ಶಿರಸಿ: ಹಸಿರು ಸ್ವಾಮೀಜಿ ಎಂದೇ ಹೆಸರಾದ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಶ್ರೀಗಳ ಹಸಿರು ನಡೆಗೆ ಮಠದ ಕಿರಿಯ ಸ್ವಾಮೀಜಿ ಶ್ರೀ ಆನಂದಭೋದೇಂದ್ರ ಸರಸ್ವತೀ ಸ್ವಾಮೀಜಿಗಳೂ ಸಾತ್ ನೀಡಿದ ಅರೂಪದ ಘಟನೆ ಶ್ರೀ ಮಠದ ಸಸ್ಯಲೋಕದ ಆವರಣವು ಪರಿಸರ ಪ್ರಿಯರ ನಡುವೆ ಸಾಕ್ಷಿಯಾಯಿತು.
ಸ್ವರ್ಣವಲ್ಲೀ ಮಹಾಸಂಸ್ಥಾನದ ಸಸ್ಯಲೋಕದಲ್ಲಿ ಪವಿತ್ರ ವೃಕ್ಷಾರೋಪಣ ಕಾರ್ಯಕ್ರಮವು ಶ್ರೀಮಠ, ಸಸ್ಯಲೋಕ ವಿಭಾಗ, ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯಿತು. ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಬ್ಬರೂ ಪೇರಲೆ ಗಿಡ ನೆಟ್ಟರು. ವಿಶೇಷ ಎಂದರೆ ಕಿರಿಯ ಶ್ರೀಗಳು ಗಿಡ ನೆಡುವಾಗ ಜೊತೆಗೇ ನಿಂತು ದೊಡ್ಡ ಶ್ರೀಗಳು ಪ್ರೇರೇಪಿಸಿದರು.
ಬಳಿಕ ಮಾತನಾಡಿದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು, ಕೇವಲ ಗಿಡ ನೆಡುವ ಕಾರ್ಯ ಆಗಬಾರದು. ನೆಟ್ಟ ಗಿಡದ ಲಾಲನೆ ಪಾಲನೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಮಠದ ಸಸ್ಯಲೋಕದಲ್ಲಿ ಸುಮಾರು 150 ಬೇರೆ ಬೇರೆ ಜಾತಿಯ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ, ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಹರೀಶ್, ವಲಯಾರಣ್ಯಾಧಿಕಾರಿ ಶಿವಾನಂದ ನಿಂಗಾಣಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಮಠದ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ, ಸೀತಾರಾಮ ಹೆಗಡೆ ನೀರ್ನಳ್ಳಿ, ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಅನಂತ ಅಶೀಸರ, ಮಹಾಬಲೇಶ್ವರ ಗುಮ್ಮನಿ, ಲಕ್ಷ್ಮೀನಾರಾಯಣ ಭಟ್ ಕಳಚೆ, ರತ್ನಾಕರ ಬಾಡಲಕೊಪ್ಪ ಇತರರು ಇದ್ದರು.