ಶಿರಸಿ: ತಾಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಅ.7ರಿಂದ ಶರನ್ನವರಾತ್ರಿ ಉತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.
ಅ.7ರಿಂದ ಪ್ರತಿದಿನ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಹಾಗೂ ಸಾಯಂಕಾಲ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರಿಂದ ಶ್ರೀಚಕ್ರಾರ್ಚನೆ ನೆರವೇರುವುದು.
ಪ್ರತಿದಿನ ಬೆಳಿಗ್ಗೆ ವೈದಿಕರಿಂದ ಶ್ರೀ ದೇವೀಭಾಗವತ, ಚಂಡೀಸಪ್ತಶತೀ, ಋಗ್ವದ, ಯಜುರ್ವೇದ, ಸಾಮವೇದ ಮತ್ತು ಅಧ್ಯಾತ್ಮ ರಾಮಾಯಣ ಪಾರಾಯಣ, ಶ್ರೀದೇವಿಗೆ ಶತರುದ್ರಾಭಿಷೇಕ, ಸೂಕ್ತ ಪಾಠಗಳು, ನವಗ್ರಹ ಹಾಗೂ ಬ್ರಹ್ಮಾಸ್ತ್ರ ಜಪಗಳು ನಡೆಯುವವು. ಮಧ್ಯಾಹ್ನ ದುರ್ಗಾಪೂಜೆ ಮಹಾಮಂಗಳಾರತಿ, ತೀರ್ಥ-ಪ್ರಸಾದ ಮತ್ತು ಅನ್ನಪ್ರಸಾದ ವಿತರಣೆ ನಡೆಯುತ್ತದೆ. ಮಧ್ಯಾಹ್ನ 2.30 ರಿಂದ ಶ್ರೀ ದೇವೀ ಭಾಗವತ ಪುರಾಣ ಪ್ರವಚನ ಹಾಗೂ ರಾತ್ರಿ 9 ರಿಂದ ದುರ್ಗಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ನಡೆಯುವುದು.
ಅ.10 ರವಿವಾರ ಶ್ರೀಲಲಿತಾ ಪಂಚಮಿ ಪ್ರಯುಕ್ತ ಸಾಯಂಕಾಲ ಶತರುದ್ರಾಭಿಷೇಕ, ಅ. 11 ಸೋಮವಾರ ಶಾರದಾ ಸ್ಥಾಪನೆ, ಅ. 13 ಬುಧವಾರ ದುರ್ಗಾಷ್ಟಮೀ, ಅ. 14 ಗುರುವಾರ ಮಹಾನವಮಿ, ಲಕ್ಷ್ಮೀಪೂಜೆ ಕ್ಷೇತ್ರಪಾಲ ಬಲಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಅ. 15 ಶುಕ್ರವಾರ ವಿಜಯಾ ದಶಮೀ. ಅಂದು ಶಾರದಾ ವಿಸರ್ಜನ, ವಿದ್ಯಾರಂಭ, ಮಧ್ಯಾಹ್ನ ಮಹಾಪೂಜಾ, ತೀರ್ಥ ಪ್ರಸಾದ ವಿತರಣೆ, ಅಪರಾಹ್ನ ಶ್ರೀಲಕ್ಷ್ಮೀನೃಸಿಂಹ ದೇವರ ಸೀಮೋಲ್ಲಂಘನ, ಶಮೀಪೂಜೆ, ಅಷ್ಟಾವಧಾನ ಸೇವೆ, ರಾತ್ರಿ 8 ಕ್ಕೆ ಶ್ರೀ ದೇವಿಗೆ ಮಹಾಮಂಗಳಾರತಿ, ರಾಜೋಪಚಾರ ಪೂಜೆಗಳು ನಡೆದ ನಂತರದಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಶ್ರೀ ದೇವಿಯಲ್ಲಿ ಲೋಕಮಂಗಲವನ್ನು ಪ್ರಾರ್ಥಿಸಲಿದ್ದಾರೆ. ನಂತರ ವಿದ್ವತ್ ಸಂಭಾವನೆ, ವಿಪ್ರ ಮಂತ್ರಾಕ್ಷತೆ, ಫಲಮಂತ್ರಾಕ್ಷತೆಯೊಂದಿಗೆ ಉತ್ಸವ ಮಂಗಲವಾಗಲಿದೆ.
ಮರುದಿನ ಅ. 16 ಶನಿವಾರ ಚಂಡೀಹವನ ಶ್ರೀಲಕ್ಷ್ಮೀನೃಸಿಂಹ ಹವನ ನಡೆಯುವುದು. ಪ್ರತಿದಿನ ಸಾಯಂಕಾಲ 6.30 ರಿಂದ ಸುಧರ್ಮಾ ಸಭಾಭವನದಲ್ಲಿ ಯುವ ಹಾಗೂ ಪ್ರಸಿದ್ಧ ಕಲಾವಿದರಿಂದ ಭಕ್ತಿಸಂಗೀತ, ಹಿಂದೂಸ್ತಾನೀ ಗಾಯನ, ಭರತನಾಟ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.