ಶಿರಸಿ: ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.7ರಿಂದ ಅ.15 ರವರೆಗೆ ನಡೆಯಲಿದೆ. ಕೋವಿಡ್ 19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಸರಳವಾಗಿ ಆಚರಿಸುವ ನಿಯಮ ಇರುವುದರಿಂದ ನವರಾತ್ರಿ ಉತ್ಸವದ ಧಾರ್ಮಿಕ ಪದ್ಧತಿಯಂತೆ ಆಚರಣೆಯನ್ನು ಸೀಮಿತವಾಗಿ ನಡೆಸಲಾಗುವುದು. ಇದರ ಹೊರತಾಗಿ ಕೀರ್ತನೆ, ಸಾಂಸ್ಕøತಿಕ, ಸ್ಪರ್ಧಾ ಕಾರ್ಯಕ್ರಮ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಪ್ರತಿದಿನ ಎಂದಿನಂತೆ ಉಡಿ, ಮಹಾಪೂಜೆ, ಪುಷ್ಪಾಲಂಕಾರ ಪೂಜೆ, ತುಲಾಭಾರ, ಹರಕೆ/ಕಾಣಿಕೆ ಅರ್ಪಣೆ ಸೇವೆಗೆ ಮಾತ್ರ ಅವಕಾಶವಿರಲಿದೆ. ಶಾಶ್ವತವಾಗಿ ನಡೆಯುವ ಭಕ್ತಕೋಟಿ, ನಿರಂತರ, ನಿತ್ಯ ಸೇವೆ ಪೂಜೆಯು ಎಂದಿನಂತೆ ನಡೆಯುವುದು ಎಂದು ತಿಳಿಸಲಾಗಿದ್ದು, ಅ.15 ರಂದು ವಿಜಯದಶಮಿ ಆಚರಣೆ ಅಂಗವಾಗಿ ಅಂದು ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಶ್ರೀ ಹನುಮಂತ ದೇವರ ಪಲ್ಲಕ್ಕಿಯು ಸಾಯಂಕಾಲ ನಗರದಲ್ಲಿ ಸಂಚರಿಸುವುದು. ರಾತ್ರಿ 10 ಘಂಟೆಯ ನಂತರ ಕೋಟೆಕೆರೆ ಗದ್ದುಗೆಯ ಮೇಲೆ ಮಾರಿಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ, ಕಲಶ ವಿಸರ್ಜನೆ ಪಡಿಯಾಟ ವಗೈರೆ ನಡೆಯುವುದೆಂದು ಪ್ರಕಟಣೆ ತಿಳಿಸಿದೆ.