ಶಿರಸಿ: ಲಯನ್ಸ್ ಶಾಲೆಯ ಲಿಯೋ ಕ್ಲಬ್ನ ಸದಸ್ಯರು ಶಾಲೆಯಲ್ಲಿ ಸಂಗ್ರಹವಾಗುವ ಪ್ಯಾಸ್ಟಿಕ್ ತ್ಯಾಜ್ಯ ಸಂಗ್ರಹಣೆಯ ಕಾರ್ಯಕ್ಕಾಗಿ ಕೈಗೊಂಡ ಪರಿಸರ ಸ್ನೇಹಿ ಲಿಯೋ ಪ್ಲೇರ್ ಯೋಜನೆಯು ಉದ್ಘಾಟನೆಗೊಳಿಸಿದರು.
ಉದ್ಘಾಟಕರಾಗಿ ಪರಿಸರ ತಜ್ಞರಾದ ಡಾ. ಕೇಶವ ಕೊರ್ಸೆ ಪಾಲ್ಗೊಂಡರು. ಕಾರ್ಬನ್ ಫೂಟ್ ಪ್ರಿಂಟ್ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ನೀಡುತ್ತಾ, ಭೂಮಿಯ ಮೇಲಿನ ಧಾರಣ ಸಾಮರ್ಥ್ಯವನ್ನು ಮೀರಿ ಮಾನವನ ಚಟುವಟಿಕೆಗಳು ನಡೆಯುತ್ತಿರುವುದೇ ವಾತಾವರಣದಲ್ಲಿಯ ಎಲ್ಲ ವೈಪರೀತ್ಯಗಳಿಗೂ ಕಾರಣ ಎಂದು ಸುತ್ತಲಿನ ಉದಾಹರಣೆಯನ್ನು ಬಳಸಿ ಡಾ. ಕೇಶವ ಕೊರ್ಸೆಯವರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಅರ್ಥೈಸಿದರು.
ನಮ್ಮ ನಿತ್ಯ ಬಳಕೆಯ ವಸ್ತುಗಳು ಯಾವವು, ಅವುಗಳ ಪ್ರಮಾಣವೆಷ್ಟು, ನಾವು ಬಳಸುವ ಬಗೆ ಹೇಗೆ, ಅದು ಬಿಡುಗಡೆ ಮಾಡುವ ತ್ಯಾಜ್ಯಗಳು ಎಷ್ಟು ಎಂಬುದನ್ನು ವಿಶ್ಲೇಷಿಸುವುದು ಕಾರ್ಬನ್ ಫೂಟ್ ಪ್ರಿಂಟ್ ಇದರ ಅರ್ಥ ವಿವರಣೆಯಾಗಿದೆ. ಎಂಬುದನ್ನು ತಿಳಿಸಿಕೊಡುತ್ತಾ ಈ ವಿಷಯವನ್ನು ಅರಿಯುವ ಪೂರ್ವದಲ್ಲಿ ನೀರಿನ ಫೂಟ್ ಪ್ರಿಂಟ್ ಕುರಿತಾಗಿ ವಿದ್ಯಾರ್ಥಿಗಳಿಗೆ ಅರ್ಥೈಸಿದರು.
ಒಬ್ಬ ವ್ಯಕ್ತಿ ನೇರವಾಗಿ ನೀರಿನ ಬಳಕೆಯನ್ನು ನಿತ್ಯದಲ್ಲಿ 25 ರಿಂದ 30 ಲೀಟರ್ ಬಳಸಿದರೂ ಅಪ್ರತ್ಯಕ್ಷವಾಗಿ- ಯಾವ ರೀತಿಯಲ್ಲಿ ವಸ್ತುಗಳ ಬಳಕೆಯನ್ನು ಮಾಡುವ ಮೂಲಕ ಅವುಗಳ ತಯಾರಿಕೆಯಲ್ಲಿ ಬಳಕೆಯಾದ ನೀರಿನ ಪ್ರಮಾಣದ ಸರಾಸರಿ ಲೆಕ್ಕಾಚಾರವನ್ನು ಮಕ್ಕಳಿಗೆ ದಾಖಲಾತಿ ಅಂಕಿ-ಅಂಶಗಳ ಮೂಲಕ ಅದ್ಭುತವಾಗಿ ಬಿಂಬಿಸಿದರು. ಕಾರ್ಬನ್ ಫೂಟ್ ಪ್ರಿಂಟ್ ವ್ಯಕ್ತಿಗತವಾಗಿ, ಒಂದು ಕುಟುಂಬದ ಲೆಕ್ಕದಲ್ಲಿ ದೇಶಮಟ್ಟದಲ್ಲಿ, ಒಂದು ಸೆಕ್ಟರ್ ಲೆಕ್ಕದಲ್ಲಿ ಲೆಕ್ಕಾಚಾರವನ್ನು ಮಾಡಬಹುದು ಎಂದರು. ಪ್ರತಿಯೊಬ್ಬ ವ್ಯಕ್ತಿಯೂ ದಿನನಿತ್ಯ ಬಳಸಬಹುದಾದ ಪ್ರತಿಯೊಂದು ಅಂಶಗಳಿಂದಲೂ ಎಷ್ಟೆಷ್ಟು ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಸೃಷ್ಟಿ ಮಾಡುತ್ತಿದ್ದಾನೆ ಎಂಬುದನ್ನು ದಾಖಲಾದಾಗ ಅಂಕಿ-ಅಂಶಗಳನ್ನು ಚಿತ್ರಣದೊಂದಿಗೆ ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟರು. ಕಾರ್ಬನ್ ಫೂಟ್ ಪ್ರಿಂಟ್ ಪರಿಣಾಮವಾಗಿ ಜಾಗತಿಕ ತಾಪಮಾನ ಏರುತ್ತಿರುವುದನ್ನು ತಡೆಗಟ್ಟಲು ಸಾಧ್ಯವಾಗದಿದ್ದರೂ ಅದನ್ನು ನಿಯಂತ್ರಿಸುವಲ್ಲಿ ನಮ್ಮ ಜವಾಬ್ದಾರಿ ಬಹಳಷ್ಟಿದೆ, ಈ ಹಿನ್ನೆಲೆಯಲ್ಲಿ ನಮ್ಮ ದಿನನಿತ್ಯದ ವಸ್ತುಗಳ ಬಳಕೆಯಲ್ಲಿ ನಿಯಂತ್ರಣ ಇಡುವುದು, ಅವಶ್ಯಕತೆ ಇದ್ದಷ್ಟೇ ಬಳಸುವುದು, ಮರುಬಳಕೆಗೆ ಬಳಸಿದ ವಸ್ತುಗಳನ್ನು ಕಳಿಸುವುದು, ಹಾಗೂ ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದರ ಕುರಿತು ತಿಳುವಳಿಕೆ ನೀಡಿದರು.
ವಾತಾವರಣದಲ್ಲಿ ಜೀವಿಗಳಿಗೆ ಬೇಕಾದ ಉಸಿರನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುವ ಗಿಡ-ಮರಗಳ ರಕ್ಷಣೆ ಎಲ್ಲರ ಜವಾಬ್ದಾರಿ, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು ಎಂದು ಸೂಚಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ತಿಂಗಳಿಗೊಮ್ಮೆಯಾದರೂ ತಾವು ಯಾವ ರೀತಿಯಲ್ಲಿ ಎಷ್ಟು ಪ್ರಮಾಣದಲ್ಲಿ ಕಾರ್ಬನ್ ಫೂಟ್ ಪ್ರಿಂಟ್ ವಿಚಾರದಲ್ಲಿ ಕಾರಣೀಕರ್ತರಾಗಿದ್ದಾರೆ ಎಂಬುದನ್ನು ವಿಶ್ಲೇಷಿಸಿ ಕೊಳ್ಳಬೇಕೆಂದು ಸೂಚಿಸಿದರು. ತ್ಯಾಜ್ಯ ವಸ್ತುಗಳ ನಿರ್ವಹಣೆ ಯಲ್ಲಿ ಶಿರಸಿ ಲಿಯೋ ಕ್ಲಬ್ ನಿಂದ ನಡೆಯುತ್ತಿರುವ ಈ ಒಂದು ಮಹತ್ವದ ನಡೆ ಖಂಡಿತಕ್ಕೂ ಅನುಸರಣೀಯ ಎಂದು ಶ್ಲಾಘಿಸಿದರು.
ಲಯನ್ಸ್ ಕ್ಲಬ್ ಅಧ್ಯಕರಾದ ಎಂಜಿಎಫ್ ಲಯನ್ ಉದಯ ಸ್ವಾದಿ ಮಾತನಾಡುತ್ತಾ ಬೇಡದ ಕಾಗದದ ವಸ್ತುಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸುವುದು ಪ್ಲಾಸ್ಟಿಕ್ ಗಳನ್ನು ಮರುಬಳಕೆಗೆ ಕಳಿಸುವುದು ತುಂಬಿಸುವುದು ಈ ಎಲ್ಲಾ ಮಾರ್ಗಗಳು ದಿನನಿತ್ಯದಲ್ಲಿ ಕೈಗೊಳ್ಳಲೇಬೇಕಾದ ಕ್ರಮಗಳಿಂದ ಸೂಚಿಸಿದರು. ಶಿರಸಿ ಲಿಯೋ ಕ್ಲಬ್ ಈ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯವನ್ನು ಹಮ್ಮಿಕೊಂಡಿದೆ ಎಂದು ಅಭಿನಂದಿಸಿದರು.
ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೋ. ರವಿ ನಾಯಕ್ ಇವರು ಮಾತನಾಡುತ್ತಾ ಲಿಯೋ ಕ್ಲಬ್ ನಿಂದ ಆರಂಭವಾದ ಈ ಒಂದು ಕಾರ್ಯವನ್ನು ಎಲ್ಲಾ ವಿದ್ಯಾರ್ಥಿಗಳು ಅನುಸರಿಸಬೇಕೆಂದು ಹಾರೈಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಲ. ಗುರುರಾಜ್ ಹೊನ್ನಾವರ್ ಇವರು ಕಾರ್ಬನ್ ಫೂಟ್ ಪ್ರಿಂಟ್ ನಿರ್ವಹಣೆಯಲ್ಲಿ ಯಾವ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ತಮ್ಮ ಚಟುವಟಿಕೆ ನಿರ್ವಹಿಸುತ್ತಾರೋ ಅವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ರೂಪವಾಗಿ ಪುಸ್ತಕಗಳನ್ನು ನೀಡುವುದಾಗಿ ಘೋಷಿಸಿದರು.
ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿಗಳು, ಲಯನ್ಸ್ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿಗಳು ಲಿಯೋ ಕ್ಲಬ್ ನ ಅಡ್ವೈಸರ್ ಆಗಿರುವ ಲಯನ್ ವಿನಯ್ ಹೆಗಡೆ ಇವರು ಅತಿಥಿಗಳಾದ ಡಾಕ್ಟರ್ ಕೇಶವ ಕೊರ್ಸೆ ಇವರನ್ನು ಸಭೆಗೆ ಪರಿಚಯಿಸಿ ಕೊಟ್ಟರು. ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಲಿಯೋ ಕ್ಲಬ್ಬಿನ ಅಧ್ಯಕ್ಷ ಲಿಯೋ ಸ್ತುತಿ ತುಂಬಾಡಿ ಆಗಮಿಸಿದವರನ್ನು ಸ್ವಾಗತಿಸಿದರು. ಲಿಯೋ ಕ್ಲಬ್ಬಿನ ಕಾರ್ಯದರ್ಶಿ ಲಿಯೋ ವಾಸವಿ ಹೆಗಡೆ ವಂದನಾರ್ಪಣೆ ನಡೆಸಿಕೊಟ್ಟರು. ಲಿಯೋ ನಂದಿನಿ ರಿತ್ತಿ ಪ್ಲೆಡ್ಜ್ ಕಾರ್ಯಕ್ರಮವನ್ನು ನೆರವೇರಿಸಿದರು. ಲಿಯೋ ಶ್ರೀಲಕ್ಷ್ಮಿ ಹೆಗಡೆ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು. ಲಿಯೋ ಸಿಂಧೂ ಹೆಗಡೆ ಲಿಯೋ ಪ್ಲೇರ್ ಯೋಜನೆಯ ಕುರಿತು ವಿವರಿಸಿದರು. ಶಾಲೆಯ ಎಲ್ಲಾ ಶಿಕ್ಷಕರು- ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡರು.