ಯಲ್ಲಾಪುರ: ಅನುಭವಗಳ ಹೆಚ್ಚಳಕ್ಕಾಗಿ ಪ್ರವಾಸ ಮಾಡುವುದು ಸೂಕ್ತ ಎಂದು ಇಡಗುಂದಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪ್ರಸನ್ನ ಹೆಗಡೆ ಹೇಳಿದರು.
ಅವರು ಮಂಗಳವಾರ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ನೇತಾಜಿ ಸಮಾಜ ವಿಜ್ಞಾನಗಳ ಸಂಘದ ಆಶ್ರಯದಲ್ಲಿ ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ ಆವಾರದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಶ ಓದು, ದೇಶ ಸುತ್ತು ಎಂಬ ಮಾತಿದೆ. ಅದರಂತೆ, ಉತ್ತಮ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಪ್ರವಾಸಗಳನ್ನು ಮಾಡಿದಾಗ ಅನುಭವಗಳು ಹೆಚ್ಚುತ್ತವೆ ಎಂದು ಹೇಳಿದರು.
ಸಮಾಜ ವಿಜ್ಞಾನ ಶಿಕ್ಷಕ ರಾಘವೇಂದ್ರ ಹೆಗಡೆ ಮಾತನಾಡಿ, ಪ್ರವಾಸ ಎಂಬುದು ಮೋಜಿಗೆ ಮಾತ್ರ ಸಿಮೀತವಾಗಿರಬಾರದು. ಜ್ಞಾನ ಸಂಪಾದನೆ ದೃಷ್ಠಿಯಿಂದಲೂ ಪ್ರವಾಸ ಮಾಡುವುದು ಸೂಕ್ತ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನವೀನ ಗುನಗಾ ಹಾಜರಿದ್ದರು. ಲತಾ ಕೆ ಹೆಗಡೆ ಸ್ವಾಗತಿಸಿದರು. ಪಲ್ಲವಿ ಭಟ್ಟ ನಿರ್ವಹಿಸಿದರು. ಸೌಮ್ಯ ಭಟ್ಟ ವಂದಿಸಿದರು.