ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡಕ್ಕೆ ರಾಯಪ್ಪ ಹುಲೇಕಲ್ ಶಾಲೆ ಜಾಗ ನೀಡಲು ನಿರ್ಧರಿಸಲಾಗಿದೆ ಎಂದು ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಗಣಪತಿ ನಾಯ್ಕ ಮಾಹಿತಿ ನೀಡಿದರು.
1 ಎಕರೆ ಶಾಲಾ ಪ್ರದೇಶ ಇದ್ದು, ಸದ್ಯದಲ್ಲೇ ರಾಯಪ್ಪ ಹುಲೇಕಲ್ ಶಾಲೆ ಈಗ ಬನವಾಸಿ ರಸ್ತೆಯ ಸ್ವಂತ ಕಟ್ಟಡಕ್ಕೆ ಅ.17 ರಂದು ಸ್ಥಳಾಂತರಗೊಳ್ಳುತ್ತಿದೆ. ಕಾರಣ ಈ ಸ್ಥಳವನ್ನು ಆಸ್ಪತ್ರೆಗೆ ನೀಡಲಾಗುವುದು ಎಂದರು. ಅಲ್ಲದೇ ಆಸ್ಪತ್ರೆಯ ನೂತನ ಕಟ್ಟಡದ ಒಂದು ವಾರ್ಡ್ ಗೆ ರಾಯಪ್ಪ ಹುಲೇಕಲ್ ಅವರ ಹೆಸರಿಡುವಂತೆ ಸೂಚಿಸಲು ನಿರ್ಧರಿಸಲಾಯಿತು.
ನಗರ ವ್ಯಾಪ್ತಿಯ ನಿವೇಶನಗಳ ಖಾತಾ ಬದಲಾವಣೆ, ಫಾರಂ ನಂಬರ್ 3 ನೀಡುವಿಕೆ ಇನ್ನೂ ಸಮರ್ಪಕವಾಗಿಲ್ಲ ಎಂದು ಸದಸ್ಯ ಲುಕ್ಕು ನರೋನ್ಹಾ ಆರೋಪಿಸಿದರು. ಇದಕ್ಕೆ ಧ್ವನಿ ಕೂಡಿಸಿದ ಕೆಲ ಸದಸ್ಯರು ಗಣೇಶನಗರ ಸೇರಿದಂತೆ ವಿವಿಧೆಡೆ ನಿರ್ಮಿಸಿಕೊಂಡ ಮನೆಗಳನ್ನು ಅನಧಿಕೃತ ಕಟ್ಟಡ ಪರಿಗಣಿಸಲಾಗುತ್ತಿದೆ. ಕಾರಣ ನೀರು, ವಿದ್ಯುತ್ ಎನ್ ಒಸಿ ಕೊಡ್ತಾ ಇಲ್ಲ ಎಂದು ಆರೋಪಿಸಿದರು.
ಸದಸ್ಯ ಪ್ರದೀಪ ಶೆಟ್ಟಿ ಮಾತನಾಡಿ, ಅರಣ್ಯ ಅತಿಕ್ರಮಣ ಮನೆಗಳಿಗೆ ಸೌಲಭ್ಯಗಳನ್ನು ನೀಡಲು ಕೆಲವೆಡೆ ತೊಂದರೆ ಆಗುತ್ತಿದೆ. ಅದೇ ರೀತಿ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೂ ಸೌಲಭ್ಯ ಒದಗಿಸಲು ಕಾನುನಿನ ತೊಡಕು ಆಗುತ್ತಿದೆ. ಕಾಯ್ದೆ ಪ್ರಕಾರ ಕೃಷಿ ಭೂಮಿ ಅತಿಕ್ರಮಣವಾದ್ರೆ ಮಾತ್ರ ಎನ್ ಓ ಸಿ ಕೊಡಲು ಸಾಧ್ಯವಿಲ್ಲ. ನಗರದ ಕೆಲವೆಡೆ ಈಗಾಗಲೇ ಕೃಷಿ ಭೂಮಿಯಲ್ಲಿ ಆಸ್ಪತ್ರೆಯನ್ನೂ ಕಟ್ಟಿದ್ದಾರೆ. ಸರ್ಕಾರದ ಎಲ್ಲ ಆದೇಶಗಳೂ ಸಮರ್ಪಕವಾಗಿ ಜಾರಿಯಾದರೆ ಸಾರ್ವಜನಿಕರ ಜೀವನಕ್ಕೆ ತೊಂದರೆ ಆಗುತ್ತದೆ ಎಂಬುದನ್ನು ನಾವು ಗಮನದಲ್ಲಿಡಬೇಕು ಎಂದರು.
ಶ್ರೀಕಾಂತ ತಾರೀಬಾಗಿಲು ಮಾತನಾಡಿ, ತುಂಡುಭೂಮಿ ಕಾಯ್ದೆಗೆ ಉತ್ತರ ಕನ್ನಡ ಸೇರಿದಂತೆ 6 ಜಿಲ್ಲೆಗಳಗೆ ವಿನಾಯಿತಿ ಇದೆ. ಆದರೆ, ಅಧಿಕಾರಿಗಳಿಂದ ಈ ಬಗ್ಗೆ ಅಧ್ಯಯನ ಆಗುತ್ತಿಲ್ಲ. ಶಿರಸಿ ತಾಲೂಕಿನಲ್ಲಿ ಶೇ. 12 ರಷ್ಟು ಮಾತ್ರ ಮಾಲ್ಕಿ ಜಾಗವಿದೆ. ಹೀಗಾಗಿ ಅರಣ್ಯ ಅತಿಕ್ರಮಣ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳಲು ಫಾರಂ ನಂ. 3 ನೀಡುವ ಬಗ್ಗೆ ನಗರಸಭೆ ನಿರ್ಧರಿಸಲಿ. ಕಾರವಾರ ನಗರಸಭೆ ಶೆ. 50 ರಷ್ಟು ವಿನಾಯಿತಿ ನೀಡಿದೆ. ಜಿಲ್ಲಾ ಕೇಂದ್ರದಲ್ಲಿ ಸಾಧ್ಯವಾಗುತ್ತದೆ ಎಂದಾದರೆ ಇಲ್ಲೇಕೆ ಸಾಧ್ಯವಾಗದು ಎಂದು ಪ್ರಶ್ನಿಸಿದರು.
ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪೌರಾಯುಕ್ತ ಕೇಶವ ಚೌಗಲೆ ಇತರರಿದ್ದರು