ಶಿರಸಿ: ಅರಣ್ಯ ಹಕ್ಕು ಅಧಿನಿಯಮದಡಿಯಲ್ಲಿ ಉಪ-ವಿಭಾಗ ಮಟ್ಟದ ಮತ್ತು ಜಿಲ್ಲಾ-ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿನ ನಾಮನಿರ್ಧೇಶನ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯವಾಸಿಗಳ ಅರ್ಜಿಗಳ ಪುನರ್ ಪರಿಶಿಲಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ಬೆಂಗಳೂರು ಅವರು ಹೊರಡಿಸಿರುವ ಆದೇಶ ಕಾನೂನು ಬಾಹಿರವಾಗಿರುವುದರಿಂದ ಸದ್ರಿ ಆದೇಶವನ್ನ ಸ್ಥಗಿತಗೊಳಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಆಕ್ಷೇಪ ಸಲ್ಲಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ರಾಜ್ಯ ಮಟ್ಟದ ಅರಣ್ಯ ಹಕ್ಕು ನಿಯಂತ್ರಣ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯಕಾರ್ಯದರ್ಶಿ, ಕರ್ನಾಟಕ ಸರಕಾರ ಬೆಂಗಳೂರು ಇವರ ಕಛೇರಿಗೆ ಇಂದು ಲಿಖಿತ ಮೇಲ್ಮನವಿ ಸಲ್ಲಿಸಿದರು.
ನಿರ್ದೇಶಕರವರ ಕಛೇರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ಬೆಂಗಳೂರು ಅವರು ಅಗಸ್ಟ 31, 2021 ರಂದು ಆದೇಶ ನೀಡಿ ಅರಣ್ಯ ಅತಿಕ್ರಮಣದಾರರ ಅರ್ಜಿ ವಿಲೇವಾರಿಯಲ್ಲಿ ಜಿಲ್ಲಾ ಮತ್ತು ತಾಲೂಕಾ ಪಂಚಾಯತ ಇಂದ ನಾಮನಿರ್ದೇಶನ ಸದಸ್ಯರ ಅನುಪಸ್ಥಿತಿಯಲ್ಲಿ ಸಭೆ ನಡೆಸಿ ಅರ್ಜಿ ವಿಚಾರಣೆ ಮಾಡಲು ಆದೇಶ ನೀಡಿದ್ದು ಹೋರಾಟಗಾರರ ವೇದಿಕೆಯು ಈ ತಕರಾರನ್ನು ಸಲ್ಲಿಸಲು ಪ್ರಮುಖ ಕಾರಣವಾಗಿದೆ.
ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ರಾಜ್ಯ ಮಟ್ಟದ ನಿಯಂತ್ರಣ ಸಮಿತಿಗೆ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುವುದರಿಂದ ಹೋರಾಟಗಾರರ ವೇದಿಕೆಯು ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ಧೇಶನದ ಆದೇಶದ ಮೌಲ್ಯತೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವುದು ವಿಶೇಷವಾಗಿದೆ.
ಬುಡಕಟ್ಟು ಇಲಾಖೆ ನಿರ್ದೇಶನ ಕಾನೂನು ಬಾಹಿರ:
ಮೇಲ್ಮನವಿಯಲ್ಲಿ ಅರಣ್ಯ ಹಕ್ಕು ಕಾಯಿದೆಯ ಕಲಂ 5 ಮತ್ತು 7 ರಲ್ಲಿ ಉಪ-ವಿಭಾಗ ಮತ್ತು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾದ ಕನಿಷ್ಟ 3 ಸದಸ್ಯರು ಇರತಕ್ಕದೆಂದು ಉಲ್ಲೇಖವಿದ್ದು, ಅದರಂತೆ ಅರಣ್ಯ ಹಕ್ಕು ಕಾಯಿದೆ ಕಲಂ 12 ರಂತೆ ಕೇಂದ್ರ ಸರಕಾರಕ್ಕೆ ಮಾತ್ರ ನಿರ್ದೇಶನ ನೀಡಲು ಅವಕಾಶವಿದ್ದು ಇನ್ಯಾವುದೇ ಅಧಿಕಾರಿ ರಾಜ್ಯ ಸರಕಾರಕ್ಕೆ ನಿರ್ಧೇಶನ ಅಥವಾ ಸೂಚನೆ ನೀಡಲು ಬರಲಾರದೆಂದು ಪ್ರಸ್ತಾಪಿಸಿದ್ದು, ರಾಜ್ಯ ಮಟ್ಟದ ನಿಯಂತ್ರಣ ಸಮಿತಿಯ ಅರಣ್ಯ ಹಕ್ಕು ಕಾಯಿದೆ ಸಮಿತಿಯಲ್ಲಿ ನಿರ್ಣಯಿಸದೇ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ ಏಕಾಎಕಿಯಾಗಿ ನೀಡಿದ ಆದೇಶ ಕಾನೂನು ಬಾಹಿರವಾಗಿರುವುದರಿಂದ ಸದ್ರಿ ಆದೇಶವನ್ನು ಸ್ಥಗಿತಗೊಳಿಸಬೇಕು. ಪೂರ್ಣ ಪ್ರಮಾಣದ ಅರಣ್ಯ ಹಕ್ಕು ಸಮಿತಿ ಅಸ್ತಿತ್ವವಿಲ್ಲದೇ, ಯಾವ ಕಾರಣಕ್ಕೂ ಮಂಜೂರಿ ಪ್ರಕ್ರೀಯೆ ಜರುಗಿಸಲು ಬರಲಾರದು ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಜ್ಯ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ತಿಳಿಸಿದ್ದಾರೆ