ಸಂಪೂರ್ಣ ಸಾವರ್ಕರ್ ಅವರ ಮನೋನ್ನತ ಬದುಕು ಇಲ್ಲಿ ಅನಾವರಣಗೊಂಡಿದೆ.
ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಬಳಸಿಕೊಳ್ಳುತ್ತಿರುವವರು ಈ ಪುಸ್ತಕವನ್ನು ಒಮ್ಮೆ ಓದಬೇಕು. ‘ಸೆಲ್ಯುಲರ್ ಜೈಲು, ಅದಕ್ಕಿಂತಲೂ ನರಕವೇ ಮೇಲು’ ಎಂಬ ಅಧ್ಯಾಯದಲ್ಲಿ ಕಾಲಾಪಾನಿ ಶಿಕ್ಷೆಯ ಕಠೋರತೆ ಕಣ್ಣಾಲಿಗಳನ್ನು ತುಂಬಿಸಿತು.
ಮಾತೃಭೂಮಿಗಾಗಿ ಬಾಳ ಸವೆಸಿದ ಸಾವರ್ಕರ್ ಅವರಿಗೆ ‘ಹೇಡಿ’ ಎಂದು ಕರೆದು ಸರ್ಕಾರ ಅವರನ್ನು ಬದಿಗಿಟ್ಟು ಬಿಟ್ಟಿತು. ಅದನ್ನು ನಂಬದೇ ಸಾವರ್ಕರ್ ಅವರ ಬದುಕಿನ ತ್ಯಾಗವನ್ನು ನಾವು ಅರ್ಥ ಮಾಡಿಕೊಳ್ಳಲು ಖಂಡಿತ ಈ ಪುಸ್ತಕವನ್ನು ಓದಬೇಕು.
ಅರ್ಥಪೂರ್ಣವಾದ ಈ ಪುಸ್ತಕವನ್ನು ಓದೋಣ. ಸಾವರ್ಕರ್ ಅವರ ಬದುಕನ್ನು ಅರಿಯೋಣ. ಅವರ ಬದುಕಿನ ಒಂದಂಶವನ್ನಾದರೂ ಬಾಳುವ ಪ್ರಯತ್ನವನ್ನು ಮಾಡೋಣ.