ಯಲ್ಲಾಪುರ: ನಿತ್ಯ ಜನರ ಪ್ರಾಣವನ್ನು ಹಿಂಡುವ ರಸ್ತೆಯಿದ್ದರೆ ಅದು ಅತ್ಯಂತ ಪ್ರಸಿದ್ದವಾದ ಸಾತೊಡ್ಡಿ ಜಲಪಾತಕ್ಕೆ ತೆರಳುವ ದೇಹಳ್ಳಿ- ಬಳಗಾರ- ಕಟ್ಟಿಗೆ ರಸ್ತೆ. ಹಿಂದೊಂದು ಕಾಲದಲ್ಲಿ ಸಾತೊಡ್ಡಿ ರಮ್ಯವಾದ ಜಲಪಾತದ ಕಾರಣದಿಂದ ಈ ಭಾಗ ಪ್ರಸಿದ್ದಿಗೊಂಡಿತ್ತು. ಇವತ್ತು ಈ ಭಾಗದ ಹದಗೆಟ್ಟ ರಸ್ತೆಯಿಂದಾಗಿ ಈ ಪ್ರದೇಶದ ಹೆಸರು ಎಲ್ಲರ ಬಾಯಿತುದಿಯಲ್ಲಿ ಕೇಳಿ ಬರುತ್ತಿದೆ.
ಇದು ಇಂದು ನಿನ್ನೆಯ ಕಳೆದ ಮಳೆಗಾಲದ ಕಾರಣದಿಂದಾದ್ದಲ್ಲ. ಕಳೆದ ಏಳೆಂಟು ವರ್ಷದಿಂದ ಹಾಳುಬಿದ್ದಿದೆ. ಇಷ್ಟೊಂದು ಹಾಳಾಗಿದ್ದರೂ ಈ ರಸ್ತೆಯ ದುಸ್ಥಿತಿ ಬಗ್ಗೆ ಈ ವರೆಗೆಯಾರೂ ಚಕಾರವೆತ್ತಿಲ್ಲ. ಒಂದರ್ಥದಲ್ಲಿ ರಸ್ತೆ ದುಸ್ಥಿತಿ ಬಗ್ಗೆ ದೂರಿ ದೂರಿ ಜನರಿಗೆ ಬೇಸರವಾದಂತಿದೆ. ಈ ರಸ್ತೆಯಲ್ಲಿ ಸಂಚರಿಸಿದ ಪ್ರವಾಸಿಗರಂತೂ ರಸ್ತೆ ಬಗ್ಗೆ ಥೂ, ಚಿ ಉಗಿಯುತ್ತಿದ್ದಾರೆ.
ಸಾವಿರ ಸಾವಿರ ಜನಸಂಖ್ಯೆ ಹೊಂದಿದ ದೇಹಳ್ಳಿ ಆನಗೋಡ ಬಳಗಾರ ಎರಡು ಪಂಚಾಯತಗಳ ಮಧ್ಯೆ ಹಾದು ಹೋಗುವ ಈ ರಸ್ತೆಗೆ ನಿಜವಾದ ವಾರಸುದಾರರೇ ಇಲ್ಲವೆನ್ನುವಂತಿದೆ. ಪಟ್ಟಣದಿಂದ ಸಾತೊಡ್ಡಿಗೆ 25 ಕಿ.ಮೀ ಇಂತಹ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಬೇಕು. ಕನಿಷ್ಠ ಮೂರುವರೇ ತಾಸು ಕೇವಲ 25 ಕಿ.ಮೀ ಕ್ರಮಿಸಲು ಸಮಯಬೇಕು. ವಾಹನದಲ್ಲಿ ಹೋಗುತ್ತಿದ್ದರೆ ಚಕ್ಕಡಿಯ ಗಾಡಿಯಲ್ಲಿ ಸಾಗುತ್ತಿದ್ದ ಅನುಭವವಾಗುತ್ತದೆ. ಮಳೆಗಾಲದಲ್ಲಿ ಹೊಂಡ-ಗುಂಡಿಗಳ ಮಧ್ಯೆ ಹೋಗುತ್ತಿದ್ದಾಗ ಸಾಗುತ್ತಿರುವುದು ರಸ್ತೆಯಲ್ಲಿಯೇ ಎಂಬ ಸಂಶಯ ಮೂಡುತ್ತದೆ.
ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸಿದವರು ಕಾಲು ಕೈ ಮುರಿದುಕೊಳ್ಳುವಂತ ಸ್ಥಿತಿಯಿದೆ. ಬೆನ್ನಹುರಿಗೆ ಅಪಾಯ ತಂದುಕೊಳ್ಳಬಹುದಾಗಿದೆ. ಇನ್ನು ಈ ಭಾಗದಲ್ಲಿ ಯಾರಿಗಾದರು ಹೆರಿಗೆಯ ನೋವು ಕಾಯಿಲೆಯಾದರೆ ಪರಿಸ್ಥಿತಿ ಹೇಳತೀರದು.
ಹೇಗೆಂದರೂ ಸಾತೊಡ್ಡಿ ಜಲಪಾತವಿದೆ ಪ್ರವಾಸೋದ್ಯಮದಲ್ಲಿ ಆಗುತ್ತದೆನ್ನುವ ಲೆಕ್ಕಾಚಾರ ಬಹಳಷ್ಟು ಜನರದ್ದು. ಆದರೆ ಏಳೆಂಟು ವರ್ಷವಾದರು ಈ ರಸ್ತೆ ಗೋಜಿಗೆ ಯಾರು ಹೋಗಿಲ್ಲ. ಪ್ರವಾಸೋದ್ಯಮ ಇಲಾಖೆಯ ಕಣ್ಣನ್ನೂ ತೆರೆಸುವ ಕೆಲಸ ಮಾಡಿಲ್ಲ. ಸಂಸದರಾಗಲಿ-ಸಚಿವರಾಗಲಿ ಈ ರಸ್ತೆಯ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ.
ಬಳಗಾರ ಜನರ ಬವಣೆ ಯಾರಿಗೂ ಬೇಡ:
ಬಳಗಾರ ಊರಿಗೆ ಇದೇ ರಸ್ತೆಯಲ್ಲಿ ಸಂಚರಿಸಬೇಕು. ಈ ಊರಿನ ಜನರ ಭವಣೆ ಹೇಳತೀರದು. ಬಸ್ಸೂ ಕೂಡಾ ಸಂಚರಿಸದಷ್ಟು ಹಾಳಾಗಿದ್ದು ಕೆಲ ಸಮಯ ಬಸ್ಸೂ ಈ ಊರಿಗೆ ಹೋಗದೇ ಇತ್ತು. ವೃದ್ದರು, ಖಾಯಿಲೆಯಿಂದ ಬಳಲುವವರು ಈ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸಲೂ ಹಿಂದೇಟು ಹಾಕುತ್ತಿದ್ದಾರೆ. ಆರಿಸಿಕಳಿಸಿದ ಜನಪ್ರತಿನಿಧಿಗಳು ಮಾಡಬೇಕಿತ್ತು. ನಾವು ಏನು ಮಾಡಬಹುದು. ನಮ್ಮ ಪ್ರತಿನಿಧಿಗಳಿರುವುದೇಕೆ ಎಂದು ಪ್ರಶ್ನಿಸುತ್ತಾರೆ ಬಳಗಾರದ ನಿವಾಸಿಗಳು. ಆದರೆ ಆಯ್ಕೆಯಾದವರನ್ನು ಎಚ್ಚರಿಸುವರ್ಯಾರು ಎನ್ನುವ ಪ್ರಶ್ನೆ ಉಳಿದುಕೊಂಡ ಕಾರಣ ರಸ್ತೆಯೂ ದುಸ್ಥಿತಿಯಲ್ಲೇ ಇದೆ.
ತಮ್ಮ ನೋವನ್ನು-ಅಳಲನ್ನು ಇದುವರೆಗೆ ಯಾರು ಕೇಳದ ಕಾರಣ ಬೇಸತ್ತು ಬಳಗಾರಿನ ಗ್ರಾಮಸ್ಥರು ಸಾಮೂಹಿಕವಾದ ನಿರ್ಧಾರ ತೆಗೆದುಕೊಂಡು ವಯಸ್ಸಾದವರು, ಮಹಿಳೆಯರು ಅನಾರೋಗ್ಯ ಪೀಡಿತರು ಎನ್ನದೇ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಸೆ.26 ರವಿವಾರ ಸಚಿವ ಶಿವರಾಮ ಹೆಬ್ಬಾರರ ಗಮನ ಸೆಳೆಯಲು ಸಚಿವರ ಮನೆಯ ಬಾಗಿಲಿಗೇ ಬಂದು ವಸ್ತು ಸ್ಥಿತಿಯ ಮನವರಿಕೆ ಮಾಡುವದಕ್ಕೆ ಮುಂದಾಗಿದ್ದಾರೆ.
ಬಳಗಾರ ದೇಹಳ್ಳಿ ಆನಗೋಡ ಬಿಸಗೋಡ ಭಾಗ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಆರ್ಥಿಕವಾಗಿ ಸಾಕಷ್ಟು ಮುಂದುವರೆದ ಪ್ರದೇಶವಾದರೂ ಈ ಭಾಗದಲ್ಲಿ ಜನರನ್ನು ಸಂಘಟಿಸಿ ರಸ್ತೆಯನ್ನು ಮಾಡಿಸಿಕೊಳ್ಳಲು ಮುಂದಾಗುವಂತಹ ನಾಯಕತ್ವ ಹೊಂದಿದವರು ನಮ್ಮ ಭಾಗದಲ್ಲಿ ಇಲ್ಲ. ಈ ಕಾರಣದಿಂದ ರಸ್ತೆ ಇದುವರೆಗೂ ಇದ್ದ ದುಸ್ಥಿತಿಯಲ್ಲೇ ಉಳಿದುಕೊಂಡಿದೆ. – ನಾರಾಯಣ ಭಟ್ಟ ಸ್ಥಳೀಕರು.
ಉತ್ತಮ ಪ್ರವಾಸಿ ತಾಣದ ರಸ್ತೆಯಾಗಿದ್ದರು ಇದಕ್ಕೇಕೆ ಮುಕ್ತಿ ನೀಡಿಲ್ಲ. ನಮ್ಮ ದೃಷ್ಠಿಯಲ್ಲಿ ಇದು ನರಕವೇ ಸರಿ. ರಸ್ತೆ ಎಂದು ಕರೆಯುವವನನ್ನು ಮೂರ್ಖ ಎನ್ನಬೇಕು. – ಬಸವಲಿಂಗಯ್ಯ ಹಿರೇಮಠ ಧಾರವಾಡ ಪ್ರವಾಸಿಗ.