ಶಿರಸಿ: ನಿರುದ್ಯೋಗ ಸಮಸ್ಯೆ, ಖಾಸಗೀಕರಣ ಹಾಗು ತೈಲಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ, ಜಿಲ್ಲಾ ಯೂಥ್ ಕಾಂಗ್ರೆಸ್ ನ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿ, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ನಗರದ ಬಸ್ಟ್ಯಾಂಡ್ ಸರ್ಕಲ್ ನಲ್ಲಿ ಪ್ರತಿಭಟನಾ ಮೆರವಣಿಯನ್ನು ಹಮ್ಮಿಕೊಂಡಿದ್ದ ಯೂಥ್ ಕಾಂಗ್ರೆಸ್, ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಧಿಕ್ಕಾರ ಕೂಗುವ ಮೂಲಕ ಪ್ರಾರಂಭಿಸಿದರು.
ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ ಮಾತನಾಡಿ, ಲೀಟರ್ ಗೆ 50 ರೂ ಇದ್ದ ಪೆಟ್ರೋಲ್-ಡಿಸೇಲ್ ಇಂದು ಶತಕ ಬಾರಿಸಿದೆ. ಜೊತೆಗೆ ದಿನ ಬಳಕೆಯ ವಸ್ತುಗಳ ಬೆಲೆ ಏರಿಸುವುದರ ಮೂಲಕ ದೇಶದ ಜನರಿಗೆ ಮೋದಿ ಸರಕಾರ ಮೋಸ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಎಂದಿಗೂ ಬಡವರ ಪರವಾಗಿದೆ. ಆ ನಿಟ್ಟಿನಲ್ಲಿ ನಮ್ಮ ನಾಯಕರ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಕೆಪಿಸಿಸಿ ಶಿರಸಿ-ಸಿದ್ದಾಪುರ ಉಸ್ತುವಾರ ಸುಷ್ಮಾ ರಾಜಗೋಪಾಲ ಮಾತನಾಡಿ, ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಪೆಟ್ರೋಲ್ ಸೇರಿದಂತೆ ದಿನನಿತ್ಯ ಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ದೇವಸ್ಥಾನಗಳನ್ನು ಕೆಡವಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಲಾಗಿತ್ತೇ ವಿನಃ ಕೆಡಗಲಿಲ್ಲ ಎಂದರು.
ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಬಡವರ ಪರ ಎಂದಿದ್ದ ಮೋದಿ ಸರಕಾರ ಇಂದು ಬಡವರನ್ನು ಕಷ್ಟಕ್ಕೆ ತಂದು ನಿಲ್ಲಿಸಿದೆ. ಈ ಕೂಡಲೇ ತೈಲ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಬೇಕಂದು ಆಗ್ರಹಿಸಿದರು.
ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಬೆಲೆಏರಿಕೆ ಮತ್ತು ತೈಲಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದರು.
ಮೆರವಣಿಗೆಯಲ್ಲಿ ಯೂಥ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕುಮಾರ ಜೋಷಿ ಸೋಂದಾ, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅನಿಲ್ ಯಾದವ್, ಕಾರ್ಯದರ್ಶಿ ಸುರಭಿ ತ್ರಿವೇದಿ, ರಾಜ್ಯ ಯುವಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ, ಪ್ರಧಾನ ಕಾರ್ಯದರ್ಶಿ ಆರಿಫ್, ಕಾರ್ಯದರ್ಶಿ ದಿಲೀಪ್, ಅಬ್ದುಲ್ ದೇಸಾಯಿ, ದೀಪಿಕಾ ಹಾಗೂ ಸಯೇದ್ ಖಾಲಿದ ಅಹ್ಮದ್ ಇದ್ದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ದೀಪಕ್ ದೊಡ್ಡೂರು, ಜಿಪಂ ಸದಸ್ಯ ಜಿ ಎನ್ ಮುರೇಗಾರ್, ಜಿಲ್ಲಾ ಕಾರ್ಯದರ್ಶಿ ಸತೀಶ ನಾಯ್ಕ, ಪ್ರದೀಪ ಶೆಟ್ಟಿ, ರಮೇಶ ದುಭಾಷಿ, ಶ್ರೀಪಾದ ಹೆಗಡೆ ಕಡವೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.