ಶಿರಸಿ: ಹೊಸ ಶಿಕ್ಷಣ ನೀತಿ ಜಾರಿಗೆ ಬಂದಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿಯೇ ಪರಿಗಣಿಸಬೇಕು ಎಂದು ಮಲೇಶ್ವರ ಮಹಾಸಂಸ್ಥಾನದ ಶ್ರೀ ಬಸವ ರಮಾನಂದ ಸ್ವಾಮೀಜಿ ಸೂಚಿಸಿದರು.
ಶಿರಸಿಯ ರುದ್ರದೇವರ ಮಠದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ 9ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದರು. ಆಯಾ ರಾಜ್ಯಗಳಲ್ಲಿರುವ ಭಾಷೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಪ್ರಥಮ ಭಾಷೆಯನ್ನಾಗಿ ಓದುವುದನ್ನ ಖಡ್ಡಾಯಗೊಳಿಸಬೇಕು ಎಂದರು. ಇತ್ತೀಚಿನ ಪ್ರಚಲಿತ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಕವಿಗಳ ಕವನ ಸಂಕಲನಗಳನ್ನು, ಚುಟುಕುಗಳನ್ನು, ಕಾದಂಬರಿಗಳನ್ನು ಪಠ್ಯಕ್ಕೆ ಅಳವಡಿಸಬೇಕು. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರುವಂತಹ ಪಠ್ಯ ರೂಪಿಸಬೇಕು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೊಸ ಹೊಸ ಆಲೋಚನೆಗಳಿಗೆ ಸ್ಥಾನ ನೀಡಿರುವಂತೆ, ಅದಕ್ಕೆ ಪೂರಕ ಉದ್ಯೋಗ ಸೃಷ್ಟಿಯಲ್ಲೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಮನುಷ್ಯ ಜೀವನಜನ್ಯವಾದ ವಿಚಾರಗಳು ಪಠ್ಯದಲ್ಲಿ ಬರಬೇಕು. ನಾವು ಪಡೆದಿರುವ ಶಿಕ್ಷಣವೇ ಬೇರೆ, ನಾವು ಕೆಲಸ ಮಾಡುವ ವಿಭಾಗವೇ ಬೇರೆ ಎಂಬಂತಾಗಬಾರದು. ಶಿಕ್ಷಣಕ್ಕೆ ಸಂಬಂಧಿಸಿದ ವೃತ್ತಿಯೇ ನಮ್ಮದಾದಾಗ ಮನುಷ್ಯನ ಸಾಧನೆ ಸಾಧ್ಯ.ಆ ಮೂಲಕ ಸಮಾಜದ ಏಳಿಗೆ ಸಾಧ್ಯ ಎಂದರು. ರಾಜ್ಯದಲ್ಲಿರುವ 27ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರ ಮೂಲಕ ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಚುಟುಕು ಸಾಹಿತ್ಯ ಚಿಕ್ಕದಾದರೂ ಅದರ ಫಲಿತಾಂಶ ದೊಡ್ಡದು ಎಂದರು. ನಾಡಿಗೆ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರನ್ನು ಕೊಟ್ಟ ನಾಡು ನಮ್ಮದಾಗಿದೆ. ಅವರು ಚುಟುಕಿನ ಮೂಲಕ ಜೀವನ ದರ್ಶನ ಮಾಡಿಸಿದ್ದು, ಇತಿಹಾಸದ ಪುಟಗಳಲ್ಲಿ ಸದಾ ಅಚ್ಚೊತ್ತಿದೆ ಎಂದರು.
ಈ ವೇಳೆ ಹರಳೂರು ಶಿವಕುಮಾರ ಬರೆದ ನುಡಿ ಲಾವಣ್ಯ, ಮಣ್ಣೆ ಮೋಹನ ಬರೆದ ಆತ್ಮಾರ್ಪಣಾ, ಜಿ.ಯು.ನಾಯಕ ಬರೆದ ಇಬ್ಬರು ಸ್ಮರಣೀಯರು ಪುಸ್ತಕ ಬಿಡುಗಡೆಗೊಳಿಸಲಾಯಿತು.
ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕೇಂದ್ರ ಸಮಿತಿಯ ಪ್ರೊ.ಡಿ.ಡಿ.ಎಂ.ದೇಸಾಯಿ, ಕೃಷ್ಣಮೂರ್ತಿ ಕುಲಕರ್ಣಿ, ಸಾಹಿತಿಗಳಾದ ಚನ್ನಬಸಪ್ಪ ಧಾರವಾಡ ಶೆಟ್ಟಿ, ಪ್ರೊ.ಜಿ.ಯು.ನಾಯಕ, ಮಂಜುನಾಥ ಹೆಗಡೆ ಇದ್ದರು.
ಪುಸ್ತಕಗಳ ಕುರಿತು ಬರಹಗಾರ ಗಣಪತಿ ಭಟ್ಟ ವರ್ಗಾಸರ ಮಾತನಾಡಿದರು. ನಾಡಿನ ಹಿರಿ ಕಿರಿಯ 50ಕ್ಕೂ ಹೆಚ್ಚು ಕವಿಗಳು ಸ್ವರಚಿತ ಚುಟುಕುಗಳನ್ನು ವಾಚಿಸಿದರು