ಕುಮಟಾ: ತಾಲೂಕಿನ ಹೆಗಡೆ ಗ್ರಾಮದ ತಣ್ಣೀರಕುಳಿಯ ಊರ ಯಜಮಾನರು, ನಾಗರಿಕರು, ವಿವಿಧ ಯುವಕ ಹಾಗೂ ಮಹಿಳಾ ಸಂಘಗಳು ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿ.ಪಂ ಮಾಜಿ ಸದಸ್ಯ ರತ್ನಾಕರ್ ಎಂ ನಾಯ್ಕ ಅವರನ್ನು ಗೌರವಿಸುವ ಕಾರ್ಯಕ್ರಮವು ಇಲ್ಲಿನ ತಣ್ಣೀರಕುಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿದ ಜಿಪಂ ನಿಕಟಪೂರ್ವ ಸದಸ್ಯ ರತ್ನಾಕರ ನಾಯ್ಕ ಮಾತನಾಡಿ, ಹೆಗಡೆ ಭಾಗದ ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕೆಂಬ ಕಾರಣಕ್ಕೆ ಅಂದಿನ ಜಿಲ್ಲಾ ಪರಿಷತ್ ಸದಸ್ಯ ಎಲ್ ವಿ ಶಾನಭಾಗ ಅವರು 2007-08ರಲ್ಲಿ ಹೆಗಡೆಗೆ 64 ಕೋಟಿ ರೂ. ಯೋಜನೆ ರೂಪಿಸಿ, ಮಂಜೂರಿಗಾಗಿ ಶ್ರಮಿಸಿದ್ದರು. 2016ರಲ್ಲಿ ನಾನು ಜಿಪಂ ಸದಸ್ಯನಾದ ಮೇಲೆ ಈ ಯೋಜನೆಯ ಬೆನ್ನತ್ತಿ 92 ಕೋಟಿ ರೂ.ಗೆ ಯೋಜನೆ ಸಿದ್ಧಪಡಿಸಿದೆ. ಮಂಜೂರಾತಿಗಾಗಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಆದರೆ ಕೆಲ ಸಮಯದಲ್ಲೇ ಅವರು ತಮ್ಮ ಅಧಿಕಾರ ಕಳೆದುಕೊಂಡರು. ಯೋಜನೆ ನೆನೆಗುದಿಗೆ ಬಿದ್ದಿದೆ. ಬಳಿಕ ನಾನು ಜಿಪಂ ಸಿಇಒ ರೋಷನ ಅವರ ಬಳಿ ನಮ್ಮ ಹೆಗಡೆ ಭಾಗದ ಚಿತ್ರಣವನ್ನು ಮನವರಿಕೆ ಮಾಡಿಸಿದೆ. ಹೆಗಡೆಯ ತಾರಿಬಾಗಿಲು, ನರಿಬೋಳೆ ಸೇರಿದಂತೆ ಅಘನಾಶಿನಿ ನದಿ ತೀರ ಪ್ರದೇಶದಲ್ಲಿ ಬೇಸಿಗೆಯಲ್ಲಿ ಉಪ್ಪು ನೀರು, ಮಳೆಗಾಲದಲ್ಲಿ ಕೆಸರು ನೀರು ತುಂಬಿಕೊಳ್ಳುತ್ತದೆ. ಆ ಭಾಗದ ಜನರಿಗೆ ವರ್ಷಪೂರ್ತಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ತಿಳಿಸಿದಾಗ ರೋಷನ್ ಅವರು, ಹೆಗಡೆ ಗ್ರಾಪಂನ ಕುಡಿಯುವ ನೀರಿನ ಯೋಜನೆಗಾಗಿ 5 ಕೋಟಿ ರೂ. ಮೀಸಲಿಟ್ಟರು. ಆ ಹಣದ ಪ್ರಯೋಜನ ಮಾತ್ರ ನಮಗೆ ದೊರೆತ್ತಿಲ್ಲ ಎಂದರೆ ಇಲ್ಲಿನ ಕೆಟ್ಟ ರಾಜಕಾರಣವೇ ಕಾರಣವಾಯಿತು. ನಮ್ಮ ಶಾಸಕರ ಬಳಿ ನಾನು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಹೈಟೆಕ್ ಅಂಗನವಾಡಿ ಉದ್ಘಾಟನೆಯ ವಿಚಾರದಲ್ಲೂ ರಾಜಕೀಯ ಮಾಡಿದ ಶಾಸಕರು ವೇದಿಕೆಯಲ್ಲಿದ್ದ ಈ ಭಾಗದ ಊರಿನ ಮುಖ್ಯಸ್ಥರಿಗೂ ಮಾತನಾಡಲು ಅವಕಾಶ ನೀಡಿಲ್ಲ. ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿದ ಈ ಊರಿನವರಿಗೂ ಕನಿಷ್ಠ ಕೃತಜ್ಞತೆ ಕೂಡ ಹೇಳದಂತಾಯಿತು. ಬದುಕು ಶಾಶ್ವತವಲ್ಲ. ನಾವು ಬದುಕುವ ರೀತಿ ಶಾಶ್ವತ ಎಂದು ಬೇಸರಿಸಿದರು.
ಊರಿನ ಯಜಮಾನರಾದ ತಿಮ್ಮಣ್ಣ ಅವರು ಮಾತನಾಡಿ, ಹೈಟೆಕ್ ಅಂಗನವಾಡಿ ಉದ್ಘಾಟನೆಯಾದ ಮೇಲೆ ಇದಕ್ಕೆ ಕಾರಣರಾದ ಎಲ್ಲರನ್ನು ಸನ್ಮಾನಿಸಿ, ಅಭಿನಂದಿಸುವ ಬಯಕೆ ನಮ್ಮ ಊರಿನವರದ್ದಾಗಿತ್ತು. ಅದರಂತೆ ಇಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು, ಜಿಪಂ ನಿಕಟಪೂರ್ವ ಸದಸ್ಯ ರತ್ನಾಕರ ನಾಯ್ಕ ಅವರನ್ನು ಸನ್ಮಾನಿಸಿರುವುದು ಖುಷಿ ನೀಡಿದೆ. ನಮ್ಮ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ರತ್ನಾಕರ ನಾಯ್ಕರು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ನೆಲೆಯಾಗಿದ್ದಾರೆ. ವ್ಯಕ್ತಿಗಿಂತ ವ್ಯಕ್ತಿತ್ವವೇ ಮುಖ್ಯ. ಅಂಥ ಉತ್ತಮ ವ್ಯಕ್ತಿತ್ವ ಹೊಂದಿದವರು ರತ್ನಾಕರ ನಾಯ್ಕರು. ಅವರಿಂದ ಈ ಕ್ಷೇತ್ರದಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮಾಬು ಗೌಡ, ಮಹಿಳಾ ಸಂಘದ ಅಧ್ಯಕ್ಷೆ ಕಮಲಾ ಗೌಡ, ಪ್ರಮುಖರಾದ ಗುರದಾಸ ಎನ್ ಮಹಾಲೆ, ಮಂಜುನಾಥ ಗೌಡ, ಗೋವಿಂದ ಗೌಡ, ಗಣಪತಿ ಗೌಡ, ಹನುಮಂತ ಗೌಡ, ಶಿವು ಗೌಡ, ಮಂಕಾಳಿ ಗೌಡ, ಶ್ರೀಕಾಂತ ಗೌಡ, ಚಂದ್ರಿಕಾ ಗೌಡ ಸೇರಿಸಂತೆ ಇತರರು ಇದ್ದರು.