ಅಂಕೋಲಾ: ಲಸಿಕೆ ಪಡೆಯುವ ಮೂಲಕ ರೇಬಿಸ್ ರೋಗ ಹರಡುವಿಕೆಯನ್ನು ತಡೆಯಲು ಸಾಧ್ಯ ಎಂದು ಹೊನ್ನಾವರದ ಸೆಂಟ್ ಇಗ್ನೆಷಿಯಸ್ ಇನ್ಸಿಟ್ಯುಟ್ ಆಫ್ ಹೆಲ್ತ ಸೈನ್ಸ್’ನ ಪ್ರಾಚಾರ್ಯ ಎಸ್.ಆರ್ ಡಯನಾ ಹೇಳಿದರು.
ವಿಶ್ವ ರೇಬಿಸ್ ದಿನದ ಅಂಗವಾಗಿ ಬೆಳಕಿನಂದ ಸಾಂಸ್ಕøತಿಕ ಪ್ರತಿಷ್ಠಾನ ಅಡಿ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಜಾಗೃತಿ ಇದ್ದರೆ ರೇಬಿಸ್ ರೋಗದಿಂದ ರಕ್ಷಣೆ ಪಡೆಯಬಹುದಾಗಿದೆ. ಎಲ್ಲಾ ನಾಗರಿಕರು ಸ್ವಯಂ ರಕ್ಷಣೆಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಈ ರೋಗದಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ವಿವರಿಸಿದರು. ರೇಬಿಸ್ ರೋಗಿಗಳಿಗೆ ಆತ್ಮಸ್ಥೈರ್ಯ ಅಗತ್ಯವಿದೆ. ರೋಗಿಗಳಿಗೆ ರೇಬಿಸ್ ಬಗೆಗಿನ ಭಯದ ಬದಲು ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದು ಹೇಳಿದರು.
ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್’ನ ಉಪ ಪ್ರಾಚಾರ್ಯೆ ದೀಪಾಲಿ ಕುರ್ಡೇಕರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯರಾದ ಶಂಕರಗೌಡ ಕಡೇಮನಿ ಸ್ವಾಗತಿಸಿದರು. ನಯನಾ ತಾಂಡೇಲ್ ನಿರ್ವಹಿಸಿದರು. ರಶ್ಮಿ ನಾಯಕ ವಂದಿಸಿದರು. ಆನ್ ಲೈನ್ ಮೂಲಕ ವಿದ್ಯಾರ್ಥಿಗಳು ಕಾರ್ಯಕ್ರಮ ವೀಕ್ಷಿಸಿದರು.