ದಾಂಡೇಲಿ : ಪಕ್ಷನಿಷ್ಠೆ ಅವರನ್ನು ನೋಡಿ ಕಲಿಯಬೇಕು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನಸೇವೆ ಮತ್ತು ಪಕ್ಷ ಸಂಘಟನೆಗಾಗಿ ತನ್ನನ್ನು ತಾನು ಸಮರ್ಪಣಾಭಾವದಿಂದ ತೊಡಗಿಸಿಕೊಂಡಿದ್ದ 48 ರ ಹರೆಯದ ದಾಂಡೇಲಿಯ ಬಿಜೆಪಿ ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಮೇಶ ಕಾಂಬಳೆ ಅವರ ಅಕಾಲಿಕ ನಿಧನಕ್ಕೆ ಮಾಜಿ ಶಾಸಕ ಸುನೀಲ ಹೆಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.
ಅವರು ಗುರುವಾರ ರಮೇಶ ಕಾಂಬಳೆಯವರ ಅಂತಿಮ ದರ್ಶನವನ್ನು ಪಡೆದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡುತ್ತಾ, ರಮೇಶ್ ಕಾಂಬಳೆ ಅವರು ಒಬ್ಬ ದೈವಭಕ್ತರಾಗಿದ್ದರು. ಹಾಗಾಗಿ ಸಮಾಜದ ಬಗ್ಗೆ ಇನ್ನೊಬ್ಬರ ಸಂಕಷ್ಟದ ಬಗ್ಗೆ ಸದಾ ಮರುಗುತ್ತಿದ್ದಂತಹ ಸಮಾಜಮುಖಿ ವ್ಯಕ್ತಿತ್ವವನ್ನು ಹೊಂದಿದ್ದರು. ತನಗಾಗಿ ಏನನ್ನು ಬಯಸದ ಸಮಾಜಕ್ಕಾಗಿಯೇ ತನ್ನನ್ನು ಬಳಸಿಕೊಂಡ ರಮೇಶ್ ಕಾಂಬಳೆ ಅವರ ವ್ಯಕ್ತಿತ್ವ ಅನುಕರಣೀಯ ಮತ್ತು ಸದಾ ಸ್ಮರಣೀಯ. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ಭಗವಂತ ಅನುಗ್ರಹಿಸಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತವಾಗಲೆಂದು ಪ್ರಾರ್ಥಿಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಬುದವಂತಗೌಡ ಪಾಟೀಲ್, ಉಪಾಧ್ಯಕ್ಷ ಗುರು ಮಠಪತಿ, ಬಿಜೆಪಿ ಮುಖಂಡರಾದ ಬಸವರಾಜ ಕಲಶೆಟ್ಟಿ, ರವಿ ಗಾಂವಕರ, ಬಸವರಾಜ್ ಹುಂಡೆಕರ, ಹನುಮಂತ ಕಾರಗಿ, ಸುಭಾಷ ಭೋವಿವಡ್ಡರ, ಅಪ್ಪಾರಾವ್ ಕಾಂಬಳೆ ಹಾಗೂ ಪಕ್ಷದ ನಗರಸಭೆಯ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕಾರ್ಯಕರ್ತರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿ ಮೃತರ ಕುಟುಂಬಸ್ಥರಿಗೆ ಮೃತರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ದಾಂಡೇಲಪ್ಪ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.