ಶಿರಸಿ: ಜೇನು ಗೂಡು ಕಂಡರೆ ಬೆಂಕಿ ಹಚ್ಚಿ ತುಪ್ಪ ಕೀಳುವ ಸಾಕಷ್ಟು ಜನರಿದ್ದಾರೆ. ಆದರೆ ನೆಲೆ ಕಳೆದುಕೊಂಡ ಜೇನಿಗೆ ಆವಾಸ ಒದಗಿಸುವ ಮನಸ್ಸು ತೀರಾ ಅಪರೂಪ. ಆದರೆ ನೆಲಕ್ಕುರುಳಿದ ಮಿಸರಿ ಗೂಡನ್ನ ರಕ್ಷಿಸಲೆಂದು ಸಾಗರದಿಂದ ಶಿರಸಿಗೆ ಬಂದ ವ್ಯಕ್ತಿ ಹೃದಯ ವೈಷಾಲ್ಯತೆ ಮೆರೆದಿದ್ದಾರೆ.
ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಮರಕಡಿತ ಮಾಡಲಾಗುತ್ತಿದೆ. ಕಡಿದ ಮರಗಳಲ್ಲಿ ಮಿಸರಿ ಹುಳುಗಳು (ಸ್ಟಿಂಗ್ಲೆಸ್ ಬೀ) ಗೂಡುಕಟ್ಟಿ ವಾಸ ಇವೆ. ಮರ ನೆಲಕ್ಕುರುಳಿದ ಪರಿಣಾಮ ಆವಾಸ ಕಳೆದುಕೊಂಡ ಹುಳುಗಳು ಮತ್ತು ಮರಿಗಳು ಸಾಯುತ್ತವೆ. ಇವುಗಳ ಉಳಿವಿಗೆ ಪ್ರಯತ್ನಿಸುವವರು ತೀರಾ ಕಡಿಮೆ. ಆದರೆ ಸಾಗರ ತಾಲೂಕು ಕಾನಲೆ ಗ್ರಾಮದ ಗುರುಪ್ರಸಾದ ಅವರು ಈ ಹುಳುಗಳ ರಕ್ಷಣೆಗೆ ಮುಂದಾಗಿದ್ದಾರೆ. ನಿಜ ಅವರು ಇದೇ ಕಾರಣಕ್ಕೆ ಸಾಗರದಿಂದ ಶಿರಸಿಗೆ 90 ಕಿ.ಮಿ ಪ್ರಯಾಣ ಮಾಡಿ ಒಡೋಡಿ ಬಂದಿದ್ದಾರೆ.
ಜೀವ ಉಳಿಸಿದ ಪೇಸ್ ಬುಕ್ ಪೋಸ್ಟ್ !:
ಶಿರಸಿ ತಾಲೂಕಿನ ಬಂಡಲ ಸಮೀಪ ಮರ ಕಡಿತದಿಂದಾಗಿ ಅತಂತ್ರವಾಗಿ ಹಾರಾಡುತ್ತಿದ್ದ ಮಿಸರಿಗಳನ್ನು ಗಮನಿಸಿದ ಗಣೇಶ ಹೊಸ್ಮನೆ ಎಂಬುವವರು ಮಾನವನ ಅಭಿವೃದ್ಧಿ ಕಾರ್ಯಕ್ಕೆ ಜೀವ ಸಂಕುಲ ಹೇಗೆ ಸಂಕಷ್ಟಕ್ಕೆ ಬೀಳುತ್ತಿದೆ ಎಂದು ಮರುಕ ವ್ಯಕ್ತಪಡಿಸಿ ಫೇಸ್ಬುಕ್ ಪೋಸ್ಟ್ ಮಾಡುತ್ತಾರೆ. ಇದನ್ನು ಗಮನಿಸಿದ ಗುರುಪ್ರಸಾದ್ ಯಾರಾದರೂ ರಕ್ಷಿಸಿ ಎಂದು ಕಾಮೆಂಟ್ ಮಾಡುತ್ತಾರೆ. ಅಲ್ಲದೇ ಕೆಲವರಲ್ಲಿ ವಿನಂತಿಯನ್ನೂ ಮಾಡುತ್ತಾರೆ. ಅದರೆ ಯಾವುದೇ ಪ್ರಯೋಜನವಾಗದಾಗ ಅವರೇ ಬೈಕ್ ಹತ್ತಿ ಶಿರಸಿಗೆ ಬಂದು ಹುಳುಗಳ ರಕ್ಷಣೆ ಮಾಡಿದ್ದಾರೆ.
ಬಂಡಲದ ಸನಿಹ ಬಿದ್ದ ನಾಲ್ಕಾರು ಮರಗಳಲ್ಲಿ ಮಿಸರಿ ಹುಳುಗಳು ವಾಸ ಇದ್ದವು. ಗುಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನೂರಾರು ಮರಿಗಳು ಸತ್ತಿದ್ದವು. ಮೊಟ್ಟೆಗಳು ಇರುವೆ, ಓತಿಕ್ಯಾತದ ಪಾಲಾಗುತ್ತಿದ್ದವು. ಸಾಮಾನ್ಯವಾಗಿ ಮಿಸರಿ ಹುಳುಗಳು ಸಂಜೆ ವೇಳೆಗೆ ಗೂಡು ಸೇರುತ್ತವೆ. ಅವುಗಳನ್ನು ರಕ್ಷಿಸಿ ಆವಾಸ ಕಲ್ಪಿಸಿದ ಗುರುಪ್ರಸಾದ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ರಾತ್ರಿಯಾಗುವವರೆಗೂ ಕಾದು ಹುಳುಗಳನ್ನ ಹಿಡಿದ ಗುರುಪ್ರಸಾದ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತು ಇ-ಉತ್ತರ ಕನ್ನಡದೊಂದಿಗೆ ಮಾತನಾಡಿದ ಗುರುಪ್ರಸಾದ್ ’ಸಂರಕ್ಷಿಸಲಾದ ಹುಳುಗಳಲ್ಲಿ ಬಹುತೇಕ ಬದುಕಬಹುದು. ಆದರೆ ಮೊಟ್ಟೆಗಳು ಮರಿಯಾಗುವ ಸಂಭವ ಕಡಿಮೆ. ಬೇರೊಂದು ಪೆಟ್ಟಿಗೆಯಿಂದ ಮುಷ್ಟಿ ಎಳೆ ಮೊಟ್ಟೆ ನೀಡಿ ಗೂಡು ಕಾಪಾಡಬೇಕಿದೆ’ ಎಂದು ತಿಳಿಸಿದ್ದಾರೆ.
ಏನಿದು ಮಿಸರಿ ಹುಳು?:
ಮಿಸರಿ ಹುಳುಗಳು ಜೇನು ಜಾತಿಗೆ ಸೇರಿದ ಹುಳುಗಳಾಗಿದ್ದು ಮರಗಳ ಪೊಟರೆಗಳಲ್ಲಿ ಗೂಡು ಕಟ್ಟಿ ಜೇನು ಮಾದರಿಯಲ್ಲಿ ಸಿಹಿಯಾದ ತುಪ್ಪ ಸಿದ್ಧಪಡಿಸುತ್ತವೆ. ಜೇನು ತುಪ್ಪದಂತೆ ಇರುವ ಇವು ಔಷಧಗಳಿಗೆ ಬಳಕೆಯಾಗುತ್ತವೆ. ರಟ್ಟು ಹಿಂಡಿ ತುಪ್ಪ ತೆಗೆದ ಬಳಿಕ ಅವುಗಳಿಂದ ಸಿದ್ಧಪಡಿಸುವ ಅಂಟು ಹೆಚ್ಚು ಬಳಕೆಯಾಗುತ್ತದೆ. ಇವು ಪರಾಗ ಸ್ಪರ್ಷ ಕ್ರಿಯೆಗೆ ಹೆಚ್ಚು ಸಹಕಾರಿಯಾಗಿವೆ.
ಪಶ್ಚಿಮ ಘಟ್ಟದಲ್ಲಿ ವ್ಯಾಪಕವಾಗಿದ್ದ ಮಿಸರಿ ಹುಳು ಈಚಿನ ವರ್ಷದಲ್ಲಿ ಹವಾಮಾನ ವೈಪರಿತ್ಯ, ಪರಿಸರನಾಶದಿಂದ ಇಳಿಮುಖಗೊಳ್ಳುತ್ತಿರುದು ದುರದೃಷ್ಟಕರ.