ಕುಮಟಾ: ಸಕಾಲ ಯೋಜನೆಯಡಿ ಬರುವ ಪಿಂಚಣಿ ಅದಾಲತ್ ಸರಕಾರದ ಬಹುದೊಡ್ಡ ಯೋಜನೆಯಾಗಿದೆಯೆಂದು ತಹಶೀಲ್ದಾರ ವಿವೇಕ ಶೆಣ್ವಿ ಹೇಳಿದರು.
ಮಿರ್ಜಾನ ನಾಡಕಛೇರಿಯಲ್ಲಿ ಉಪವಿಭಾಗಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು,” ಸರಕಾರ 56 ವಿವಿಧ ಯೋಜನೆಗಳನ್ನು ಸಕಾಲ ಮಿಷನ್ ಯೋಜನೆಯಲ್ಲಿ ಕಂದಾಯ ಇಲಾಖೆ ಮೂಲಕ ಜನತೆಗೆ ತಲುಪಿಸುತ್ತದೆ. ಪಿಂಚಣಿ ಹಣ ತಮ್ಮ ಆಧಾರ ಅಪ್ಡೆಟ್ ಆಗಿರುವ ಬ್ಯಾಂಕ ಖಾತೆಗೆ ಜಮಾ ಆಗಿರುವದರಿಂದ ಕೆಲವೊಮ್ಮೆ ತಂತ್ರಾಂಶಗಳ ದೋಷದಿಂದ ಪಿಂಚಣಿ ಸಿಗದೇ ಇರುವ ಸಾಧ್ಯತೆಗಳಿರುತ್ತವೆ. ಅಂತಹ ಸಮಯದಲ್ಲಿ ಪಿಂಚಣಿ ಅದಾಲತ್ ಸಹಾಯಕಾರಿಯಾಗುತ್ತದೆ. ಜನತೆಯ ಆಗುಹೋಗು ತೊಂದರೆ ತೊಡಕುಗಳ ನಿವಾರಿಸುವದೇ ಈ ಕಾರ್ಯಕ್ರಮದ ಧ್ಯೇಯವಾಗಿದ್ದು ಇದರ ಸಂಪೂರ್ಣ ಪ್ರಯೋಜನ ಪಡೆದಾಗ ಕಂದಾಯ ಇಲಾಖೆಯ ಉದ್ದೇಶ ಸಫಲತೆ ಪಡೆಯುತ್ತದೆ. ಹಾಗೆಯೇ ನಮ್ಮ ಇಲಾಖೆಯಿಂದ ಕಂದಾಯ ಅದಾಲತ ಸಹ ನಡೆಯುತ್ತಿದ್ದು ರಿಕಾರ್ಡ್ ದುರಸ್ಥಿತಿ, ಹೆಸರು ತಿದ್ದುಪಡಿ ಮಾಡಲಾಗುತ್ತದೆ. ರೈತರು 6 ತಿಂಗಳಿಗೊಮ್ಮೆ ಪಹಣಿ ಪತ್ರಿಕೆ ಪರಿಶೀಲಿಸಿ ಬೆಳೆ ಎಂಟ್ರಿ ಖಾತೆಯಲ್ಲಿರುವ ಹೆಸರು ಪರಿಶೀಲಸಬೇಕು ದೋಷ ಕಂಡು ಬಂದಲ್ಲಿ ಇಲಾಖೆಯಲ್ಲಿ ಅರ್ಜಿ ನೀಡಿ ಸರಿಪಡಿಸುವ ಅವಕಾಶವಿದೆಯೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಧಿಕಾರಿ ರಾಹುಲ್ ರತನ ಪಾಂಡೆ ಮಾತನಾಡಿ,” ಫಲಾನುಭವಿಗೆ ಪಿಂಚಣಿ ಮಂಜೂರಿ ಆದೇಶ ಪತ್ರ ವಿತರಿಸಿ ಕೋವಿಡ ಕಾರಣದಿಂದ ನಡೆಯಬೇಕಿದ್ದ ಪಿಂಚಣಿ ಅದಾಲತ್ ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ ಬಹಳಷ್ಟು ಫಲಾನುಭವಿಗಳಿಗೆ ತೊಂದರೆಯಾಗಿದೆ ಮುಂದಿನ ದಿನಗಳಲ್ಲಿ ಪಿಂಚಣಿ ಅದಾಲತ್ ನಡೆಸಿ ಎಲ್ಲ ಫಲಾನುಭವಿಗಳಿಗೆ ಆದಷ್ಟು ಶೀಘ್ರ ಪಿಂಚಣಿ ದೊರಕಿಸಿಕೊಡುವ ಕೆಲಸ ಮಾಡುತ್ತೇವೆ ” ಎಂದು ಭರವಸೆ ನೀಡಿದರು.
ಗ್ರೇಡ್ 2 ತಹಶೀಲ್ದಾರ ಅಶೋಕ ಭಟ್ಟ ಮಾತನಾಡಿ,” ಸರಕಾರ ಜನತೆಗೆ ತಲುಪಿಸುವ ಯೋಜನೆ ಇದಾಗಿದ್ದು ತಹಶೀಲ್ದಾರ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸೇರಿದಂತೆ ಎಲ್ಲರನ್ನೂ ಒಂದೇ ಸೂರಿನಡಿ ತರುವ ಪ್ರಯತ್ನ ಇದಾಗಿದ್ದು ಎಲ್ಲ ಯೋಜನೆಗಳಿಗೂ ಪರಿಹಾರ ಪಡೆಯಬಹುದಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಸ್ಥಳದಲ್ಲೇ 10 ಫಲಾನುಭವಿಗಳಿಗೆ ಪಿಂಚಣಿ ಮಂಜೂರಿ ಆದೇಶ ಪತ್ರ ನೀಡಲಾಯಿತು. ಹಾಗೆಯೇ 3 ಅರ್ಜಿಗಳಿಗೆ ಎರಡು ದಿನಗಳಲ್ಲಿ ಆದೇಶ ಪತ್ರ ನೀಡುವುದಾಗಿ ತಿಳಿಸಲಾಯಿತು. ಸಭೆಯಲ್ಲಿ ತಹಶೀಲ್ದಾರ ಗ್ರೇಡ್ 2 ಸತೀಶ ಗೌಡ, ಮಿರ್ಜಾನ ನಾಡಕಛೇರಿ ಉಪತಹಶೀಲ್ದಾರ ಪುಷ್ಪಾ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯೋಗೇಶ ಕೋಡ್ಕಣಿ ನಿರ್ವಹಿಸಿದರು.