ಕುಮಟಾ: ಡಾ. ಎಸ್. ರಾಧಾಕೃಷ್ಣನ್ ಅವರು ಶಿಕ್ಷಕರಾಗಿ, ಚಿಂತಕರಾಗಿ, ಯು.ಜಿ.ಸಿ.ಅಧ್ಯಕ್ಷರಾಗಿ, ಉಪರಾಷ್ಟ್ರಪತಿಗಳಾಗಿ, ರಾಷ್ಟ್ರಪತಿಗಳಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ, ಜನಮಾನಸದಲ್ಲಿ ನೆಲೆನಿಂತವರು. ಅವರ ಬದುಕು ನಮ್ಮೆಲ್ಲರಿಗೆ ಆದರ್ಶ. ಅವರ ಬದುಕಿನ ಆದರ್ಶಗಳನ್ನು ನಮ್ಮ ನಡೆ-ನುಡಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳ ಆಯೋಜನೆ ಅರ್ಥಪೂರ್ಣವೆನ್ನಿಸಿಕೊಳ್ಳುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು ಇದರ ನಿರೂಪಕರು ಹಾಗೂ ಭಾಷಣಕಾರ ಶಿಕ್ಷಕರ ಸಮಿತಿಯ ವತಿಯಿಂದ ಮೈಕ್ರೋಸಾಫ್ಟ್ ಟೀಮ್ಸ್ ಆ?ಯಪ್ನಲ್ಲಿ ಏರ್ಪಡಿಸಿದ್ದ ಡಾ.ರಾಧಾಕೃಷ್ಣನ್ ರವರ ಬದುಕು ಮತ್ತು ಸಂದೇಶ ಉಪನ್ಯಾಸ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ರೇಖಾ ನಾಯ್ಕ ಪುಷ್ಪಾರ್ಚನೆ ಮಾಡಿ, ಮಾತನಾಡಿ ಶಿಕ್ಷಕ ವೃತ್ತಿಗೆ ಅದರದ್ದೇ ಆದ ಗೌರವವಿದೆ. ಅದನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಅದನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಡಾ.ರಾಧಾಕೃಷ್ಣನ್ ಅವರು ನಮ್ಮ ಮೇಲಿಟ್ಟ ಅಭಿಮಾನ ಗೌರವಕ್ಕೆ ಧಕ್ಕೆ ಬರದಂತೆ ನಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳೋಣ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಸಿ.ನಾಗಣ್ಣನವರು ಡಾ.ರಾಧಾಕೃಷ್ಣನ್ ರವರ ಬದುಕಿನ ವಿವಿಧ ಮಜಲುಗಳನ್ನು ಶಿಕ್ಷಕರೆದುರು ತೆರೆದಿಟ್ಟರು. ಅವರ ಬದುಕಿನ ಬಹುತೇಕ ಘಟನೆಗಳು ಸಮಾಜಕ್ಕೊಂದು ಪಾಠವಾಗಿವೆ ಎಂದರು. ಭಾರತ ರತ್ನದಂತಹ ಉನ್ನತ ಪ್ರಶಸ್ತಿಯನ್ನು ಗಳಿಸಿ, ಎತ್ತರದ ಸ್ಥಾನದಲ್ಲಿದ್ದಾಗಲೂ ಜನರಿಗೆ ಹತ್ತಿರವಿದ್ದವರು ಅವರು ಎಂದ ಅವರು, ಉದ್ಘಾಟಕರು, ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರು ಪ್ರತಿಭಾ ಪರಿಷತ್ತಿನ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಷತ್ತಿನ ಪದಾಧಿಕಾರಿಗಳಾದ ಶಂಕರ ಕ್ಯಾಸ್ತಿ, ಮಹಂತೇಶ ಚೌಹಾನ್, ಚೆಲುವೇಗೌಡ , ಬಂಡೆ, ಸತೀಶ ಕಿವಡಿ, ಚಂದ್ರಶೇಖರ ನಾಯಕ, ಸುಮತಿ ಮುಂತಾದವರು ಉಪಸ್ಥಿತರಿದ್ದರು.
ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ.ಮಹೇಶರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಷತ್ತಿನ ಗುರಿ ಉದ್ಧೇಶಗಳು ಹಾಗೂ ಈವರೆಗೆ ಕೈಗೊಂಡ ಕಾರ್ಯಗಳು ಮತ್ತು ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಪರಿಷತ್ತಿನ ರಾಜ್ಯ ನಿರ್ದೇಶಕರೂ, ಸಮಿತಿಯ ಉಸ್ತುವಾರಿಗಳೂ ಆದ ಡಾ. ರವೀಂದ್ರ ಭಟ್ಟ ಸೂರಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಗಣೇಶ ಜೋಶಿ ತಾಂತ್ರಿಕ ನಿರ್ವಹಣೆಯೊಂದಿಗೆ ಸಹಕರಿಸಿದರು.
ವಿಜಯಲಕ್ಷ್ಮೀ ಪತ್ತಾರ ಪ್ರಾರ್ಥಿಸಿದರು. ಪವಿತ್ರಾ ಸಂತೋಷ ಸ್ವಾಗತಿಸಿದರು. ಸಮಿತಿಯ ಮುಖ್ಯಸ್ತೆ ಲಕ್ಷ್ಮೀಬಾಯಿ ಕಂಬಾರ ಪರಿಚಯಿಸಿದರು. ಜುಬೇದಾ ಬೇಗಂ ನಿರೂಪಿಸಿದರು. ಆಶಾ ವಂದಿಸಿದರು