ಕುಮಟಾ: ತಾಲೂಕಿನ ಬಾಡ ಗ್ರಾಮದಲ್ಲಿ ಉದ್ದೇಶಿತ ಎಮ್.ಎಸ್.ಐ.ಎಲ್. ಮದ್ಯ ಮಾರಾಟ ಮಳಿಗೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶುಕ್ರವಾರ ಸ್ಥಳ ಪರಿಶೀಲನೆಗೆ ಆಗಮಿಸಿದ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಮ್. ಅವರ ಸಮ್ಮುಖದಲ್ಲಿ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
ಉದ್ದೇಶಿತ ಮದ್ಯ ಮಾರಾಟ ಮಳಿಗೆಯು ಬಾಡದ ಜನತಾ ವಿದ್ಯಾಲಯ ಮಾಧ್ಯಮಿಕ ಶಾಲೆಯ ಪಕ್ಕದಲ್ಲಿಯೇ ಬರುತ್ತದೆ. ಅದಲ್ಲದೇ ಸುತ್ತಮುತ್ತಲು ವಸತಿ ಸಮುಚ್ಚಯವಿದೆ. ಇದೇ ಸ್ಥಳದಲ್ಲಿ ಮದ್ಯ ಮಾರಾಟ ಮಳಿಗೆ ತೆರೆದರೆ ಗ್ರಾಮದ ಸ್ವಾಸ್ಥ್ಯ ಹಾಳಗಲಿದೆ ಎಂದು ಸ್ಥಳೀಯರಾದ ನಾಗೇಶ ನಾಯ್ಕ, ಸಚಿನ ನಾಯ್ಕ, ಗುರುನಂದನ ನಾಯ್ಕ, ಗಣೇಶ ನಾಯ್ಕ ಸೇರಿದಂಗೆ ಬಹುತೇಕರು ಉಪ ಆಯುಕ್ತೆ ವನಜಾಕ್ಷಿ ಎಮ್. ಅವರ ಗಮನಕ್ಕೆ ತಂದರು.
ಬಳಿಕ ಜನತಾ ವಿದ್ಯಾಲಯ ಮಾಧ್ಯಮಿಕ ಶಾಲೆಯ ದ್ವಾರದಿಂದ ಉದ್ದೇಶಿತ ಎಮ್.ಎಸ್.ಐ.ಎಲ್. ಮಳಿಗೆಯ ನಡುವಿನ ಅಂತರ ಅಳೆಯಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆ ಅಲ್ಲದ ಖಾಸಗೀ ಜಾಗದಲ್ಲೂ ಅಬಕಾರಿ ಇಲಾಖೆಯ ಅಧಿಕಾರಿಗಳು ಅಳತೆಗೆ ಮುಂದಾದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.
ಇನ್ನು ಉದ್ದೇಶಿತ ಸ್ಥಳದಲ್ಲೇ ಎಮ್.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆ ಸ್ಥಾಪನೆ ಮಾಡಬೇಕು ಎಂದು ಕಟ್ಟಡದ ಮಾಲಿಕ ರಾಮ ನಾಯ್ಕ, ಸ್ಥಳೀಯರಾದ ರಾಘವ ನಾಯ್ಕ , ವಿನೋದ ನಾಯ್ಕ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಎಮ್.ಎಸ್.ಐ.ಎಲ್. ಪರ ಮಾತನಾಡಲು ಮುಂದಾದ ಬಾಡ ಗ್ರಾಮಸ್ಥರಲ್ಲದವರ ವಿರುದ್ಧ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.
ಬಾಡ ಗ್ರಾಮದಲ್ಲಿ ಎಮ್.ಎಸ್.ಐ.ಎಲ್ ಬೇಕು ಎನ್ನಲು ನೀವು ಯಾರು ಎಂಬ ಸ್ಥಳೀಯರ ಆಕ್ಷೇಪದಿಂದ ಪ್ರಾರಂಭವಾದ ಮಾತಿನ ಚಕಮಕಿ ತಾರಕಕ್ಕೇರಿತು. ಮದ್ಯ ಮಾರಾಟ ಮಳಿಗೆ ತೆರೆಯಲು ಸ್ಥಳಿಯರ ಅಹವಾಲನ್ನು ಸ್ವೀಕಾರ ಮಾಡಬೇಕೇ, ಹೊರತಾಗಿ ಬಾಡ ಗ್ರಾಮಸ್ಥರಲ್ಲದವರ ಅಭಿಪ್ರಾಯಕ್ಕೆ ಮನ್ನಣೆ ನೀಡಬಾರದು. ಉದ್ದೇಶಿತ ಮದ್ಯ ಮಾರಾಟ ಮಳಿಗೆಯಿಂದ 500 ಮೀಟರ್ ಸುತ್ತಲಿನ ಮನೆಗಳಿಗೆ ತಾವೇ ಖುದ್ದಾಗಿ ತೆರಳಿ, ಅಭಿಪ್ರಾಯ ಸಂಗ್ರಹಣೆ ಮಾಡಬೇಕು ಎಂದು ಸ್ಥಳೀಯ ಗ್ರಾಮಸ್ಥರು ಉಪ ಆಯುಕ್ತರ ಬಳಿ ಕೇಳಿಕೊಂಡರು.
ಬಳಿಕ ಅಬಕಾರಿ ಉಪಾಯುಕ್ತೆ ವನಜಾಕ್ಷಿ ಎಮ್. ಅವರು ಮಧ್ಯ ಪ್ರವೇಶಿಸಿ, ಸರ್ಕಾರದ ನಿಯಮ ಹಾಗೂ ಗ್ರಾಮಸ್ಥರ ಆಗ್ರಹವನ್ನು ಗಣನೆಗೆ ತೆಗೆದುಕೊಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ವಾತಾವರಣವನ್ನು ತಿಳಿಗೊಳಿಸಿದರು.