ಕುಮಟಾ: ನಮ್ಮ ರೈತ ಸಮುದಾಯ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ವಿಮುಖರಾಗಿ ಪೂರ್ಣ ಪ್ರಮಾಣದಲ್ಲಿ ಸಾಂಪ್ರದಾಯಿಕವಾಗಿ ಬಂದಿರುವ ಸಾವಯವ ಕೃಷಿಯತ್ತ ಗಮನಹರಿಸಬೇಕಾದ ಪರಿಸ್ಥಿತಿ ಬಂದೋದಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ಸಂತೋಷ ಕುಮಾರ ಅವರು ಹೇಳಿದರು.
ಅವರು ಇತ್ತೀಚೆಗೆ ಕಲವೆ ಗ್ರಾಮದ ಬೇಟೆ ಗೌಡ ಅವರ ಮನೆಯಲ್ಲಿ ನಡೆದ ಸಾವಯವ ಕೃಷಿಯ ಬಳಕೆ ಮತ್ತು ಅದರ ಮಹತ್ವದ ಬಗ್ಗೆ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ರಸಗೊಬ್ಬರ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿರುವುದಲ್ಲದೆ ಇದರ ಪರಿಣಾಮ ಬೆಳೆಗಳ ಇಳುವರಿ ಮೇಲೂ ಪ್ರಭಾವ ಬೀರುತ್ತಿದೆ. ರೈತರು ಯಥೇಚ್ಚವಾಗಿ ರಸಗೊಬ್ಬರ ಬಳಕೆ ಮಾಡಿ ಬೆಳೆ ಬೆಳೆಯುತ್ತಿರುವುದರಿಂದ ಆಹಾರದಲ್ಲಿ ನಿಧಾನಗತಿಯಲ್ಲಿ ವಿಷವು ಮಿಶ್ರಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಸಾಯನಿಕ ಗೊಬ್ಬರಗಳಿಂದ ಬೆಳೆಯಲಾಗುವ ವಿಷಯುಕ್ತ ಆಹಾರ ಬೆಳೆಗಳ ಬದಲಿಗೆ ಇಂದು ಜಗತ್ತಿನಾದ್ಯಂತ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಇವತ್ತಿನ ಕೃಷಿಯಲ್ಲಿ ಕೀಟನಾಶಕಗಳ ಬಳಕೆ ಇಲ್ಲದೆ ಉತ್ಪಾದನೆಯೇ ಇಲ್ಲ ಎನ್ನುವಂತಾಗಿದೆ. ಅದರಲ್ಲೂ ಕೆಲವೊಂದು ಕಡೆ ಸಾವಯವ ಅಥವಾ ಪರಿಸರ ಪೂರಕ ಕೃಷಿಯ ಮಾತು ಕೇಳಿ ಬರುತ್ತಿದ್ದರೂ ಒಟ್ಟಾರೆ ಆಹಾರ ಉತ್ಪಾದನೆಯಲ್ಲಿ ಅದರ ಪಾಲು ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಆದ್ದರಿಂದ ತಮ್ಮ ಮುಂದಿನ ತಲೆಮಾರಿನ ಅಳಿವು ಮತ್ತು ಉಳಿವಿಗಾಗಿ ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ದೀರ್ಘಾವಧಿಯವರೆಗೆ ಕಾಪಾಡಿಕೊಂಡು ಉತ್ತಮ ಬೇಸಾಯ ಮಾಡಬಹುದು. ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಜೀವಾಮೃತ, ಕೊಟ್ಟಿಗೆ ಗೊಬ್ಬರಗಳನ್ನು ಬೇಸಾಯಕ್ಕೆ ಬಳಸುವುದರಿಂದ ಪೌಷ್ಠಿಕ ಆಹಾರೋತ್ಪನಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೂಜಳ್ಳಿ ಕೃಷಿ ಯಂತ್ರಧಾರೆಯ ಪ್ರಬಂಧಕರಾದ ಭಾಸ್ಕರ ಪಟಗಾರ, ಪ್ರಗತಿಪರ ರೈತರಾದ ಬೇಟೆ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಕಿಬೈಲ್ ಒಕ್ಕೂಟದ ಅಧ್ಯಕ್ಷ ದಾಮೋದರ ಮರಾಠಿ ವಹಿಸಿಕೊಂಡಿದ್ದು, ಕಾರ್ಯಕ್ರಮದ ಸ್ವಾಗತವನ್ನು ಸೇವಾ ಪ್ರತಿನಿಧಿಯಾದ ಚಂದ್ರಕಲಾ ಮರಾಠಿ, ಧನ್ಯವಾದವನ್ನು ಪ್ರಭಾಕರ ನಾಯ್ಕ ನೆರವೇರಿಸಿದರು.