ಕಾರವಾರ: 12 ನೇ ಶತಮಾನದ ಬಸವಣ್ಣನವರ ಸಮಕಾಲಿನ ಶರಣರಲ್ಲಿ ಮಡಿವಾಳ ಮಾಚಿದೇವ ಒಬ್ಬರಾಗಿದ್ದು, ಯಾವುದೇ ಜಾತಿ ಧರ್ಮ ಭೇದಭಾವವಿಲ್ಲದೇ ಎಲ್ಲರೂ ಸಾಹಿತ್ಯಗಳನ್ನು ರಚಿಸಲು ಸಹಕರಿಸಿ ಅವುಗಳ ರಕ್ಷಣೆ ಮಾಡುವ ಮೂಲಕ ಸಮಾಜಕ್ಕೆ ಸಾಹಿತ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಮಡಿವಾಳ ಮಾಚಿದೇವ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮಡಿವಾಳ ಮಾಚಿದೇವ, ಸಮಾಜದಲ್ಲಿ ಮೂಡ ನಂಬಿಕೆ, ಮೇಲು- ಕೀಳು ಎಂಬ ತಾರತಮ್ಯ ಹೊಗಲಾಡಿಸಲು ದಿಟ್ಟತನದಿಂದ ದುಷ್ಟರ ವಿರುದ್ಧ ಹೊರಾಡಿ ಸಮಾಜದ ಸಮಾರಸ್ಯ ಮತ್ತು ಏಕತೆಗೆ ತಮ್ಮ ಜೀವದ ಹಂಗನ್ನು ತೊರೆದು ಸಾಹಿತ್ಯದ ಜೊತೆಗೆ ಸಮಾಜಕ್ಕೆ ಸಮಾನತೆ ಸಂದೇಶವನ್ನು ಸಾರಿ ಉತ್ತಮ ಸಮಾಜ ಸೇವೆಯಲ್ಲಿ ತೊಡಗಿದ್ದವರು ಎಂದರು.
ಸಮಯ ಪ್ರಜ್ಞೆಯನ್ನು ಅರಿತುಕೊಂಡು, ಪ್ರತಿಯೊಬ್ಬರೂ ವಚನ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿರಂತರ ಪ್ರಯತ್ನ ಪಟ್ಟಲ್ಲಿ ಯಶಸ್ಸು ಖಜಿತವಾಗಿ ದೊರೆಯಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಚಿತ್ತಾಕುಲಾ ಸರಕಾರಿ ಫ್ರೌಢಶಾಲೆಯ ಶಿಕ್ಷಕಿ ಶ್ರೀದೇವಿ ಕೆರೆಮನೆ ಮಡಿವಾಳ ಮಾಚಿದೇವ ಅವರು ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವೀರಘಂಟೆ ಎಂದೇ ಪ್ರಸಿದ್ದಿ ಪಡೆದ ಮಡಿವಾಳ ಮಾಚಿದೇವ, ಎಲ್ಲಾ ಧರ್ಮದವರನ್ನು ಸೇರಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದವರಲ್ಲಿ ಒಬ್ಬರು ಇವರು ದೇವರ ಭಕ್ತಿಗಿಂತ ಕಾಯಕಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಕಾಯಕ ನಿಷ್ಠೆ, ಶ್ರದ್ಧೆಗೆ ಹೆಸರುವಾಸಿಯಾದವರು ಇವರ 339 ವಚನ ಸಾಹಿತ್ಯಗಳು ಲಭ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಮಡಿವಾಳ ಮಾಚಿದೇವ ಸಮುದಾಯದ ಮುಂಖಡ ಶಾಂತ ಮಡಿವಾಳ, ಸಮಾಜದವರು, ಶಿವಾಜಿ ವಿದ್ಯಾ ಮಂದಿರದ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.