ಶಿರಸಿ: ಭಾರತದ ಪ್ರಜಾತಂತ್ರ ವ್ಯವಸ್ಥೆ ನಿಂತಿರುವುದು ಗ್ರಾಮಗಳಲ್ಲಿ. ಗ್ರಾಮೀಣ ಮಟ್ಟದಲ್ಲಿ ಶಾಸನಗಳ ರಚನಾ ಕಾರ್ಯ ಆಗಬೇಕು ಎಂದು ಪ್ರಮೋದ್ ಹೆಗಡೆ ಹೇಳಿದರು.
ನಗರದ ಟಿಆರ್ ಸಿ ಬ್ಯಾಂಕ್ ಸಭಾಭವನದಲ್ಲಿ ಶನಿವಾರ ದೇಶಕ್ಕಾಗಿ ನಾವು ಸಂಘಟನೆ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿ ಅವರ 152 ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಗಾಂಧಿ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯದ ಮೇಲೆ ಮಾತನಾಡಿದ ಅವರು ಗಾಂಧಿ ಮತ್ತು ಗ್ರಾಮೀಣಾಭಿವೃದ್ಧಿ ಒಂದೇ ನಾಣ್ಯದ ಎರಡು ಮುಖ ಎನ್ನುವಷ್ಟರ ಮಟ್ಟಿಗೆ ಒಂದಕ್ಕೊಂದು ಪೂರಕ ಸಂಗತಿಯಾಗಿದೆ. ದೇಶದ ಅಭಿವೃದ್ಧಿಗೆ ಗ್ರಾಮೀಣ ಭಾಗದಲ್ಲೇ ಶಾಸನಗಳು ರಚನೆಯಾಗಬೇಕು ಎನ್ನುವ ಕಲ್ಪನೆ ಅವರದ್ದಾಗಿತ್ತು. ಸ್ವಾತಂತ್ರ್ಯ ಬಂದು 70 ವರ್ಷದ ಬಳಿಕವೂ ಇದು ಸಂಪೂರ್ಣ ಸಾಧ್ಯವಾಗಿಲ್ಲ ಎಂದು ಬೇಸರಿಸಿದರು. ವಿಶ್ವದಲ್ಲಿ ರಕ್ತರಹಿತ ಸ್ವಾತಂತ್ರ್ಯ ಸಿಕ್ಕಿರುವುದು ಭಾರತಕ್ಕೆ ಮಾತ್ರ. ಅದಕ್ಕೆ ಗಾಂಧಿ ಪ್ರೇರಕ. ಗಾಂಧಿ ಸಿದ್ಧಾಂತದ ಆಧಾರದಿಂದ ಮಾತ್ರ ಭಾರತ ಒಂದಾಗಿರಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿ.ಪಿ. ಹೆಗಡೆ ವೈಷಾಲಿ ಮಾತನಾಡಿ, ಗಾಂಧೀಜಿಯ ಧೋರಣೆಗಿಂತ ಗಾಂಧಿ ಮುಖ ಹೊತ್ತ ನೋಟಿಗೆ ಇಂದು ಹೆಚ್ಚಿನ ಮಹತ್ವ ಸಿಗುತ್ತಿದೆ. ನೋಟು ಮತ್ತು ನೋಟದ ನಡುವೆ ಇರುವ ವ್ಯತ್ಯಾಸದ ಅರಿವು ಇಂದಿನ ದಿನಮಾನದಲ್ಲಿ ಅತ್ಯಗತ್ಯ ಎಂದು ಹೇಳಿದರು.
ಉದ್ಯಮಿ ಭೀಮಣ್ಣ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ಶಿಶಿಭೂಷಣ ಹೆಗಡೆ, ಎಸ್. ಕೆ ಭಾಗ್ವತ್, ಇಕ್ರಾ ಸಂಸ್ಥೆ ನಿರ್ದೇಶಕ ಅಬ್ಬಾಸ್ ಥೋನ್ಸೆ, ಸಂಪದ ಸಾಲು ಪತ್ರಿಕೆ ಸಂಪಾದಕ ವೆಂಕಟೇಶ ಸಂಪ, ಕರ್ನಾಟಕ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕತಷ ಸಂದೀಪ ಬೂದಿಹಾಳ, ಹೋರಾಟಗಾರ ಸುಧೀರ್ ಕುಮಾರ ಇದ್ದರು.
ಶ್ರೀಪಾದ ಹೆಗಡೆ ಕಡವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶಕ್ಕಾಗಿ ನಾವು ಸಂಘಟನೆಯ ಸಂಚಾಲಕಿ ಜ್ಯೋತಿ ಪಾಟೀಲ್ ಸ್ವಾಗತಿಸಿದರು. ಸಹಸಂಚಾಲಕ ಪ್ರವೀಣ ಹೆಗಡೆ ನಿರೂಪಿಸಿದರು.