ಶಿರಸಿ: ತಿರುಗಿ ನೋಡಿದ ಉಭಯ ವೀರರ| ಪರಮ ಪೂಜ್ಯತೆ ಮೂಡಿತವರೊಳು| ಬಕ್ಕಳದಲ್ಲಿ ಪ್ರದರ್ಶನ ಕಂಡ ಮಹಾಭಾತರದ ಉಪ ಕಥೆ ವೀರ ಬರ್ಬರಿಕ ಯಕ್ಷಗಾನ ಜನ ಮನ ಗೆದ್ದಿತು.
ವೀರ ಭರ್ಬರಿಕ ಯಕ್ಷಗಾನ ಸಮಾಜದಲ್ಲಿ ಸೋತ ಅನೇಕ ಸಂಗತಿಗಳನ್ನು ಮತ್ತೆ ಪುನರುತ್ಥಾನ ಮಾಡುವ ಹಾಗೂ ಯಾವುದೇ ವ್ಯಕ್ತಿಯಲ್ಲಿ ಎಷ್ಟೇ ಬಲ, ಪ್ರತಿಭೆ, ಯೋಗ್ಯತೆ, ಬೆಂಬಲ ಇದ್ದರೂ ಅಹಂಕಾರ ಬಂತೆಂದರೆ ಸರ್ವನಾಶ ಆಗುತ್ತಾನೆ ಎನ್ನುವ ಸಂದೇಶಕ್ಕೆ ಬರ್ಬರೀಕನ ಜೀವನ ಒಂದು ಉದಾಹರಣೆಯಾಗಿ ರಂಗದಲ್ಲಿ ಪ್ರದರ್ಶನ ಕಂಡಿತು.
ಶಬರ ಸಂಸ್ಥೆ ಸೋಂದಾ ಮತ್ತು ಯಕ್ಷಾಭಿವಂದನ ಸಹಯೋಗದಲ್ಲಿ ಬಕ್ಕಳ ಸತ್ಯನಾಥೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸ್ಥಳೀಯ ಸೊಸೈಟಿಗಳ ಸಹಕಾರದೊಂದಿಗೆ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಒಳಗಾದ ಕಲಾವಿದರಿಗೆ ಪ್ರದರ್ಶನಕ್ಕೆ ವೇದಿಕೆ ಒದಗಿಸುವದರ ಮೂಲಕ ಅಲ್ಪ ಸಹಾಯ ನೀಡುವ ಉದ್ದೇಶದಿಂದ ಈ ಪ್ರದರ್ಶನ ಆಯೊಜಿಸಲಾಗಿತ್ತು. ವೃತ್ತಿ ಮೇಳದಲ್ಲಿರುವ ಉತ್ಸಾಹಿ ಯುವ ಕಲಾವಿದರ ತಂಡ ಯಕ್ಷಾಭಿವಂದನ ವೀರಬರ್ಬರಿಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಪ್ರಸಿದ್ಧ ಯುವ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಣೇಶ ಆಚಾರಿ ಬಿಲ್ಲಾಡಿ, ವಿಘ್ನೇಶ್ವರ ಕೆಸರಕೊಪ್ಪ, ಪ್ರಮೋದ ಕಬ್ಬಿನಗದ್ದೆ ಪಾಲ್ಗೊಂಡರು. ಮುಮ್ಮೇಳದಲ್ಲಿ ಕಾರ್ತೀಕ ಚಿಟ್ಟಾಣಿ, ಚಂದ್ರಹಾಸ ಗೌಡ, ರಾಜೇಶ ಬಂಡಾರಿ, ನಿರಂಜನ ಜಾಗ್ನಳ್ಳಿ, ನಾಗೇಂದ್ರ ಮೂರೂರು, ನಾಗರಾಜ ಕುಂಕಿಪಾಲ್ ಸಮರ್ಥವಾಗಿ ಪಾತ್ರ ನಿರ್ವಹಿಸಿದರು.
ಶಬರ ಸಂಸ್ಥೆಯ ನಾಗರಾಜ ಜೋಶಿ ಸೋಂದಾ ಸ್ವಾಗತಿಸಿ ಕಲಾವಿದರನ್ನು ಪರಿಚಯ ಮಾಡಿದರು.