ಕುಮಟಾ: ತಮ್ಮ ಅನಧಿಕೃತ ಕೆಲಸಗಳಿಗೆ ವಿರುದ್ಧವಾಗಿ ನಡೆದುಕೊಂಡಿದಕ್ಕೆ, ಕಂದಾಯ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೋರ್ವರನ್ನು ವರ್ಗಾವಣೆ ಮಾಡಲು ಕೆಲ ಕಾಣದ ಕೈಗಳು ಹುನ್ನಾರ ನಡೆಸುತ್ತಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಯಾಗುತ್ತಿದೆ.
ತಾಲೂಕಿನ ಮಿರ್ಜಾನ್ ನೆಮ್ಮದಿ ಕೇಂದ್ರದಲ್ಲಿ ಕಂದಾಯ ನಿರೀಕ್ಷಕರಾಗಿ ಸುಮಾರು ಒಂದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಣ್ಣಯ್ಯ ಜೆ.ಲಂಬಾಣಿ ಅವರು ಇತ್ತೀಚೆಗೆ ನಾಗೂರು ಬಳಿಯ ಸರ್ವೆ ನಂಬರ್ 318, 212, 213, 214, 215, 218, 219, 308, 313 ರ ಸುಮಾರು 20 ಎಕರೆ ಕಂದಾಯ ಇಲಾಖೆಯ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಕೊಂಡಿದ್ದನ್ನು ಗಮನಿಸಿದ್ದರು.ಇದು ತಹಶಿಲ್ದಾರರ ಗಮನಕ್ಕೆ ಕೂಡ ತರಲಾಗಿತ್ತು.ನಂತರ ತಹಶಿಲ್ದಾರರ ನಿರ್ದೇಶನದ ಮೇರೆಗೆ ಜಾಗಕ್ಕೆ ಹಾಕಿದ್ದ ತಂತಿ ಬೇಲಿಯನ್ನು ಸ್ವತಃ ತಾವೇ ಸ್ಥಳಕ್ಕೆ ತೆರಳಿ ಒತ್ತುವರಿ ಮಾಡಿಕೊಂಡಿದ್ದ ಜಾಗಕ್ಕೆ ಹಾಕಲಾಗಿದ್ದ ತಂತಿಗಳನ್ನು ತೆಗೆದು ಸಂಪೂರ್ಣ ಜಾಗವನ್ನು ಖುಲ್ಲಾಪಡಿಸಿದ್ದರು.
ಇದನ್ನು ತಿಳಿದ ಖಾಸಗಿ ವ್ಯಕ್ತಿಗಳು, ಅಣ್ಣಯ್ಯ ಅವರು ಇದರಲ್ಲಿ ಭಾಗಿಯಾಗಿ ತೆರವುಗೊಳಿಸಿರುವುದನ್ನು ತಿಳಿದು ತಮ್ಮ ಅನಧಿಕೃತ ಕೆಲಸಕ್ಕೆ ಇವರಿಂದ ತೊಂದರೆಯಾಗುತ್ತಿದೆಯೆಂದು ತಿಳಿದು ಅವರನ್ನು ಆ ಹುದ್ದೆಯಿಂದ ಬೇರೆಡೆ ವರ್ಗಾಯಿಸುವಲ್ಲಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಣ್ಣಯ್ಯ ಅವರು ನೆರೆಪರಿಹಾರ ವಿಚಾರದಲ್ಲಿ ಸುಮಾರು 3000 ಕುಟುಂಬಕ್ಕೆ ನೆರೆ ಪರಿಹಾರ ನೀಡುವಲ್ಲಿ ಮುತುರ್ಹಿವಹಿಸಿ ದಾಖಲೆಗಳನ್ನು ತಕ್ಷಣ ಪರಿಶೀಲಿಸಿ ಶೀಘ್ರ ಪರಿಹಾರ ಸಿಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಜೊತೆಗೆ ನೆಮ್ಮದಿ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರಿಗೂ ತಕ್ಷಣ ಸ್ಪಂದಿಸುವ ಗುಣವನ್ನು ಹೊಂದಿದ್ದಾರೆ. ಹೀಗಾಗಿ ಅಂತಹ ಅಧಿಕಾರಿಯನ್ನು ಖಾಸಗಿ ವ್ಯಕ್ತಿಗಳ ವಿಚಾರದಲ್ಲಿ ವರ್ಗಾವಣೆ ಮಾಡುವ ಕುರಿತು ಹುನ್ನಾರ ನಡೆಯುತ್ತಿರುವುದು ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಒಟ್ಟಾರೆ ಪ್ರಾಮಾಣಿಕವಾಗಿ ಮೇಲಾಧಿಕಾರಿಗಳ ಆದೇಶದ ಮೇರೆಗೆ ತನ್ನ ಕಾರ್ಯವನ್ನು ನಿರ್ವಹಿಸಿದ್ದ ಅಣ್ಣಯ್ಯ ಅವರನ್ನು ವರ್ಗಾವಾಣೆ ಮಾಡುವುದು ಸರಿಯಾದ ಕ್ರಮವಲ್ಲ. ಅವರ ಪೂರ್ಣಾವಧಿಯ ವರೆಗೆ ಅವರನ್ನು ಮಿರ್ಜಾನ್ ನಾಡ ಕಛೇರಿಯಲ್ಲೇ ಉಳಿಸಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.