ಬೆಂಗಳೂರು: ಇ- ಕಾಮರ್ಸ್ ವೇದಿಕೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ದೊರೆಯಬೇಕು. ಹಾಗೆಯೇ ಅದರ ಸಂಪೂರ್ಣ ಲಾಭವನ್ನು ಉತ್ಪಾದಕರು ಪಡೆಯುವಂತಾಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ಲಿಪ್ ಕಾರ್ಟ್ ಸಂಸ್ಥೆಯ ರಜನೀಶ್ ಕುಮಾರ್ ಅವರೊಂದಿಗೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿರುವ ಅವರು, ಸಂಸ್ಥೆ ರಾಜ್ಯದಲ್ಲಿ ಅನೇಕ ಜನರಿಗೆ ಉದ್ಯೋಗ ನೀಡಿದೆ. ರೈತರು, ಸಣ್ಣ ಉತ್ಪಾದಕರು, ಕರಕುಶಲ ವಸ್ತುಗಳ ಮಾರಾಟಕ್ಕೆ ಅವಕಾಶ ಒದಗಿಸಿದ್ದು, ಸಂಸ್ಥೆಯ ಈ ಕಾರ್ಯವನ್ನು ಸಿಎಂ ಶ್ಲಾಘಿಸಿದ್ದಾರೆ.
ಹಾಗೆಯೇ ರೈತರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯೊಂದಿಗೆ, ಇ-ಕಾಮರ್ಸ್ಗೆ ಸಂಬಂಧಿಸಿದಂತೆಯೂ ಅವರಿಗೆ ಹೆಚ್ಚು ಮಾಹಿತಿ ದೊರೆಯಬೇಕು. ಮಾರುಕಟ್ಟೆಯ ಬೇಡಿಕೆಗಳ ಮಾಹಿತಿಯೂ ಸಹ ಅವರಿಗೆ ದೊರೆಯಬೇಕು. ಇದರಿಂದ ಅವರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದ ವೈವಿಧ್ಯಮಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸರ್ಕಾರದ ಜೊತೆಗೆ ಕೈ ಜೋಡಿಸುವಂತೆಯೂ ಅವರು ತಿಳಿಸಿದ್ದಾರೆ.