ಮುಂಡಗೋಡ: ಕೃಷಿ ಕುಟುಂಬದಲ್ಲಿ ಹುಟ್ಟಿದ ನನ್ನನ್ನು ನಮ್ಮ ತಂದೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಸಿ ವಿದ್ಯಾವಂತನಾಗಿ ಮಾಡಿದ್ದರಿಂದ ಇಂದು ನ್ಯಾಯಾಲಯದ ನ್ಯಾಯಾಧೀಶನಾಗಿದ್ದೇನೆ. ಎಷ್ಟೇ ಕಷ್ಟ ಇದ್ದರೂ ನೀವು ನಿಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರಾಗಿ ಮಾಡಿ ಎಂದು ಸಿವಿಲ್ ನ್ಯಾಯಾಧೀಶ ಕೇಶವ ಕೆ ಹೇಳಿದರು.
ಅವರು ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ತಾಲೂಕು ಸೇವಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಸರ್ಕಾರಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಕ್ಷಣವೇ ನಮ್ಮ ಶಕ್ತಿಯಾಗಿದೆ. ಬುಡಕಟ್ಟು ಜನಾಂಗದ ಮೂಲ ಹಾಗೂ ಸರ್ಕಾರದಿಂದ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಇದಕ್ಕೂ ಮುನ್ನ ಅವರು ಗಾಂಧಿಜಿಯವರ ಜೀವನ ಚರಿತ್ರೆ ಬಗ್ಗೆ ಮತ್ತು ಸಿದ್ಧಿ ಜನಾಂಗ ಹೇಗೆ ದೇಶಕ್ಕೆ ಬಂದು ಮೂಲ ಬುಡಕಟ್ಟು ಜನಾಂಗವಾಗಿ ಜೀವನ ನಡೆಸುವುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬುಡಕಟ್ಟು ಜನಾಂಗದವರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿ ಕಾನೂನಾತ್ಮಕವಾಗಿ ಪರಿಹಾರವನ್ನು ತಿಳಿಸಿದರು.
ನ್ಯಾಯವಾದಿಗಳಾದ ಆರ್.ಎಮ್.ಮಳಗಿಕರ ಮತ್ತು ಆರ್.ಎಸ್.ಹಂಚಿನಮನಿ ಉಪನ್ಯಾಸ ನೀಡಿದರು. ಸಹಾಯಕ ಸರಕಾರಿ ಅಭಿಯೋಜಕಿ ಉಮಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
ಪೆದ್ರು ಬಸಾರ್ ಸಿದ್ಧಿ, ಸಾವರ ಸಿದ್ಧಿ, ಶರೀಪ್ಸಾಬ ಅಮಗಾಮಿ, ತಾಲೂಕು ಸೇವಾ ಸಿಬ್ಬಂದಿಗಳಾದ ಶರತ್ ಮತ್ತು ಹನುಮಂತ, ಪೊಲೀಸ್ ಸಿಬ್ಬಂದಿಗಳಾದ ವೆಂಕಟೇಶ್ವರ ಮತ್ತು ವಿನಾಯಕ ಮುಂತಾದವರು ಉಪಸ್ಥಿತರಿದ್ದರು.