ಶಿರಸಿ: ಮನುವಿಕಾಸ ಸಂಸ್ಥೆಯು ಕಳೆದ 18 ವರ್ಷಗಳಿಂದ ಹಲವು ಸಮಾಜಮುಖಿ ಜನಪರ ಕಾರ್ಯಚಟುವಟಿಕೆಗಳಾದ ನೆಲ, ಜಲ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸದ್ಭಳಕೆ, ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆ, ಸುಸ್ಥಿರ ಕೃಷಿ ಅಭಿವೃದ್ದಿಗಳ ಮೂಲಕ ತಳಮಟ್ಟದ ಜನಸಮುದಾಯವನ್ನು ತಲುಪಿದೆ.
ಕೋವಿಡ್-19ರ ತುರ್ತು ಸಂದರ್ಭದಲ್ಲಿ ಮನುವಿಕಾಸ ಸಂಸ್ಥೆಯು ದೇಶವ್ಯಾಪಿ ಲಾಕ್ಡೌನ್ ಸಮಯದಲ್ಲಿ ಜನಸಮುದಾಯವು ಬಹಳ ಸಂಕಷ್ಟದಲ್ಲಿರುವುದನ್ನು ಮನಗಂಡು ಆಶಾ ಕಾರ್ಯಕರ್ತೆಯರು, ಖಾಸಗಿ ಶಾಲಾ ಶಿಕ್ಷಕರು, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ, ಅಂಗವಿಕಲರಿಗೆ, ದಿನಗೂಲಿ ನೌಕರರಿಗೆ, ಅನಾಥರಿಗೆ, ದುರ್ಬಲರಿಗೆ ಸುಮಾರು 10,000 ಕ್ಕೂ ಹೆಚ್ಚು ಜನರಿಗೆ ಅಗತ್ಯ ದಿನಸಿ ಕಿಟ್ಗಳನ್ನು ವಿತರಿಸಿದೆ.
ಕೋವಿಡ್ ಆರೈಕೆ ಕೇಂದ್ರಗಳಿಗೆ ಆಗಮಿಸುವ ಸೋಂಕಿತರಿಗೆ, ಕೊರೋನಾ ಆರೈಕೆಯಲ್ಲಿ ಮುಂಚೂಣಿಯಲ್ಲಿರುವ ವೈದ್ಯಾಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಗತ್ಯವಿರುವ ಸಾಮಾಗ್ರಿಗಳಾದ ಆಕ್ಸಿಜನ್ಕಾನ್ಸ್ನ್ಟ್ರೇಟರ್, ಫೇಸ್ಶೀಲ್ಡ್, ಎನ್- 95 ಮಾಸ್ಕ್, ಡಿಸ್ಪೋಸೆಬಲ್ ಬೆಡ್ಶೀಟ್ ಮತ್ತು ಪಿಲ್ಲೋಕವರ್, ತ್ರೀ ಲೇಯರ್ ಮಾಸ್ಕ್, ಪಲ್ಸ್ ಆಕ್ಸಿಮೀಟರ್, ಇನ್ಫ್ರಾರೆಡ್ ಥರ್ಮಾಮೀಟರ್, ಡಿಜಿಟಲ್ ಥರ್ಮಾಮೀಟರ್, ಸ್ಯಾನಿಟೈಸರ್, ಇಂಡಕ್ಷನ್ ಕುಕ್ ಸ್ಟೋವ್ ಹಾಗೂ ಹ್ಯಾಂಡ್ಗ್ಲೌಸ್ಗಳನ್ನು ಮನುವಿಕಾಸ ಸಂಸ್ಥೆಯು ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಮತ್ತು ತಾಲೂಕು ಆಸ್ಪತ್ರೆಗಳಿಗೆ ವಿತರಿಸಿದೆ.
ಕೋವಿಡ್ -19ರ ಲಸಿಕಾ ಅಭಿಯಾನದ ಈ ಸಂದರ್ಭದಲ್ಲಿ ಜನಪರಕಾಳಜಿಯನ್ನು ಸದಾ ಗಮನದಲ್ಲಿಟ್ಟು ಕಾರ್ಯಪ್ರವೃತ್ತವಾಗಿರುವ ಮನುವಿಕಾಸ ಸಂಸ್ಥೆ ಈಗಾಗಲೇ 10 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವಂತಹ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 750ಕ್ಕೂ ಹೆಚ್ಚು ಜನರಿಗೆ ಲಸಿಕೆಯನ್ನು ಪಡೆಯಲು ಸಂಸ್ಥೆ ನೆರವಾಗಿದ್ದು.25 ಕ್ಕೂ ಹೆಚ್ಚು ವಾಹನಗಳನ್ನು ಉಚಿತವಾಗಿ ಜನಸಮುದಾಯದ ಆರೋಗ್ಯದ ಹಿತದೃಷ್ಠಿಯನ್ನಿಟ್ಟು ಮನುವಿಕಾಸ ಸಮಾಜಪರ ಕೆಲಸಕ್ಕೆ ಮುಂದಾಗಿದೆ ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ಈಗ ಇದರ ಮುಂದುವರೆದ ಭಾಗವಾಗಿ ಸರ್ಕಾರದಿಂದ ನಡೆಸುತ್ತಿರುವ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಂಸ್ಥೆಯು ಕೈ ಜೋಡಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ದಾಪುರ, ತಾಲೂಕುಗಳಲ್ಲಿರುವ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸುವ ಕೋವಿಡ್ ಲಸಿಕಾ ಅಭಿಯಾನಕ್ಕೆ ಉಚಿತ ವಾಹನ ಸೇವೆ ಒದಗಿಸುವ ಕಾರ್ಯಕ್ಕೆ ಮುಂದಾಗಿದೆ. ಬಸ್ ಗಳ ಸಂಚಾರವಿಲ್ಲದ ಹಾಗೂ ಕುಗ್ರಾಮಗಳ ಜನರಿಗೂ ಸಹ ಲಸಿಕೆ ದೊರಕಿಸುವ ಉದ್ದೇಶದಿಂದ ಹಳ್ಳಿಗಳಿಗೆ ತೆರಳಿ ಜನರನ್ನು ಲಸಿಕಾ ಕೇಂದ್ರಕ್ಕೆ ಕರೆತಂದು, ಲಸಿಕೆ ಹಾಕಿಸಿ ಮತ್ತೆ ಅವರ ಊರುಗಳಿಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅಷ್ಟೇ ಅಲ್ಲದೇ ವೈದ್ಯಕೀಯ ಸಿಬ್ಬಂದಿಗಳ ಓಡಾಟಕ್ಕೂ ಸಹ ವಾಹನ ವ್ಯವಸ್ಥೆ ಕಲ್ಪಿಸಿದ್ದು ನಿರ್ದಿಷ್ಟ ಪ್ರದೇಶಗಳಿಗೆ ಕರೆದೊಯ್ದು ಲಸಿಕಾ ಅಭಿಯಾನ ನಡೆಸಲು ನೆರವಾಗುತ್ತಿದೆ. ಇದರಿಂದ ಮೊದಲನೇ ಡೋಸ್ ಇನ್ನೂ ಸಹ ಪಡೆದಿರದ ಅದೆಷ್ಟೋ ಕುಟುಂಬಗಳಿಗೆ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದೆ ಹಾಗೂ ಲಸಿಕಾ ಅಭಿಯಾನವೇ ಆಗಿರದ ಹಳ್ಳಿಗಳಲ್ಲೂ ಲಸಿಕಾ ಅಭಿಯಾನ ನಡೆಸಲು ಸಹಾಯಕವಾಗಿದೆ. ವಿಶೇಷ ಚೇತನರು, ಅಂಧರು ಹಾಗೂ ಇನ್ನೂ ಅನೇಕ ರೀತಿಯ ಸಂಕಷ್ಟದಲ್ಲಿರುವ ಜನರಿಗೆ ಸಹಾಯಕವಾಗಿದೆ.
ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತುರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಹೇಳಿದ್ದಾರೆ.
ಮನುವಿಕಾಸ ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಜನರಿಂದ ಅಮೋಘ ಬೆಂಬಲ ವ್ಯಕ್ತವಾಗಿದೆ, ಅಲ್ಲದೇ ಹಿರಿಯ ನಾಗರಿಕರಿಂದ ಪ್ರಶಂಸೆಗಳ ಮಹಾಪೂರವೆ ಸಂಸ್ಥೆಗೆ ದೊರಕುತ್ತಿದೆ. ಸಾಮಾಜಿಕ ಕಳಕಳಿಯ ಧ್ಯೇಯವನ್ನು ಮೂಲ ಮಂತ್ರವನ್ನಾಗಿಸಿಕೊಂಡು ಮನುವಿಕಾಸ ಕಾರ್ಯೊನ್ಮುಖವಾಗಿದೆ.