ಮೈಸೂರು: ಕೊರೋನಾ ನಡುವೆಯೇ ಈ ಬಾರಿಯೂ ದಸರಾ ಹಬ್ಬ ಆಚರಿಸಲ್ಪಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಮೈಸೂರು ಹೊರತುಪಡಿಸಿ ಬೇರೆ ಕಡೆಗಳಲ್ಲಿ ಆಚರಿಸಲ್ಪಡುವ ದಸರಾ ಮಹೋತ್ಸವದಲ್ಲಿ 400 ಕ್ಕಿಂತ ಅಧಿಕ ಜನರು ಒಮ್ಮೆಗೇ ಒಟ್ಟು ಸೇರುವಂತಿಲ್ಲ ಎಂದು ಮಾರ್ಗಸೂಚಿ ತಿಳಿಸಿದೆ. ಮೈಸೂರು ಪ್ರತ್ಯೇಕ ಮತ್ತು ಮೈಸೂರು ಹೊರತು ಪಡಿಸಿ ಎರಡು ರೀತಿಯ ಮಾರ್ಗಸೂಚಿಗಳನ್ನು ಸರ್ಕಾರ ಇದೀಗ ಪ್ರಕಟಿಸಿದೆ.
ಮೈಸೂರಿಗೆ ಸಂಬಂಧಿಸಿದಂತೆ, ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಕಡ್ಡಾಯ ಎಂದು ತಿಳಿಸಲಾಗಿದೆ. ಅ. 7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನಡೆಯಲಿದ್ದು, ಅಲ್ಲಿಗೆ 100 ಜನರಿಗೆ ಮಾತ್ರ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅ. 15 ರಂದು ನಡೆಯುವ ಜಂಬೂಸವಾರಿ, ಪಂಜಿನ ಕವಾಯತ್ಗೆ 500 ಜನರಿಗೆ ಅವಕಾಶ ಕಲ್ಪಿಸಲಾಗಿದೆ.
ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಧಿಕಾರಿಗಳು, ಸಿಬ್ಬಂದಿ, ಕಲಾವಿದರು, ರಕ್ಷಣಾ ಸಿಬ್ಬಂದಿ ಅ. 4 ರ ನಂತರದ ಆರ್ಟಿಪಿಸಿಆರ್ ವರದಿ ಮತ್ತು ಕನಿಷ್ಟ 1 ಡೋಸ್ ಲಸಿಕೆ ಪಡೆದಿರುವಂತೆಯೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಹಾಗೆಯೇ ಇತರೆಡೆಗಳಲ್ಲಿ ನಡೆಯುವ ದಸರಾಗೆ ಸಾಮಾಜಿಕ ಅಂತರ ಕಡ್ಡಾಯ. 400 ಜನರಿಗಷ್ಟೇ ಸೇರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ನ್ಯೂಸ್ 13