ಹಳಿಯಾಳ: ಇಲ್ಲಿನ ಭಗವತಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕೊಲ್ಲಾಪುರದ ರಮಾನಂದ ನಗರದ ಮೀನಾ ಗಣೇಶ ಪಿಳ್ಳೆ(55) ಮತ್ತು ರಾಜಮ್ಮ ಪಿಳ್ಳೆ(35) ಎನ್ನುವವರು ಮೃತರಾರಾಗಿದ್ದು, ಗಣೇಶ ಪಿಳ್ಳೆ, ಸರಸ್ವತಿ ಪಿಳ್ಳೆ ಮತ್ತು ರಾಧಾಕೃಷ್ಣ ಪಿಳ್ಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ತಕ್ಷಣ ಭಾಗವತಿ ಗ್ರಾಮದ ಸಮಾಜ ಸೇವಕ ಅರ್ಜುನ ಬೋವಿ ಅವರು ಸ್ಥಳಕ್ಕೆ ದೌಡಾಯಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಕಾರಿನಲ್ಲಿ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹಾಗೂ ಮೃತ ದೇಹಗಳನ್ನು ಹೊರ ತೆಗೆದು ಅಂಬ್ಯುಲೆನ್ಸ್ ಮೂಲಕ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ನೆರವಾದರು.
ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಮೋತಿಲಾಲ್ ಪವಾರ್, ಪಿಎಸ್ಐಗಳಾದ ಶಿವಾನಂದ ನಾವದಗಿ, ಸತ್ಯಪ್ಪ ಹುಕ್ಕೇರಿ ಹಾಗೂ ಪಿಎಸ್ಐ ವಿಶ್ವನಾಥ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.