ಬೆಂಗಳೂರು: ವಿಧಾನಸೌಧದಲ್ಲಿ ಮೀನುಗಾರಿಕೆ ಮತ್ತು ಒಳನಾಡು ಬಂದರು ಇಲಾಖೆ ಸಚಿವ ಎಸ್. ಅಂಗಾರಾ ಅವರ ಅಧ್ಯಕ್ಷತೆಯಲ್ಲಿ ಕರಾವಳಿ ತೀರದ ಮತ್ತು ಮೀನುಗಾರರ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಪಾಲ್ಗೊಂಡು ಚರ್ಚಿಸಿದರು.
ಸಮುದ್ರ ಕೊರೆತವನ್ನು ತಡೆಯಲು ಈಗ ಸಮುದ್ರ ಪ್ರತಿಬಂಧಕಕ್ಕಾಗಿ ಕಲ್ಲುಗಳನ್ನು ಹಾಕಲಾಗುತ್ತಿದ್ದು, ಅದರ ಬದಲಾಗಿ ಹೊಸ ತಂತ್ರಜ್ಞಾನ ಬಳಸಿ ಸಮುದ್ರ ಕೊರೆತ ತಡೆಯುವ ಕುರಿತು, ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವ ಮೀನುಗಾರರು ಗೋವಾ, ಕೇರಳ ರಾಜ್ಯಗಳಿಗೆ ಪ್ರವೇಶಿಸಿದಾಗ ಗಡಿ ಸಮಸ್ಯೆ ಅನುಭವಿಸುತ್ತಾರೆ. ಅದನ್ನು ತಪ್ಪಿಸಲು ಜಿಯೋ ಟ್ಯಾಗಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಮೀನುಗಾರರಿಗೆ ಮಾಹಿತಿ ಹೋಗುವ ಕುರಿತು ಕ್ರಮ ಕೈಗೊಳ್ಳವ ಕುರಿತು ಚರ್ಚಿಸಲಾಯಿತು.
ಬೋಟ್ಗಳಿಗೆ ದ್ವಿಮುಖ ಸಂವಹನ ಯಂತ್ರ ಅಳವಡಿಕೆ ಕುರಿತು ಚರ್ಚೆ ನಡೆಯಿತು. ಮತ್ತು ನಾಡದೋಣಿಗಳಿಗೆ ಸಮರ್ಪಕವಾಗಿ ಸೀಮೆ ಎಣ್ಣೆ ಪೂರೈಕೆಯ ಕುರಿತು ಹಾಗೂ ತುರ್ತು ಸಂದರ್ಭದಲ್ಲಿ ಮೀನುಗಾರರ ರಕ್ಷಣೆ ಮಾಡುವ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಉಡುಪಿ ಶಾಸಕರು, ಮೀನುಗಾರಿಕೆ ಮತ್ತು ಬಂದರು ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.