ಶಿರಸಿ: ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಷನ್ನಿಂದ ಅ.4 ಸೋಮವಾರ ವಿಶ್ವ ಆರ್ಕಿಟೆಕ್ಚರ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಶ್ಯಾಮಸುಂದರ ಭಟ್ಟ ಅವರು ಪ್ರತಿ ವರ್ಷ ಅಕ್ಟೋಬರ್ ಮೊದಲ ಸೋಮವಾರದಂದು ವಿಶ್ವ ಆರ್ಕಿಟೆಕ್ಚರ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ನಮ್ಮ ಸಂಘದಿಂದ ಶಿರಸಿಯಲ್ಲಿ ಆರ್ಕಿಟೆಕ್ಚರ್ ದಿನವನ್ನು ಆಚರಿಸುತ್ತಿದ್ದೇವೆ ಎನ್ನುತ್ತಾ ಎಲ್ಲಾ ಆರ್ಕಿಟೆಕ್ಟ್ಸ್ಗಳಿಗೆ ಶುಭ ಕೋರಿದರು.
ಇಂಜಿನೀಯರ ಅನಿಲ ಕರಿ ಯವರು ಈ ದಿನದ ಮಹತ್ವವನ್ನು ಸಭೆಗೆ ತಿಳಿಸಿದರು. ಆರ್ಕಿಟೆಕ್ಟ್ ಪ್ರವೀಣ ನಾಯ್ಕ ರವರು ‘ಅರೌಂಡ್ ಆರ್ಕಿಟೆಕ್ಚರ್’ ವಿಷಯವಾಗಿ ಪಿ.ಪಿ.ಟಿ ಪ್ರೆಜೆಂಟೇಷನ್ ನೀಡಿ ಪ್ರಾಚೀನ ನಾಗರೀಕತೆಯಿಂದ ಈವರೆಗೆ ಆರ್ಕಿಟೆಕ್ಚರ್ ಹೇಗೆ ಪ್ರಸ್ತುತದಲ್ಲಿದೆ ಎಂಬ ಬಗ್ಗೆ ವಿವರವಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಶಿರಸಿಯ ಹಿರಿಯ ಆರ್ಕಿಟೆಕ್ಟ್ ಜಗದೀಶ ಗೌಡ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ ಗೌಡ ಅವರು ಸಂಘದ ಕಾರ್ಯಚಟುವಟಿಕೆಗಳಿಗೆ ಶುಭಕೋರಿ ಸಂಘಕ್ಕೆ ಸ್ವಂತ ಕಛೇರಿಯನ್ನು ಹೊಂದಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಂಘದ ಕಾರ್ಯದರ್ಶಿ ಎಲ್.ಆರ್. ಹೆಗಡೆ ರವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಉಪಾಧ್ಯಕ್ಷ ವಿನಯ ಗಾಂವಕರ, ಕೋಶಾಧ್ಯಕ್ಷ ಮನು ಪಿ. ಹೆಗಡೆ ವೇದಿಕೆಯಲ್ಲಿದ್ದರು. ಜಿ. ಎಸ್. ಹಿರೇಮಠ ವಂದಿಸಿದ ಕಾರ್ಯಕ್ರಮವನ್ನು ಪ್ರಕಾಶ ನೇತ್ರವಳಿಯವರು ನಿರ್ವಹಿಸಿದರು. ಸಭೆಯಲ್ಲಿ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.