ಹೊನ್ನಾವರ : ತಾಲೂಕಿನ ಮುಗ್ವಾ ಗ್ರಾ. ಪಂ. ವ್ಯಾಪ್ತಿಯ ತನ್ಮಡಗಿಯ ಮಮತಾ ದುರ್ಗಯ್ಯ ಮೇಸ್ತ (26) ಶನಿವಾರ ಸಂಜೆ ಅನಾರೋಗ್ಯದಿಂದ ಮೃತ ಪಟ್ಟಿದ್ದಾಳೆ.
ಬಿ. ಎ ವ್ಯಾಸಂಗ ಮಾಡಿರುವ ಈಕೆ, ಕಳೆದ ಮೂರು ವರ್ಷದಿಂದ ಮುಗ್ವಾ ಗ್ರಾಮ ಒನ್ ಜನ ಸೇವಾ ಕೇಂದ್ರದಲ್ಲಿ (ಕವಲಕ್ಕಿಯಲ್ಲಿ ) ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತ, ಅಪಾರ ಜನರ ಪ್ರೀತಿ ವಿಶ್ವಾಸಗಳಿಸಿದ್ದಳು. ಕ್ರಿಯಾಶೀಲವಾಗಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದ ಇವಳು, ಎಲ್ಲಾ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿದ್ದಳು.
ಕಳೆದ ಸೋಮವಾರದಂದು ಬೆಳಿಗ್ಗೆಯಿಂದ ಸಂಜೆ ತನಕ ಕೆಲಸ ಮಾಡಿ ಮನೆಗೆ ಹೋಗಿ, ಮಂಗಳವಾರ ಅರೋಗ್ಯದಲ್ಲಿ ವ್ಯತ್ಯಾಸವಾಗಿ ಸ್ಥಳೀಯ ಆಸ್ಪತ್ರೆಗೆ ಬಂದು ಔಷದಿ ಪಡೆದು ಹೋಗಿದ್ದಳು. ನಂತರ ಸ್ವಲ್ಪ ಚೇತರಿಸಿಕೊಂಡಿದ್ದಾಳೆ. ಗುರುವಾರ ಮತ್ತೆ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಹೊನ್ನಾವರದ ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾಳೆ. ಶನಿವಾರ ಸಂಜೆ ತನಕ ಗಂಭೀರ ಆರೋಗ್ಯ ಸಮಸ್ಯೆ ಕಂಡುಬರಲಿಲ್ಲ. ಅಮ್ಮ ಮತ್ತು ಅಣ್ಣನೊಂದಿಗೆ ಮಾತನಾಡುತ್ತಾ ಇದ್ದಾಳೆ. ರಾತ್ರಿ ಸಮಯದಲ್ಲಿ ದಿಢೀರ್ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಹೊರ ಜಿಲ್ಲೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ದಾರಿ ಮದ್ಯದಲ್ಲಿ ಉಸಿರು ನಿಲ್ಲಿಸಿದ್ದಾಳೆ. ಕೊನೆಗೆ ಅರಿಸಿಣ ಮುಂಡಿಗೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡು ಮರೆಯಾಗಿದ್ದಾಳೆ. ಚಿಕಿತ್ಸೆ ನೀಡಿದವರು ಹೇಳಿದ್ದನ್ನು ನಂಬಲೇಬೇಕಾಗಿದೆ. ಜಿಲ್ಲೆಯಲ್ಲಿ ಆಸ್ಪತ್ರೆ ಇಲ್ಲದ ಕಾರಣಕ್ಕೆ ದಾರಿ ಮದ್ಯದಲ್ಲಿ ಮೃತ ಪಟ್ಟವರ ಸಂಖ್ಯೆಯ ಸಾಲಿಗೆ ಇವಳು ಸೇರ್ಪಡೆ ಆಗಿದ್ದಾಳೆ.
ಮೇ ತಿಂಗಳ ಕೊನೆಯಲ್ಲಿ ಸಾಗರದ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿತ್ತು. ಕಲ್ಯಾಣ ಮಂಟಪ ನಿಗದಿ ಆಗಿ, ಲಗ್ನ ಪತ್ರಿಕೆಯ ಮುದ್ರಣವೊಂದು ಬಾಕಿ ಉಳಿದಿತ್ತು. ಮದುವೆಯ ಉಳಿದೆಲ್ಲ ಸಿದ್ಧತೆ ನಡೆದಿದೆ. ಏಪ್ರಿಲ್ ಅರ್ಧ ತಿಂಗಳು ಮಾತ್ರ ಕೆಲಸಕ್ಕೆ ಬರುವುದಾಗಿ ತಿಳಿಸಿದ್ದಾಳೆ. ಗಂಡಿನ ಮನೆಯವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೆ ಅಕ್ಕನ ಮಕ್ಕಳಿಗೆ ಮದುವೆ ಬಟ್ಟೆಯನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದಾಳೆ. ಅಣ್ಣನ ಜೊತೆ ಲೂಡೋ ಗೇಮ್ ಆಡಿದ್ದಾಳೆ.
ಇಷ್ಟೆಲ್ಲ ಮಾಡಿ ದಿಢೀರನೇ ಉಂಟಾದ ಅನಾರೋಗ್ಯ ಸಾವಿನ ದವಡೆಗೆ ನೂಕಿ ಬಿಟ್ಟಿದೆ. ಇಡೀ ಊರಿಗೆ ಊರೇ ಮೌನಕ್ಕೆ ಜಾರಿದೆ. ಮನೆಯಲ್ಲಿ ಅಮ್ಮನ ರೋಧನೆ, ಬಂಧು ಬಾಂಧವರ ಕಣ್ಣೀರು, ನೋಡುವವರ ಮನಸ್ಸು ಕರಗಿಸಿ ಬಿಟ್ಟಿದೆ. ಮದುವೆ ನಿಶ್ಚಯವಾದ ಹುಡುಗ, ಹುಡುಗನ ತಂದೆ ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಸೊಸೆಯಾಗಿ ಪಡೆಯಬೇಕಿದ್ದವಳನ್ನು ಕಳೆದುಕೊಂಡಿದ್ದಕ್ಕೆ ಕಣ್ಣು ಒದ್ದೆ ಆಗಿದೆ. ಒಟ್ಟಾರೆ ಎಲ್ಲರ ಬಾಯಲ್ಲಿ ಮಮತಾ ಮಮತಾ ಎಂದು ಕರೆಸಿಕೊಂಡು ಮಾತೆ ಆಡದೆ ಮೌನಕ್ಕೆ ಜಾರಿದ್ದಾಳೆ.